ಇಂಡಿಯನ್ ಪ್ರೀಮಿಯರ್ ಲೀಗ್ 2023ರ ತನ್ನ ಮೊದಲನೇ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಬ್ಬರಿಸಿದೆ. ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಎದುರಾಳಿ ತಂಡಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಅದರಲ್ಲೂ ಈ ಬಾರಿ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಬರೆಯುವ ಸೂಚನೆ ಕೂಡ ನೀಡಿದ್ದಾರೆ.
ಆರ್ಸಿಬಿ ಮೊದಲನೇ ಪಂದ್ಯವನ್ನು ನೋಡಿದ ಬಳಿಕ ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಮೈಕೆಲ್ ವಾನ್ ಭಾರಿ ಖುಷಿಯಾಗಿದ್ದಾರೆ. ತಂಡದಲ್ಲಿ ಅನುಭವಿ ಆಟಗಾರರೇ ಇರುವುದರಿಂದ ಈ ಬಾರಿ ಐಪಿಎಲ್ನಲ್ಲಿ ಕಪ್ ಗೆಲ್ಲುವ ಅವಕಾಶ ಹೆಚ್ಚಾಗಿದೆ ಎಂದು ಭವಿಷ್ಯ ನುಡಿದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುತ್ತಿರುವುದರಿಂದ ಅವರಿಗೆ ಹೆಚ್ಚಿನ ಅನುಕೂಲವಾಗಿದೆ, ಅದು ಅವರ ಕೋಟೆಯಾಗಿದೆ ಎಂದು ವಾನ್ ಹೇಳಿದ್ದಾರೆ.

ಆದರೂ, ಮೊದಲನೇ ಪಂದ್ಯದಲ್ಲಿ ಇಂಗ್ಲೆಂಡ್ನ ಎಡಗೈ ವೇಗದ ಬೌಲರ್ ರೀಸ್ ಟೋಪ್ಲಿಗಾಯಗೊಂಡಿರುವುದು, ರಾಯಲ್ ಚಾಲೆಂಜರ್ಸ್ಗೆ ಕಳವಳಕಾರಿಯಾಗಬಹುದು ಎಂದು ಹೇಳಿದ್ದಾರೆ. ಅವರು ಉತ್ತಮವಾಗಿರುವ ವಿಶ್ವಾಸವಿದೆ, ಆದರೂ ಆರ್ ಸಿಬಿ ತಂಡದಲ್ಲಿ ಅಸಾಧಾರಣ ಆಟಗಾರರು ಇದ್ದಾರೆ, ಇದು ಅವರ ವರ್ಷವಾಗಿರಬಹುದು ಎಂದು ಮೈಕೆಲ್ ವಾನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಾಕಷ್ಟು ಅನುಭವಿಗಳು ಇರುವ ತಂಡ
ಕ್ರಿಕ್ಬಝ್ನಲ್ಲಿ ನಡೆದ ಚರ್ಚೆಯಲ್ಲಿ ಆರ್ಸಿಬಿ ಬಗ್ಗೆ ವಾನ್ ಮಾತನಾಡಿದ್ದಾರೆ, "ಈ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ. ಅನುಭವದ ದೃಷ್ಟಿಯಿಂದ ಅವರ ತಂಡದಲ್ಲಿ ಸಾಕಷ್ಟು ಉತ್ತಮ ಆಟಗಾರರು ಇದ್ದಾರೆ. ರೀಸ್ ಟೋಪ್ಲಿ ಭುಜದ ಗಾಯದಿಂದ ಏನಾದರೂ ಪಂದ್ಯಾವಳಿಯನ್ನು ತಪ್ಪಿಸಿಕೊಂಡರೆ ಅದು ತಂಡಕ್ಕೆ ದೊಡ್ಡ ಹಿನ್ನಡೆ ಎಂದು ಭಾವಿಸುತ್ತೇನೆ" ಎಂದು ಅವರು ಹೇಳಿದರು.
" ಆರ್ ಸಿಬಿ ತಂಡದಲ್ಲಿ ಅನುಭವಿ ಆಟಗಾರರ ಪಡೆಯೇ ಇದೆ. ಈಗ ತವರಿನಲ್ಲಿ ಕೂಡ ಪಂದ್ಯಗಳನ್ನು ಆಡಲಿದ್ದಾರೆ. ಚಿನ್ನಸ್ವಾಮಿ ಅಂಗಳದಲ್ಲಿ ಹೇಗೆ ಆಡಬೇಕು ಎಂದು ಅವರಿಗೆ ತಿಳಿದಿದೆ, ಅವರು ಪ್ಲೇ ಆಫ್ಗೆ ಹೋಗುವ ಬಗ್ಗೆ ನನಗೆ ಖಾತ್ರಿಯಿದೆ, ಅಲ್ಲಿಂದ ಉತ್ತಮ ಪ್ರದರ್ಶನ ನೀಡಿದರೆ ಈ ಬಾರಿ ಕಪ್ ಗೆಲ್ಲಲು ಅವರಿಗೆ ಉತ್ತಮ ಅವಕಾಶ ಇದೆ" ಎಂದು ಹೇಳಿದರು.

ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಎಡಗೈ ವೇಗದ ಬೌಲರ್ ರೀಸ್ ಟೋಪ್ಲಿ ಭುಜದ ಗಾಯಕ್ಕೆ ತುತ್ತಾದರು. ಚೆಂಡನ್ನು ತಡೆಯಲು ಡೈವ್ ಮಾಡಿದ ಸಂದರ್ಭದಲ್ಲಿ ಭುಜದ ಮೇಲೆ ದೇಹದ ಭಾರ ಬಿದ್ದ ಕಾರಣ ಭುಜದ ಮೂಳೆ ನೋವಿನಿಂದ ನರಳಿದರು. ಎರಡು ಓವರ್ ಬೌಲಿಂಗ್ ಮಾಡಿ ಕ್ಯಾಮೆರಾನ್ ಗ್ರೀನ್ ವಿಕೆಟ್ ಪಡೆದಿದ್ದ ಅವರು, ಉಳಿದ ಎರಡು ಓವರ್ ಬೌಲಿಂಗ್ ಮಾಡಲಿಲ್ಲ.
ಮೊದಲನೇ ಪಂದ್ಯದ ಗೆಲುವಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಪಂದ್ಯಕ್ಕಾಗಿ ಕೋಲ್ಕತ್ತಾಗೆ ಪ್ರಯಾಣ ಮಾಡಲಿದೆ. ಏಪ್ರಿಲ್ 6ರಂದು ಈಡನ್ ಗಾರ್ಡನ್ಸ್ ಅಂಗಳದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎರಡನೇ ಪಂದ್ಯವನ್ನು ಆಡಲಿದ್ದಾರೆ. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಕೆಕೆಆರ್ ತಂಡ ದುರ್ಬಲವಾಗಿ ಕಾಣುತ್ತಿದ್ದು, ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ ಆರ್ ಸಿಬಿ.