
ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಶ್ರೇಷ್ಠ ನಾಯಕರಲ್ಲಿ ಒಬ್ಬರೆನಿಸಿದ್ದಾರೆ. ಆದರೆ ಸೌರವ್ ಗಂಗೂಲಿ ನಾಯಕತ್ವದಲ್ಲಿ ದೊಡ್ಡ ಯಶಸ್ಸು ಗಳಿಸಲು ಕಾರಣ ಒಬ್ಬ ವ್ಯಕ್ತಿ. ಆ ವ್ಯಕ್ತಿಯ ಕಾರಣದಿಂದಲೇ ಸೌರವ್ ಗಂಗೂಲಿ ಶ್ರೇಷ್ಠ ನಾಯಕರೆನಿಸಿದ್ದಾರೆ ಎಂದು ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ರಶೀದ್ ಲತಿಫ್ ಹೇಳಿದ್ದಾರೆ.
ರಶೀದ್ ಲತೀಫ್ ಹೇಳಿದ ಆ ಕ್ರಿಕೆಟಿಗ ಬೇರೆ ಯಾರೂ ಅಲ್ಲ. ಟೀಮ್ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ಧೀನ್. ಸೌರವ್ ಗಂಗೂಲಿ ನಾಯಕತ್ವದಲ್ಲಿ ಶ್ರೇಷ್ಠ ಮಟ್ಟವನ್ನು ತಲುಪಲು ಅಜರುದ್ದೀನ್ ಪಾತ್ರ ಪ್ರಮುಖವಾಗಿದೆ ಎಂದು ರಶೀದ್ ಲತೀಫ್ ಹೇಳಿದ್ದಾರೆ.
ಸೌರವ್ ಗಂಗೂಲಿ 1992ರಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆಯನ್ನು ಮಾಡಿದ್ದು ಅಜರುದ್ಧೀನ್ ನಾಯಕತ್ವದಲ್ಲಿ. 12 ಟೆಸ್ಟ್ ಹಾಗೂ 53 ಏಕದಿನ ಪಂದ್ಯಗಳನ್ನು ಸೌರವ್ ಗಂಗೂಲಿ ಮೊಹಮದ್ ಅಜರುದ್ದೀನ್ ನಾಯಕತ್ವದಲ್ಲಿ ಆಡಿದ್ದಾರೆ. ಈ ಸಂದರ್ಭದಲ್ಲಿ ಗಂಗೂಲಿ ನಾಯಕನಾಗಿ ರೂಪುಗೊಳ್ಳಲು ಅಜರುದ್ಧೀನ್ ಪ್ರಮುಖ ಪಾತ್ರವಹಿಸಿದರು ಎಂದು ರಶೀದ್ ಲತೀಫ್ ಹೇಳಿದ್ದಾರೆ.
ಮೊಹಮ್ಮದ್ ಅಜರುದ್ದೀನ್ ಅವರನ್ನು ನಾನು ಹೆಚ್ಚು ಗೌರವದಿಂದ ಕಾಣುತ್ತೇನೆ. ಭಾರತಿಯ ಕ್ರಿಕೆಟ್ಗೆ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಅಜರುದ್ದೀನ್ ಸೌರವ್ ಗಂಗೂಲಿಯಂತವರನ್ನು ಕೊಡುಗೆಯಾಗಿ ನೀಡಿದರು. ಸಚಿನ್ ಹಾಗೂ ದ್ರಾವಿಡ್ ಅವರಂತಾ ಶ್ರೇಷ್ಠ ಆಟಗಾರರು ಸೌರವ್ ಗಂಗೂಲಿ ನಾಯಕತ್ವದಲ್ಲಿ ಬೆಳೆದರು ಎಂದು ರಶೀದ್ ಲತೀಫ್ ಯುಟ್ಯೂಬ್ ಚಾನೆಲ್ ಒಂದರಲ್ಲಿ ಮಾತನಾಡುತ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ರಶೀದ್ ಲತೀಫ್ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಯನ್ನು ಕೂಡ ಹೊಗಳಿದ್ದಾರೆ. ಮೊಹಮದ್ ಅಜರುದ್ಧೀನ್ ಹಾಗೂ ಸೌರವ್ ಗಂಗೂಲಿಯಲ್ಲಿದ್ದ ನಾಯಕತ್ವ ಗುಣಗಳ ಸಂಯೋಜನೆಯಂತಿರುವ ಧೋನಿ ಭಾರತ ತಂಡವನ್ನು ದಶಕಕ್ಕೂ ಹೆಚ್ಚು ಕಾಲ ಮುನ್ನಡೆಸಿದರು ಎಂದು ಪ್ರಶಂಸಿಸಿದ್ದಾರೆ.