ಮೆಲ್ಬೋರ್ನ್ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಬಾರ್ಡರ್-ಗವಾಸ್ಕರ್ ಟ್ರೋಫಿಯ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಇದೀಗ ಸರಣಿಯನ್ನು ಉಳಿಸಿಕೊಳ್ಳಬೇಕಾದರೆ ಜನವರಿ 3 ರಿಂದ ಆರಂಭವಾಗಲಿರುವ ಸಿಡ್ನಿ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಗೆಲ್ಲಲೇಬೇಕಿದೆ. ಮೆಲ್ಬೋರ್ನ್ನಲ್ಲಿ ನಡೆದ ಪಂದ್ಯದ ಐದನೇ ದಿನದಂದು ಯಶಸ್ವಿ ಜೈಸ್ವಾಲ್ ವಿವಾದಾತ್ಮಕ ಔಟ್ ಸಾಕಷ್ಟು ಸುದ್ದು ಮಾಡುತ್ತಿದೆ. ಇದೀಗ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮೆಲ್ಬೋರ್ನ್ ಟೆಸ್ಟ್ ಪಂದ್ಯದ ಕೊನೆಯ ದಿನ ಸ್ನಿಕೋಮೀಟರ್ನಲ್ಲಿ ಸ್ಪೈಕ್ ಕಾಣದಿದ್ದರೂ ಅಮೋಘ ಬ್ಯಾಟಿಂಗ್ ಮಾಡುತ್ತಿದ್ದ ಯಶಸ್ವಿ ಜೈಸ್ವಾಲ್ ಅವರನ್ನು ಅಂಪೈರ್ ಔಟ್ ಎಂದು ಘೋಷಿಸಿದರು. ಇದಾದ ನಂತರ ಅಂಪೈರ್ ತೀರ್ಮಾನಕ್ಕೆ ಹಲವು ಅಸಮಾಧಾನ ವ್ಯಕ್ತಪಡಿಸಿದರು. ಮತ್ತೊಂದೆಡೆ ಮೆಲ್ಬೋರ್ನ್ ಟೆಸ್ಟ್ ಸೋಲಿನ ನಂತರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಯಶಸ್ವಿ ಜೈಸ್ವಾಲ್ ವಿವಾದಾತ್ಮಕ ಔಟ್ ಬಗ್ಗೆ ರೋಹಿತ್ ಶರ್ಮಾ ಮಾತನಾಡಿದ್ದಾರೆ.

ಜೈಸ್ವಾಲ್ ಔಟಾಗಿರುವುದು ದುರದೃಷ್ಟಕರ ಎಂದು ನಾನು ಭಾವಿಸುತ್ತೇನೆ. ತಂತ್ರಜ್ಞಾನವು 100 ಪ್ರತಿಶತ ಪರಿಪೂರ್ಣವಲ್ಲ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ಅಂಪೈರ್ ತೀರ್ಮಾನ ದುರದೃಷ್ಟಕರವಾಗಿತ್ತು. ಮೊದಲು ಚೆಂಡು ಬ್ಯಾಟ್ಗೆ ತಗುಲಿರಲಿಲ್ಲ ಎಂದು ತೋರಿತು. ಆದರೆ ಇನ್ನೂ ನಾವು ಅದರ ಬಗ್ಗೆ ಹೆಚ್ಚು ಗಮನ ಹರಿಸಲು ಬಯಸುವುದಿಲ್ಲ ಎಂದು ಯಶಸ್ವಿ ಜೈಸ್ವಾಲ್ ವಿವಾದಾತ್ಮಕ ಔಟ್ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದಾರೆ.
ಮೆಲ್ಬೋರ್ನ್ ಟೆಸ್ಟ್ ಪಂದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿತ್ತು. ಅದರಲ್ಲೂ ಎರಡನೇ ಇನ್ನಿಂಗ್ಸ್ ಭಾರತ ಗೆಲ್ಲತ್ತಾ? ಅಥವಾ ಡ್ರಾ ಮಾಡಿಕೊಳ್ಳುತ್ತಾ? ಎಂಬುದು ಎಲ್ಲರಲ್ಲೂ ರೋಚಕತೆ ಹುಟ್ಟಿಸಿತ್ತು. ಭಾರತದ ಪರ ಟಾಪ್ ಆರ್ಡರ್ ಬ್ಯಾಟರ್ಸ್ ನೆಲ ಕಚ್ಚಿ ನಿಂತು ಆಡಲಿಲ್ಲ. ಹೀಗಾಗಿ ಭಾರತ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿತ್ತು. ಆದರೆ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಬಿಗ್ ಇನ್ನಿಂಗ್ಸ್ ಆಡಿದ್ದ ಯುವ ಸ್ಪೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ಎರಡನೇ ಇನಿಂಗ್ಸ್ನಲ್ಲೂ ಬಿರುಸಿನ ಬ್ಯಾಟಿಂಗ್ ಮಾಡಿದರು. ಆದರೆ ಇನಿಂಗ್ಸ್ನ 70ನೇ ಓವರ್ನಲ್ಲಿ ಪ್ಯಾಟ್ ಕಮ್ಮಿನ್ಸ್ ಅವರ ಐದನೇ ಎಸೆತದಲ್ಲಿ ಲೆಗ್ ಸೈಡ್ನಲ್ಲಿ ಹೋಗುತ್ತಿದ್ದ ಚೆಂಡನ್ನು ಬಿಗ್ ಹಿಟ್ ಬಾರಿಸುವ ಪ್ರಯತ್ನದಲ್ಲಿ ವಿಫಲವಾದರು. ಆದರೆ ಚೆಂಡು ವಿಕೆಟ್ ಕೀಪರ್ ಕೈ ಸೇರಿತು.
ಈ ಸಂದರ್ಭದಲ್ಲಿ ಕಮ್ಮಿನ್ಸ್ ಔಟ್ ಗಾಗಿ ಅಂಪೈರ್ ಬಳಿ ಮನವಿ ಮಾಡಿದರು. ಆದರೆ ಆನ್ ಫೀಲ್ಡ್ ಅಂಪೈರ್ ನಾಟೌಟ್ ನೀಡಿದರು. ಪ್ಯಾಟ್ ಕಮಿನ್ಸ್ ಹೆಚ್ಚು ಯೋಚನೆ ಮಾಡದೆ, ಡಿಆರ್ಎಸ್ ಮೋರೆ ಹೋದರು. ಈ ವೇಳೆ ಅವರ ಯಾವುದೇ ಚಲನೆಯನ್ನು ನೋಡದಿದ್ದರೂ, ಅವರ ಬ್ಯಾಟ್ ಅಥವಾ ಗ್ಲೌಸ್ಗೆ ಬಡಿದ ನಂತರ ಚೆಂಡು ದಿಕ್ಕನ್ನು ಬದಲಿಸಿದ ಕಾರಣ ಜೈಸ್ವಾಲ್ ಅವರನ್ನು ಔಟ್ ಎಂದು ಘೋಷಿಸಿದರು.