ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ 18 ಸದಸ್ಯರ ಭಾರತ ತಂಡವನ್ನು ಶುಕ್ರವಾರ ಬಿಸಿಸಿಐ ಪ್ರಕಟಿಸಿದೆ.
ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡಕ್ಕೆ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸ್ಟಾರ್ ಆಯ್ಕೆಯಾಗುವ ನಿರೀಕ್ಷೆಯಿತ್ತು. ಆದರೆ ಶಮಿ ಅವರನ್ನು ಆಯ್ಕೆ ಮಾಡದೆ ಬಿಸಿಸಿಐ ಭಾರತೀಯ ಕ್ರಿಕೆಟ್ಗೆ ಅಚ್ಚರಿ ಮೂಡಿಸಿತ್ತು. ಇದೀಗ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗಾಗಿ ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತ ಟೆಸ್ಟ್ ತಂಡದಲ್ಲಿ ಸೇರ್ಪಡೆಗೊಳ್ಳದಿರುವ ಬಗ್ಗೆ ಮೊಹಮ್ಮದ್ ಶಮಿ ಮೌನ ಮುರಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಕೂಡ ಸಖತ್ ವೈರಲ್ ಆಗಿದೆ.

ಕಳೆದ ವರ್ಷ ನವೆಂಬರ್ನಲ್ಲಿ 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಸಂದರ್ಭದಲ್ಲಿ ಪಾದದ ಗಾಯದಿಂದ ಶಮಿ ಮೈದಾನದಿಂದ ಹೊರಗುಳಿದಿದ್ದರು. ಇದಾದ ನಂತರ 2024ರ ಫೆಬ್ರವರಿಯಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿ ಮಾಡುತ್ತಿದ್ದಾರೆ. ಬಹುತೇಕ ಶಮಿ ಫಿಟ್ ಆಗಿದ್ದಾರೆ. ಆದರೆ, ಬಿಸಿಸಿಐ ಅವರು ಚೇತರಿಸಿಕೊಳ್ಳಲು ಹೆಚ್ಚಿನ ಸಮಯವನ್ನು ನೀಡಿದೆ ಎಂದು ವರದಿಗಳು ತಿಳಿಸಿವೆ.
ಬಹುನಿರೀಕ್ಷಿತ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಟೀಮ್ ಇಂಡಿಯಾವನ್ನು ಘೋಷಿಸಿದ ಒಂದು ದಿನದ ನಂತರ, ಶಮಿ ಅವರು ತಮ್ಮ ಫಿಟ್ನೆಸ್ ಬಗ್ಗೆ ವೀಡಿಯೊ ಪೋಸ್ಟ್ ವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಬಿಸಿಸಿಐ ಮತ್ತು ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪುನರಾಗಮನ ಮಾಡಲು ಸಾಧ್ಯವಾಗದ ಅಭಿಮಾನಿಗಳಿಗೆ ಮತ್ತು ಶೀಘ್ರದಲ್ಲೇ ಮೈದಾನಕ್ಕಿಳಿಯುವ ಬಗ್ಗೆ ಭರವಸೆ ನೀಡಿದ್ದಾರೆ.
ಶಮಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನ ಶೀರ್ಷಿಕೆಯಲ್ಲಿ, 'ನಾನು ನನ್ನ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದೇನೆ. ದಿನದಿಂದ ದಿನಕ್ಕೆ ನನ್ನ ಬೌಲಿಂಗ್ ಫಿಟ್ನೆಸ್ ಅನ್ನು ಸುಧಾರಿಸುತ್ತಿದ್ದೇನೆ. ದೇಶೀಯ ರೆಡ್ ಬಾಲ್ ಕ್ರಿಕೆಟ್ ಆಡಲು ಕಠಿಣ ಪರಿಶ್ರಮವನ್ನು ಮುಂದುವರಿಸುತ್ತೇನೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತು ಬಿಸಿಸಿಐಗೆ ಕ್ಷಮೆಯಾಚಿಸುತ್ತೇನೆ. ಆದರೆ ಶೀಘ್ರದಲ್ಲೇ ನಾನು ರೆಡ್ ಬಾಲ್ ಕ್ರಿಕೆಟ್ ಆಡಲು ಸಿದ್ಧನಿದ್ದೇನೆ. ಎಂದು ಬರೆದಿದ್ದಾರೆ.