ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳು ಎನಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಶನಿವಾರ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಮೋಘ ಪ್ರದರ್ಶನ ನೀಡಿದ್ದು ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ ಸತತ ಎರಡನೇ ಪಂದ್ಯದಲ್ಲಿಯೂ ಸೋಲಿನ ಕಹಿ ಅನುಭವಿಸಿದಂತಾಗಿದೆ.
ಇನ್ನು ಈ ಬಹುನಿರೀಕ್ಷಿತ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ಗೆ ಆಘಾತ ನೀಡಿದ್ದು ಅಜಿಂಕ್ಯಾ ರಹಾನೆ ಬ್ಯಾಟಿಂಗ್. ಅಚ್ಚರಿಯೆಂಬಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಅಜಿಂಕ್ಯಾ ರಹಾನೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದರು. ಮುಂಬಯ ಇಂಡಿಯನ್ಸ್ ನೀಡಿದ 158 ರನ್ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಡೆವೋನ್ ಕಾನ್ವೆ ರನ್ ಗಳಿಸುವ ಮುನ್ನವೇ ವಿಕೆಟ್ ಕಳೆದುಕೊಂಡಿದ್ದರು. ನಂತರ ಬ್ಯಾಟಿಂಗ್ಗೆ ಇಳಿದ ರಹಾನೆ ಅಕ್ಷರಶಃ ಆರ್ಭಟಿಸಿದರು.

ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಅಜಿಂಕ್ಯಾ ರಹಾನೆ ಕ್ರಿಎಕಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದರು. ಈ ಬಾರಿಯ ಐಪಿಎಲ್ನಲ್ಲಿ ಅತ್ಯಂತ ವೇಗದ ಅರ್ಧ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ ಈ ಅನುಭವಿ ಆಟಗಾರ. ಕೇವಲ 19 ಎಸೆತಗಳಲ್ಲಿ ಈ ಸಾಧನೆ ಮಾಡಿದರು. ಅಂತಿಮವಾಗಿ 27 ಎಸೆತಗಳನ್ನು ಎದುರಿಸಿದ ಅವರು 61 ರನ್ಗಳಿಸಿ ವಿಕೆಟ್ ಕಳೆದುಕೊಂಡರು. ಇದರಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸೇರಿತ್ತು.
ಇನ್ನು ಈ ಪಂದ್ಯದ ಮುಕ್ತಾಯದ ಬಳಿಕ ನಾಯಕ ಎಂಎಸ್ ಧೋನಿ ಅಜಿಂಕ್ಯಾ ರಹಾನೆ ಬ್ಯಾಟಿಂಗ್ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಬ್ಯಾಟಿಂಗ್ಗೆ ಇಳಿಯುವುದಕ್ಕೂ ಮುನ್ನ ರಹಾನೆಗೆ ಏನು ಹೇಳಿದ್ದರು ಎಂಬುದನ್ನು ಸಿಎಸ್ಕೆ ನಾಯಕ ಎಂಎಸ್ ಧೋನಿ ಬಹಿರಂಗಪಡಿಸಿದ್ದಾರೆ.
"ಸಿಎಸ್ಕೆ ಪರವಾಗಿ ಅಭ್ಯಾಸವನ್ನು ನಡೆಸುತ್ತಿದ್ದಾಗ ನಾವು ಹಾಗು ರಹಾನೆ ಮಾತನಾಡಿಕೊಂಡಿದ್ದೆವು. ನನ್ನಿಂದ ಏನು ನಿರೀಕ್ಷಿಸುತ್ತೀರಿ ಎಂದು ಅಜಿಂಕ್ಯಾ ನನ್ನಲ್ಲಿ ಕೇಳಿದ್ದರು. ಅದಕ್ಕೆ ನಾನು ನಿಮ್ಮ ಸಾಮರ್ಥ್ಯ ಏನಿದೆಯೋ ಅದಕ್ಕೆ ತಕ್ಕನಾಗಿ ಆಡಿ. ಸತತವಾಗಿ ದೊಡ್ಡ ಸಿಕ್ಸರ್ಗಳನ್ನು ಬಾರಿಸುವಂತಾ ಶೈಲಿಯ ಆಟ ನಿಮ್ಮದಲ್ಲ. ಆದರೆ ಫೀಲ್ಡರ್ಗಳನ್ನು ತಬ್ಬಿಬ್ಬುಗೊಳಿಸುವ ಸಾಮರ್ಥ್ಯ ನಿಮ್ಮಲ್ಲಿದೆ. ಬೌಲಿಂಗ್ನ ವೇಗವನ್ನು ಬಳಸಿಕೊಂಡು ಆಡಿ ಎಂದಿದ್ದೆ. ಆತ ತಾಂತ್ರಕವಾಗಿ ಬಹಳ ಬಲಿಷ್ಠ ಆಟಗಾರ" ಎಂದು ಪಂದ್ಯದ ಮುಕ್ತಾಯದ ಬಳಿಕ ಎಂಎಸ್ ಧೋನಿ ಹೇಳಿಕೆ ನೀಡಿದ್ದಾರೆ.
ಮುಂದುವರಿದು ಮಾತನಾಡಿದ ಧೋನಿ, "ಹೋಗಿ ಆನಂದಿಸಿ ಎಂದು ನಾನು ಅವರಿಗೆ ಹೇಳಿದ್ದೆ. ಯಾಕೆಂದರೆ ಅದುವೇ ನಮಗೆ ಅಗತ್ಯ. ಅನಗತ್ಯವಾಗಿ ಒತ್ತಡವನ್ನು ತೆಗೆದುಕೊಳ್ಳಬೇಡಿ. ಮೊದಲ ಪಂದ್ಯದಲ್ಲಿ ಆಡಿಸಲು ಸಾಧ್ಯವಾಗಿರಲಿಲ್ಲ. ಆದರೆ ಅವಕಾಶಗಳು ಬಂದಾಗ ನಾವು ನಿಮಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದಿದ್ದೆ. ಅವರು ಬ್ಯಾಟಿಂಗ್ ಮಾಡಿದ ರೀತಿಗೆ ನಾನು ಬಹಳ ಸಂತಸಗೊಂಡಿದ್ದೇನೆ" ಎಂದಿದ್ದಾರೆ ಎಂಎಸ್ ಧೋನಿ.