
ನವದೆಹಲಿ, ಮೇ 7: ಮಾನಸಿಕ ಅಸ್ವಸ್ಥತೆಯ ವಿಷಯದಲ್ಲಿ ತಮಗೆ ಸ್ವಲ್ಪ ದೌರ್ಬಲ್ಯವಿದೆ ಎಂದು ಒಪ್ಪಿಕೊಳ್ಳಲು ದೇಶದ ಆಟಗಾರರು ಈಗಲೂ ಹಿಂಜರಿಯುತ್ತಾರೆ. ಅದಕ್ಕಾಗಿಯೇ ಮೆಂಟಲ್ ಕಂಡೀಷನಿಂಗ್ ತರಬೇತುದಾರರು ತಂಡದೊಂದಿಗೆ ನಿರಂತರವಾಗಿ ಇರಬೇಕು ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಹೇಳಿದ್ದಾರೆ.
'ನನ್ನ ಪ್ರಕಾರ ಭಾರತದಲ್ಲಿ ಈಗಲೂ ಕೆಲ ಆಟಗಾರರು ತಮಗೆ ಮಾನಸಿಕ ಸಂಬಂಧಿ ತೊಂದರೆಗಳಿವೆ ಎಂದು ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಮಾನಸಿಕ ಸಮಸ್ಯೆಯನ್ನು ನಾವು ಸಾಮಾನ್ಯವಾಗಿ ಮಾನಸಿಕ ಅಸ್ವಸ್ಥತೆ ಎನ್ನುತ್ತೇವೆ,' ಎಂದು ಧೋನಿ ಬೇರೆ ಬೇರೆ ತರಬೇತುದಾರರೊಂದಿಗೆ ತನ್ನ ಅನುಭವ ಹಂಚಿಕೊಂಡಿದ್ದಾರೆ.
'ಯಾರೂ ಇದನ್ನೆಲ್ಲ ಹೇಳಿಕೊಳ್ಳಲ್ಲ. ನಾನು ಬ್ಯಾಟಿಂಗ್ಗೆ ಹೋಗುವಾಗ ಮೊದಲ 5-10 ಎಸೆತಗಳನ್ನು ಎದುರಿಸುವವರೆಗೂ ನನ್ನ ಎದೆಬಡಿತ ಜೋರಿರುತ್ತೆ. ನನ್ನಲ್ಲಿ ಆಗ ಒತ್ತಡ ಇರತ್ತೆ. ಆಗೆಲ್ಲ ನಾನು ಕೊಂಚ ಹೆದರುತ್ತೇನೆ. ಉಳಿದವರು ಏನು ಅಂದುಕೊಳ್ಳುತ್ತಾರೋ? ಇದನ್ನು ಹೇಗೆ ನಿಭಾಯಿಸೋದು ಎಂದೆಲ್ಲ ಅನ್ನಿಸುತ್ತೆ,' ಎಂದು ಧೋನಿ ಆಟದ ವೇಳೆಯ ತೊಳಲಾಟದ ಬಗ್ಗೆ ಬಾಯ್ತೆರೆದಿದ್ದಾರೆ.
'ಇದು ಸಣ್ಣ ಸಮಸ್ಯೆ. ಆದರೆ ಹೆಚ್ಚಿನ ಸಾರಿ ಆಟಗಾರರು ಕೋಚ್ಗಳೊಂದಿಗೆ ಈ ವಿಚಾರವನ್ನು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಇದೇ ಕಾರಣಕ್ಕೆ ಕೋಚ್ ಮತ್ತು ಆಟಗಾರರ ಮಧ್ಯೆ ಒಳ್ಳೆಯ ಸಂಬಂಧ ಇರೋದು ಬಹುಮುಖ್ಯ ಅನ್ನೋದು,' ಎಂದು ಎಂಎಸ್ಡಿ ವಿವರಿಸಿದ್ದಾರೆ.
ಎಂಫಾರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಧೋನಿ, 'ಮೆಂಟಲ್ ಕಂಡೀಶನಿಂಗ್ ಕೋಚ್ ಆದವನು 15 ದಿನಕ್ಕೊಮ್ಮೆ ವಿಚಾರಿಸುವವನಾಗಿರಬಾರದು. ನಿರಂತರವಾಗಿ ತಂಡದ ಜೊತೆಗಿರವವನಾಗಿಬೇಕು,' ಎಂದರು. ಕಾರ್ಯಕ್ರಮದಲ್ಲಿ ಕ್ರಿಕೆಟ್ ಸೇರಿದಂತೆ ವಾಲಿಬಾಲ್, ಟೆನಿಸ್, ಗಾಲ್ಫ್ ಕ್ರೀಡೆಗಳ ಕೋಚ್ಗಳು ಪಾಲ್ಗೊಂಡಿದ್ದರು.