ಭಾರತ ತಂಡದ ಸ್ಟಾರ್ ವಿಕೆಟ್ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರು ಆಸ್ಟ್ರೇಲಿಯಾದಲ್ಲಿ ಸತತವಾಗಿ ಬ್ಯಾಟಿಂಗ್ನಲ್ಲಿ ಫೇಲ್ ಆಗಿದ್ದಾರೆ. ಪರ್ತ್, ಅಡಿಲೇಡ್ ಮತ್ತು ಬ್ರಿಸ್ಬೇನ್ ನಂತರ, ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿಯೂ ಪಂತ್ ರನ್ ಗಳಿಸುವಲ್ಲಿ ಹಿಂದೆ ಉಳಿದಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಪಂತ್ ಅವರಿಂದ ಬಿಗ್ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇದ್ದರು. ಆದರೆ ಪಂತ್ ವಿಕೆಟ್ ಬೀಳುತ್ತಿದ್ದಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಬೇಸರಗೊಂಡರೆ, ಟೀಮ್ ಇಂಡಿಯಾ ಮಾಜಿ ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್ ಗರಂ ಆಗಿದ್ದಾರೆ.
ಈ ಬಾರಿಯ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ರಿಷಬ್ ಪಂತ್ ಬ್ಯಾಟ್ನಿಂದ ಇನ್ನೂ ಯಾವುದೇ ಬಿಗ್ ಇನ್ನಿಂಗ್ಸ್ ಬಂದಿಲ್ಲ. ಬೇಡದ ಶಾಟ್ಗಳನ್ನು ಆಡುವ ಮೂಲಕ ಪಂತ್ ಹೆಚ್ಚು ಟೀಕೆಗಳನ್ನು ಎದುರಿಸುವಂತಾಗಿದೆ. ಇದೀಗ ಸುನಿಲ್ ಗವಾಸ್ಕರ್ ಅವರು, ಕ್ರಿಸ್ಮಸ್ ನಂತರ ಆಸ್ಟ್ರೇಲಿಯಾ ತಂಡಕ್ಕೆ ತಮ್ಮ ವಿಕೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಪಂತ್ ಅವರನ್ನು ಕಟುವಾಗಿ ಟೀಕಿಸಿದ್ದಾರೆ.

ಭಾರತದ ಮೊದಲ ಇನಿಂಗ್ಸ್ನ 56ನೇ ಓವರ್ನಲ್ಲಿ ಸ್ಕಾಟ್ ಬೋಲ್ಯಾಂಡ್ ಅವರ ಮೂರನೇ ಎಸೆತದಲ್ಲಿ ರಿಷಬ್ ಪಂತ್ ಒಂದು ಲ್ಯಾಪ್ ಶಾಟ್ ಹೊಡೆಯಲು ಪ್ರಯತ್ನಿಸಿ ಔಟಾದರು . ರಿಷಬ್ ಪಂತ್ ತಮ್ಮ ತಂಡದ ಕಷ್ಟದ ಪರಿಸ್ಥಿತಿಯನ್ನು ಲೆಕ್ಕಿಸದೆ ಮತ್ತೊಮ್ಮೆ ಲ್ಯಾಪ್ ಶಾಟ್ಗೆ ಪ್ರಯತ್ನಿಸಿದರು. ಆದರೆ ಹೆಚ್ಚುವರಿ ಬೌನ್ಸ್ನಿಂದಾಗಿ ಚೆಂಡು ಬ್ಯಾಟ್ನ ಮೇಲ್ಭಾಗ ತಗುಲಿ ನಾಥನ್ ಲಿಯಾನ್ ಅವರ ಕೈಗೆ ಹೋಯಿತು. ಕ್ಯಾಚ್ ಹಿಡಯುವಲ್ಲಿ ಲಿಯಾನ್ ಯಾವುದೇ ತಪ್ಪು ಮಾಡಲಿಲ್ಲ. ಈ ವೇಳೆ ಕಾಮೆಂಟರಿ ಮಾಡುತ್ತಿದ್ದ ಸುನೀಲ್ ಗವಾಸ್ಕರ್ ಕೋಪಗೊಂಡು ರಿಷಬ್ ಪಂತ್ ಅವರನ್ನು ಲೈವ್ ಕಾಮೆಂಟರಿಯಲ್ಲಿ ನಿಂದಿಸಿದ್ದಾರೆ.
ಲೈವ್ ಕಾಮೆಂಟರಿ ಮಾಡುತ್ತಿದ್ದ ಸುನೀಲ್ ಗವಾಸ್ಕರ್, ಸ್ಟುಪಿಡ್, ಸ್ಟುಪಿಡ್, ಸ್ಟುಪಿಡ್, ಅಲ್ಲಿ ಫೀಲ್ಡರ್ ಇದ್ದರೂ, ನೀನು ಇಂತಹ ಶಾಟ್ ಆಡಲು ಮುಂದಾಗಿದ್ದೀಯ. ಈ ಹಿಂದಿನ ಚೆಂಡನ್ನು ಅದೇ ರೀತಿ ಹೊಡೆಯುವ ಪ್ರಯತ್ನದಲ್ಲಿ ನೀನು ವಿಫಲನಾಗಿದ್ದೆ. ಈಗ ನೀನು ಎಲ್ಲಿ ಔಟಾಗಿದ್ದೀಯ ಎಂಬುದನ್ನು ನೋಡು. ನೀನು ಡೀಪ್ ಥರ್ಡ್ ಮನ್ ನಲ್ಲಿ ಕ್ಯಾಚ್ ಔಟಾಗಿದ್ದೀಯ. ಅದರರ್ಥ ನಿನ್ನ ವಿಕೆಟ್ ಅನ್ನು ಬಿಟ್ಟು ಕೊಟ್ಟಿದ್ದೀಯ. ಅದರಲ್ಲೂ ಭಾರತ ಇದ್ದಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ನೀನು ಹೀಗೆ ಮಾಡಬಾರದಿತ್ತು. ನೀನು ಪಂದ್ಯದ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು. ಅದು ನಿನ್ನ ಸಹಜ ಆಟ ಎಂದು ಹೇಳಲು ಬರುವುದಿಲ್ಲ. ಅದು ನಿನ್ನ ಸಹಜ ಆಟವಲ್ಲ ಎಂದು ಹೇಳಲು ನನಗೆ ಬೇಸರವಾಗುತ್ತಿದೆ ಎಂದು ಪಂತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.