
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದ ಆರಂಭಕ್ಕೆ ಮಳೆ ಅಡ್ಡಿಯಾಗಿದೆ. ಮೊದಲ ದಿನದಾಟದಲ್ಲಿ ಆರಂಭದಿಂದಲೇ ಮಳೆ ಸುರಿಯುತ್ತಿರುವ ಪರಿಣಾಮವಾಗಿ ಟಾಸ್ ಕೂಡ ನಡೆಯಲು ಸಾಧ್ಯವಾಗಿಲ್ಲ. ಈ ಮಧ್ಯೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಟ್ವಿಟ್ಟರ್ನಲ್ಲಿ ಮತ್ತೆ ಕೆಣಕಿದ್ದಾರೆ.
ಸದಾ ಒಂದಿಲ್ಲೊಂದು ರೀತಿಯಲ್ಲಿ ಟೀಮ್ ಇಂಡಿಯಾ ಅಭಿಮಾನಿಗಳನ್ನು ಕೆಣಕುವ ಮೈಕಲ್ ವಾನ್ ಈಗ ಮಳೆಯ ಕಾರಣದಿಂದಾಗಿ ಪಂದ್ಯ ಆರಂಭವಾಗದಿರುವುದನ್ನೇ ನೆಪವಾಗಿಸಿ ಮತ್ತೆ ಕುಟುಕಿದ್ದಾರೆ. ಮೈಕಲ್ ವಾನ್ ಮಾಡಿದ ಈ ಟ್ವೀಟ್ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತಿರುಗೇಟು ನೀಡುತ್ತಿದ್ದಾರೆ.
"ಭಾರತ ಹವಾಮಾನದಿಂದ ಸೋಲಿನಿಂದ ತಪ್ಪಿಸಿಕೊಳ್ಳುತ್ತಿರುವುದನ್ನು ನಾನು ನೋಡುತ್ತಿದ್ದೇನೆ" ಎಂದು ಮೈಕಲ್ ವಾನ್ ಟ್ವೀಟ್ ಮಾಡುವ ಮೂಲಕ ಭಾರತೀಯ ಕ್ರಿಕೆಟ್ ಪ್ರೇಮಿಗಳ ಕಾಲೆಳೆದಿದ್ದಾರೆ. ಈ ಮೂಲಕ ಭಾರತ ನ್ಯೂಜಿಲೆಂಡ್ ವಿರುದ್ಧ ಗೆಲ್ಲಲು ಸಾಧ್ಯವಿಲ್ಲ ಎಂಬರ್ಥದಲ್ಲಿ ವ್ಯಂಗ್ಯವಾಡಿದ್ದಾರೆ.
ಮೈಕಲ್ ವಾನ್ ಭಾರತೀಯ ಕ್ರಿಕೆಟ್ ತಂಡದ ವಿರುದ್ಧ ಹೇಳಿಕೆಯನ್ನು ನೀಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿಯೂ ಹಲವು ಸಂದರ್ಭಗಳಲ್ಲಿ ಈ ರೀತಿ ಉದ್ಧಟತನದ ಟ್ವೀಟ್ಗಳನ್ನು ಮಾಡಿ ಬಳಿಕ ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದರು. ಆಸಿಸ್ ನೆಲದಲ್ಲಿ ಭಾರತ ಒಂದೂ ಪಂದ್ಯ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದಿದ್ದ ಮೈಕಲ್ ವಾನ್ ಬಳಿಕ ಭಾರತ ಸರಣಿ ಗೆದ್ದಾಗ ಟ್ವಿಟ್ಟರ್ನಲ್ಲಿ ಹಿಗ್ಗಾಮುಗ್ಗ ತರಾಟೆಗೆ ಒಳಗಾಗಿದ್ದರು. ನಂತರ ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಗೂ ಭವಿಷ್ಯ ನುಡಿದು ಬಳಿಕ ತಾವೇ ಕಾಲೆಳೆಸಿಕೊಂಡಿದ್ದರು.