
ಬೆಂಗಳೂರು, ಜುಲೈ 01: ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ಗೆಲ್ಲುವ ನೆಚ್ಚಿನ ತಂಡವೆನಿಸಿರುವ ಅತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಪಂದ್ಯದಲ್ಲಿ ಸೋಲು ಗೆಲುವಿನ ಲೆಕ್ಕಾಚಾರದ ಜೊತೆಗೆ ಹೆಚ್ಚು ಚರ್ಚೆಯಾಗಿದ್ದು, ಕೊಹ್ಲಿ ಪಡೆ ಧರಿಸಿದ್ದ ಕಿತ್ತಳೆ ಜರ್ಸಿ ಬಗ್ಗೆ ಅಪಸ್ವರ ಮತ್ತೆ ಕೇಳಿ ಬಂದಿದೆ.
ವಿಶ್ವಕಪ್ ನಲ್ಲಿ ಸತತ ಗೆಲುವಿನೊಂದಿಗೆ ಸೆಮಿಫೈನಲ್ ಹಂತಕ್ಕೇರಲು ಸಜ್ಜಾಗಿದ್ದ ಭಾರತ ತಂಡಕ್ಕೆ ಇಂಗ್ಲೆಂಡ್ ವಿರುದ್ಧ ಸೋಲು ಎಚ್ಚರಿಕೆ ಗಂಟೆಯಾಗಿದೆ. ಈ ವಿಶ್ವಕಪ್ ನಲ್ಲಿ ಟೀಂ ಇಂಡಿಯಾಕ್ಕೆ ಇದು ಮೊದಲ ಸೋಲಾಗಿದೆ.
ಈ ನಡುವೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಸೋಲಿಗೆ ಜರ್ಸಿ ಕಾರಣ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನು ಬೇಕಾದರೆ ಮೂಢನಂಬಿಕೆ ಎಂದಾದರೂ ಕರೆಯಿರಿ. ಈ ವಿಶ್ವಕಪ್ ನಲ್ಲಿ ಭಾರತದ ಗೆಲುವಿನ ಹಾದಿಯನ್ನು ಕೊನೆಗೊಳಿಸಿದ್ದು, ಈ ಕೇಸರಿ ಜರ್ಸಿ ಎಂದು ನಾನು ಹೇಳುತ್ತೇನೆ ಎಂದು ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.
ಟೀಂ ಇಂಡಿಯಾ ಆಟಗಾರರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬ್ಲೂ ಬಣ್ಣದ ಜೆರ್ಸಿ ಬದಲಿಗೆ ಕೇಸರಿ ಬಣ್ಣದ ಡ್ರೆಸ್ ನಲ್ಲಿ ಕಣಕ್ಕಿಳಿದಿದ್ದರು. ಇಂಗ್ಲೆಂಡ್ ವಿರುದ್ಧದ ಸೋಲು ಮತ್ತು ಜೆರ್ಸಿ ಈಗ ರಾಜಕೀಯಕ್ಕೆ ತಿರುಗಿದೆ ಎನ್ನಲಾಗಿದೆ.
ಐಸಿಸಿ ನಿಯಮದ ಪ್ರಕಾರ, ಪ್ರತಿ ತಂಡಗಳು ಎರಡು ಮಾದರಿ ಜರ್ಸಿಗಳನ್ನು ಅಧಿಕೃತವಾಗಿ ಸಲ್ಲಿಸಿವೆ. ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಈಗಾಗಲೇ ಬದಲಿ ಜರ್ಸಿಯನ್ನು ಪ್ರದರ್ಶಿಸಿವೆ. ಈ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಆಟಗಾರರ ಜರ್ಸಿ ಬಣ್ಣ ಬದಲಾಗಲಿದೆ. 1992ರಿಂದ ನೀಲಿ ಬಣ್ಣದ ದಿರಿಸಿನಲ್ಲಿ ಆಡುತ್ತಿರುವ ಭಾರತ ಈ ಪಂದ್ಯದಲ್ಲಿ ಕಿತ್ತಳೆ- ನೀಲಿ ಮಿಶ್ರಿತ ಹೊಸ ಜರ್ಸಿತೊಟ್ಟು ಕಣಕ್ಕಿಳಿದಿದ್ದರು.
ಒಂದೇ ಬಣ್ಣದ ಶೇಡ್ ಹೊಂದಿರುವ ತಂಡಗಳು ಎದುರಾದಾಗ ಒಂದು ತಂಡ ಮೂಲ ಬಣ್ಣದ ದಿರಿಸನ್ನು ತೊಟ್ಟರೆ ಎದುರಾಳಿ ತಂಡ ಬದಲಿ ಬಣ್ಣದ ಜರ್ಸಿ ತೊಟ್ಟು ಕಣಕ್ಕಿಳಿಯುವುದು ಫುಟ್ಬಾಲ್ ಲೋಕದಲ್ಲಿ ಸಾಮಾನ್ಯ ಸಂಗತಿ. ಈಗ ವಿಶ್ವಕಪ್ ಕ್ರಿಕೆಟ್ ನಲ್ಲಿ ಐಪಿಎಲ್ ಮಾದರಿಯಲ್ಲಿ ಹೋಮ್, ಅವೇ ಪಂದ್ಯಗಳೆಂದು ಪ್ರತ್ಯೇಕಿಸಲಾಗಿದೆ. away ಪಂದ್ಯಗಳಿಗೆ ಹೊಸ ಮಾದರಿ, ಹೊಸ ಬಣ್ಣದ ಮಿಶ್ರಿತ ಜರ್ಸಿ ತೊಡುವುದು ವಾಡಿಕೆ.