ಭಾರತ ತಂಡದ ಸ್ಟಾರ್ ವೇಗದ ಬೌಲರ್ ಪ್ರಸ್ತುತ ಐಪಿಎಲ್ 2025 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡುತ್ತಿದ್ದಾರೆ. ಕಳೆದ ವರ್ಷ ಅವರು ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದರು. ಈ ಬಾರಿ ಸನ್ ರೈಸರ್ಸ್ ಹೈದರಾಬಾದ್ ಪರ ಅವರು ಆಡಿರುವ ಮೂರು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ಕಂಡು ಬಂದಿಲ್ಲ. ಇಂತಹ ಸಂದರ್ಭದಲ್ಲಿ ಮೊಹಮ್ಮದ್ ಶಮಿ ಅವರ ಕುಟುಂಬಸ್ಥರ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಯೋಜನೆಯಡಿ ವಂಚನೆ ಮಾಡಿರುವ ಪ್ರಕರಣದಲ್ಲಿ ಮೊಹಮ್ಮದ್ ಶಮಿ ಅವರ ಸಹೋದರಿ ಮತ್ತು ಭಾವ ಪೊಲೀಸರ ಅತಿಥಿಗಳಾಗಿದ್ದಾರೆ. ಶಮಿ ಅವರ ಸಹೋದರಿ ಸೇರಿದಂತೆ 18 ಮಂದಿ ಅಕ್ರಮವಾಗಿ ಹಣ ಪಡೆದು ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.

ವರದಿಗಳ ಪ್ರಕಾರ, ಮೊಹಮ್ಮದ್ ಶಮಿ ಅವರ ಅಕ್ಕ ಶಬಿನಾ, ಅವರ ಪತಿ ಘಜ್ನವಿ, ಶಬಿನಾ ಅವರ ಮೂವರು ಸೋದರಳಿಯರಾದ ಆಮಿರ್ ಸುಹೈಲ್, ನಸೀರುದ್ದೀನ್ ಮತ್ತು ಶೇಖು ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಕಾರ್ಮಿಕರಾಗಿ ಮೊಹಮ್ಮದ್ ಶಮಿ ಅವರ ಕುಟುಂಬ ಸದಸ್ಯರು ನೋಂದಾಯಿಸಿಕೊಂಡು ಅಕ್ರಮವಾಗಿ ಸರ್ಕಾರಿ ವೇತನವನ್ನು ಪಡೆದಿದ್ದಾರೆ. ಈ ಕುರಿತು ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಜಿಲ್ಲಾಧಿಕಾರಿ ನಿಧಿ ಗುಪ್ತಾ ವತ್ಸ್ ಮಾಹಿತಿ ನೀಡಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಯೋಜನೆಯ ಹಣ ವಿತರಣೆಯಲ್ಲಿ ವಂಚನೆ ನಡೆದಿರುವುದು ಆರಂಭಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಆರೋಪಿಗಳೆಂದು ಕಂಡುಬಂದ ಕಾರ್ಮಿಕರನ್ನು ಅಮಾನತುಗೊಳಿಸಲು ಆದೇಶ ಹೊರಡಿಸಲಾಗಿದೆ. ಇದರೊಂದಿಗೆ, ಪಂಚಾಯತ್ ರಾಜ್ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಪೊಲೀಸ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿದೆ ಎಂದು ನಿಧಿ ಗುಪ್ತಾ ವತ್ಸ್ ತಿಳಿಸಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿ ಬೇರೆ ಯಾರು ಅಲ್ಲ, ಜೋಯಾ ಬ್ಲಾಕ್ನಲ್ಲಿರುವ ಪಲೌಲಾ ಗ್ರಾಮದ ಮುಖ್ಯಸ್ಥೆಯಾಗಿರುವ ಗುಳೆ ಆಯೇಷಾ ಮೊಹಮ್ಮದ್ ಶಮಿ ಅವರ ಸಹೋದರಿಯ ಅತ್ತೆ. ಯಾವುದೇ ಕೆಲಸ ಮಾಡದೆ ಇದ್ದರೂ ಕುಟುಂಬಸ್ಥರ ಹೆಸರುಗಳನ್ನು ಬಳಸಿ ಉದ್ಯೋಗ ಕಾರ್ಡ್ಗಳನ್ನು ಪಡೆದುಕೊಂಡಿದ್ದು, ಕಳೆದ ಮೂರು ವರ್ಷಗಳಿಂದ ವೇತನ ಭತ್ಯೆದಲ್ಲಿ ವಂಚನೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.