ಟೀಮ್ ಇಂಡಿಯಾ ಸದ್ಯ ಶ್ರೀಲಂಕಾ ಪ್ರವಾಸದಲ್ಲಿದೆ. ಈ ವೇಳೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಸ್ಥಾನವನ್ನು ಗೌತಮ್ ಗಂಭೀರ್ ಅಲಂಕರಿಸಿದ್ದಾರೆ. ಗೌತಿ ಅವರಿಗೆ ಇದು ಮೊದಲ ಪರೀಕ್ಷೆ. ಗೌತಮ್ ಗೌಂಭೀರ್ ಅವರು ಲಂಕಾ ಪ್ರವಾಸದಲ್ಲಿ ನಡೆದ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು. ಆದರೆ ಏಕದಿನ ಸರಣಿಯಲ್ಲಿ ಇವರ ಪ್ರಯೋಗಗಳು ಕೈ ಹಿಡಿದಿಲ್ಲ. ಎಲ್ಲವೂ ಫೈಲ್ ಆಗಿದೆ.
ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಂದ ತೆರವಾದ ಸ್ಥಾನಕ್ಕೆ ಈಗ ಗೌತಮ್ ಗಂಭೀರ್, ಆಯ್ಕೆ ಆಗಿದ್ದಾರೆ. ಗಂಭೀರ್ ಕೋಚ್ ಹುದ್ದೆ ಅಲಂಕರಿಸುವಾಗಲೇ ಭಾರೀ ಸಂಚಲನವನ್ನು ಸೃಷ್ಟಿ ಮಾಡಿತ್ತು. ಅಲ್ಲದೆ ಇವರು ಬಿಸಿಸಿಐ ಮುಂದೆ ಇಟ್ಟಿದ್ದ ಬೇಡಿಕೆಗೆ ಒಪ್ಪುವುದು ಕಷ್ಟವಾಗಿತ್ತು. ಆದರೆ, ತಂಡದ ಹಿತದ ದೃಷ್ಟಿಯಿಂದ ಬಿಸಿಸಿಐ ಸಹ ಇವರನ್ನು ಟೀಮ್ ಇಂಡಿಯಾ ಕೋಚ್ ಆಗಿ ನೇಮಿಸಿತು.

ಈಗಾಗಲೇ ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಇದರ ಹಿಂದೆ ಕನ್ನಡಿಗ ರಾಹುಲ್ ದ್ರಾವಿಡ್ ಕೈವಾಡವೂ ಮರೆಯುವಂತೆ ಇಲ್ಲ. ದ್ರಾವಿಡ್ ಅವರ ಸ್ಥಾನವನ್ನು ತುಂಬುದು ಕೊಂಚ ಕಷ್ಟದ ಕೆಲಸ. ಆದರೂ ಗೌತಿ ಅವರ ಮೇಲೆ ಮ್ಯಾನೇಜ್ಮೆಂಟ್ ನಂಬಿಕೆ ಇಟ್ಟು ಈ ದೊಡ್ಡ ಜವಾಬ್ದಾರಿಯನ್ನು ಅವರ ಹೆಗಲಿಗೆ ನೀಡಿತು.
ಗೌತಮ್ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದೇ ಅವರು ಕೋಚ್ ಸ್ಥಾನವನ್ನು ಅಲಂಕರಿಸಲು ಸಹಾಯಕವಾಯಿತು. ಗೌತಮ್ ತಮ್ಮಲ್ಲಿ ಅಮೋಘ ಕೋಚಿಂಗ್ ಸ್ಕಿಲ್ ಇದೆ ಎಂದು ಐಪಿಎಲ್ ವೇಳೆ ಬಹಿರಂಗ ಪಡಿಸಿದ್ದರು. ಅಲ್ಲದೆ ಇವರು ಕೋಚಿಂಗ್ ಮಾಡಿದ್ದ ಲಖ್ನೋ ಸೂಪರ್ ಜೇಂಟ್ಸ್ ತಂಡ ಎರಡೂ ಬಾರಿ ಟಾಪ್ ಫೋರ್ ಸ್ಲಾಟ್ನಲ್ಲಿ ಸ್ಥಾನ ಪಡೆದಿತ್ತು. ಅಲ್ಲದೆ ಈಗ ಕೆಕೆಆರ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಮೇಲೆ ಕೇಳಬೇಕೆ. ರೆಡ್ ಕಾರ್ಪೆಟ್ ಮೇಲೆ ಗಂಭೀರ ನಡಿಗೆಯೊಂದಿಗೆ ಗೌತಮ್ ಪಟ್ಟಕೇರಿದರು.
ಗೌತಮ್ ಅವರಿಗೂ ಗೊತ್ತಿತ್ತು. ಅವರು ಈ ದೊಡ್ಡ ತಂಡವನ್ನು ಮುನ್ನಡೆಸುವುದು ಸುಲಭದ ಮಾತಲ್ಲ. ಅದ್ರಲ್ಲೂ ಗೌತಮ್ ಅವರೊಂದಿಗೆ ಆಡಿದ ಆಟಗಾರರೇ ಇನ್ನು ತಂಡದಲ್ಲಿ ಇರುವಾಗ ಹೇಗೆ ಕೋಚ್ ಮಾಡುತ್ತಾರೆ ಎಂಬ ಪ್ರಶ್ನೆಗಳು ಎದ್ದಿದ್ದವು. ಆದರೆ ಗೌತಮ್ ಮೊದಲ ಪ್ರಯತ್ನದಲ್ಲಿ ಎಡವಿದ್ದಾರೆ.
ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು. ಆದರೆ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವೇ ಆಗಲಿಲ್ಲ. ಲಂಕಾ ತಂಡ ನೀಡಿದ್ದ ಸಾಧಾರಣ ಗುರಿಯನ್ನು ಬೆನ್ನಟ್ಟುವಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ಗಳು ವಿಫಲರಾದರು. ಮೊದಲ ಪಂದ್ಯ ಡ್ರಾ ಆಗಿದ್ದು ಇನ್ನು ಅಭಿಮಾನಿಗಳ ಮನಸ್ಸಿನಲ್ಲಿ ಹಾಗೇ ಇದೆ. ಎರಡು ಹಾಗೂ ಮೂರು ಪಂದ್ಯಗಳಲ್ಲಿ ಕಂಡಿರುವ ಹೀನಾಯ ಸೋಲುಗಳು ಅಭಿಮಾನಿಗಳು ಕಣ್ಣು ಕೆಂಪಾಗಿಸಿವೆ.
ಶ್ರೀಲಂಕಾ ವಿರುದ್ಧದ ಸೋಲಿನ ಬಳಿಕ ಟೀಮ್ ಇಂಡಿಯಾ ಅಭಿಮಾನಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ಸಾಮಾಜಿಕ ಮಾಧ್ಯದಲ್ಲಿ ಹರಿ ಬಿಟ್ಟಿದ್ದಾರೆ. ಈ ವೇಳೆ ನೂತನ ಕೋಚ್ ಗೌತಮ್ ಗಂಭೀರ್ ಅವರನ್ನು ಟ್ರೋಲ್ ಸಹ ಮಾಡಿದ್ದಾರೆ.