ಐಪಿಎಲ್ 2025 ರಲ್ಲಿ ಮೊಹಮ್ಮದ್ ಸಿರಾಜ್ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಮುಂದುವರೆದಿದೆ. ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ಸಿರಾಜ್ ನಾಲ್ಕು ಪಂದ್ಯಗಳಲ್ಲಿ 9 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡದ ಗೆಲುವಿನಲ್ಲಿ ಸಿರಾಜ್ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಭಾನುವಾರ ಕೂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸಿರಾಜ್ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರು. ಸಿರಾಜ್ ಉರಿ ಬೌಲಿಂಗ್ ದಾಳಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ತತ್ತರಿಸಿತು.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮೊಹಮ್ಮದ್ ಸಿರಾಜ್ 4 ಓವರ್ಗಳಲ್ಲಿ ಕೇವಲ 17 ರನ್ ಗಳನ್ನು ನೀಡಿ ಪ್ರಮುಖ ನಾಲ್ಕು ವಿಕೆಟ್ಗಳನ್ನು ಉರುಳಿಸಿದರು. ಇದಕ್ಕಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಸಿಕ್ಕಿತು. ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಸತತ ಎರಡನೇ ಪಂದ್ಯ ಇದಾಗಿತ್ತು.

ಮೊಹಮ್ಮದ್ ಸಿರಾಜ್ ಅವರು ಐಪಿಎಲ್ 2025 ರಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಎದುರಾಳಿ ತಂಡಗಳ ಬ್ಯಾಟರ್ಗಳನ್ನು ಕಾಡುವ ಮೂಲಕ ಸಿರಾಜ್ ವಿಕೆಟ್ಗಳನ್ನು ಬೇಟೆಯಾಡುತ್ತಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಸಿರಾಜ್ ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಿಂದ ಕೈ ಬಿಟ್ಟಿರುವ ಬಗ್ಗೆ ಮಾತನಾಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಿಂದ ಕೈಬಿಟ್ಟಿರುವುದನ್ನು ನನಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ನನ್ನ ಉತ್ಸಾಹ ಕಡಿಮೆಯಾಗಲು ನಾನು ಬಿಡಲಿಲ್ಲ. ನಾನು ನನ್ನ ಆಟ ಮತ್ತು ಫಿಟ್ನೆಸ್ ಮೇಲೆ ನಿರಂತರವಾಗಿ ಕೆಲಸ ಮಾಡಿದ್ದೇನೆ. ನಾನು ಮಾಡುತ್ತಿದ್ದ ತಪ್ಪುಗಳನ್ನೆಲ್ಲ ಸರಿಪಡಿಸಿಕೊಂಡು ಈಗ ನನ್ನ ಬೌಲಿಂಗ್ ಅನ್ನು ಆನಂದಿಸುತ್ತಿದ್ದೇನೆ. ಒಬ್ಬ ವೃತ್ತಿಪರರಾಗಿ, ನೀವು ನಿರಂತರವಾಗಿ ಭಾರತೀಯ ತಂಡದೊಂದಿಗೆ ಇರುವಾಗ, ಕೈಬಿಟ್ಟ ನಂತರ ನಿಮ್ಮ ಮನಸ್ಸಿನಲ್ಲಿ ಅನುಮಾನಗಳು ಉದ್ಭವಿಸಲು ಪ್ರಾರಂಭಿಸುತ್ತವೆ. ಆದಾಗ್ಯೂ, ನಾನು ನಿರಾಶೆಗೊಳ್ಳಲು ಬಿಡಲಿಲ್ಲ. ಈಗ ನಾನು ಐಪಿಎಲ್ಗೆ ಸಿದ್ಧನಾಗಿದ್ದೇನೆ ಎಂದು ಸಿರಾಜ್ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ಇದಾದ ನಂತರ ಭಾರತ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಇಂಗ್ಲೆಂಡ್ ವಿರುದ್ಧದ ತವರು ಸರಣಿ ಮತ್ತು ಚಾಂಪಿಯನ್ ಟ್ರೋಫಿಗೆ ಟೀಮ್ ಇಂಡಿಯಾ ಘೋಷಿಸಿದಾಗ ಸಿರಾಜ್ ಹೆಸರು ಅದರಲ್ಲಿ ಇರಲಿಲ್ಲ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಕೂಡ ಸಿರಾಜ್ ಅವರನ್ನು ಹೊರಗಿಡಲು ಕಾರಣ ನೀಡಿದ್ದರು.
ಮೊಹಮ್ಮದ್ ಸಿರಾಜ್ ಅವರು ಹೊಸ ಚೆಂಡಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿಲ್ಲ. ಇದರಿಂದಾಗಿ ನಾವು ಇತರ ಆಯ್ಕೆಗಳನ್ನು ಹುಡುಕಬೇಕಾಗಿದೆ ಎಂದು ರೋಹಿತ್ ಶರ್ಮಾ ಹೇಳಿದ್ದರು. ಇದಾದ ನಂತರ ಸಿರಾಜ್ ಸತತ ಎರಡು ತಿಂಗಳು ಟೀಮ್ ಇಂಡಿಯಾದಿಂದ ಹೊರಗುಳಿಯಬೇಕಾಯಿತು. ಈ ಸಮಯದಲ್ಲಿ ಅವರು ತಮ್ಮ ಬೌಲಿಂಗ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಿಕೊಳ್ಳಲು ಕಠಿಣ ಅಭ್ಯಾಸ ಮಾಡಿದ್ದಾರೆ. ಈಗ ಅವರ ಪರಿಶ್ರಮ ಐಪಿಎಲ್ 2025 ರಲ್ಲಿ ಫಲ ನೀಡುತ್ತಿದೆ. ಇದೇ ರೀತಿ ಸಿರಾಜ್ ತಮ್ಮ ಬೌಲಿಂಗ್ ಪ್ರದರ್ಶನವನ್ನು ಮುಂದುರೆಸಿದರೆ, ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳಿವೆ.