ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ತಮ್ಮನ್ನು ಏಕದಿನ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ತಾವು ಈಗಲೂ ರಣಜಿ ಟೂರ್ನಿಯಲ್ಲಿ ಆಡುತ್ತಿದ್ದು, ಏಕದಿನ ಹಾಗೂ ಟಿ20 ತಂಡದಲ್ಲಿ ಸ್ಥಾನವನ್ನು ಏಕೆ ನೀಡುತ್ತಿಲ್ಲ ಎಂದು ಮ್ಯಾನೇಜ್ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ. ಫಿಟ್ನೆಸ್ ಸ್ಥಿತಿಯ ಬಗ್ಗೆ ಶಮಿ ಮ್ಯಾನೇಜ್ಮೆಂಟ್ ವಿರುದ್ಧ ಮಾತನಾಡಿದ್ದಾರೆ.
ಶಮಿ ಅವರು ಏಕದಿನ ತಂಡದಲ್ಲಿ ಸ್ಥಾನ ಸಿಗದೇ ಇದ್ದರೂ ಸಹ ತಾವು ತಂಡದಲ್ಲಿ ಸ್ಥಾನ ಪಡೆಯುವ ಕ್ಷಮತೆ ಹೊಂದಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ತಮ್ಮ ಫಿಟ್ನೆಸ್ ಮೇಲಿನ ವದಂತಿಗಳ ಬಗ್ಗೆ ಶಮಿ ಮಾತನಾಡಿದ್ದಾರೆ. ತಂಡ ತಮ್ಮೊಂದಿಗೆ ಫಿಟ್ನೆಸ್ ಬಗ್ಗೆ ಮಾತನಾಡಿಲ್ಲ. ಅವರು ಕೇಳದೇ ನಾನು ನನ್ನ ಫಿಟ್ನೆಸ್ ಬಗ್ಗೆ ತಿಳಿಸುವುವವನು ನಾನಲ್ಲ. ನಾನು 4 ದಿನಗಳ ರಣಜಿ ಟೂರ್ನಿಯಲ್ಲಿ ಬೌಲಿಂಗ್ ಮಾಡುವುದಾದರೆ, 50 ಓವರ್ಗಳ ಪಂದ್ಯಗಳ ಪಂದ್ಯಗಳಲ್ಲಿ ಮಾಡಲು ಸಾಧ್ಯವಿಲ್ಲವೇ.

ಇನ್ನು ಮುಂದುವರೆದು ಮಾತನಾಡಿರುವ ಶಮಿ ತಾವು ಫಿಟ್ ಆಗದೇ ಇದ್ದಿದ್ದರೆ, ತಾವಿನ್ನು ಎನ್ಸಿಎನಲ್ಲಿ ಇರುತ್ತಿದ್ದೆ. ರಣಜಿ ಟ್ರೋಫಿ ಆಡಲು ಬರುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಶಮಿ ಅವರ ಈ ಹೇಳಿಕೆ ಆಯ್ಕೆ ಸಮಿತಿಯ ಮುಖ್ಯಸ್ಥ ಅಜೀತ್ ಅಗರ್ಕರ್ ಅವರನ್ನು ಗುರಿಯಾಗಿಸಿಕೊಂಡು ಹೇಳಿದಂತೆ ಇದೆ. ಇತ್ತೀಚಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅಜಿತ್ ಅಗರ್ಕರ್ ಶಮಿ ಅವರ ಫಿಟ್ನೆಸ್ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಈ ಸೀಸನ್ನಲ್ಲಿ ಕಡಿಮೆ ಪಂದ್ಯಗಳನ್ನು ಆಡಿದ್ದಾರೆ ಎಂದು ತಿಳಿಸಿದ್ದರು.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಸ್ಥಾನ ಪಡೆಯುವಲ್ಲಿ ವಿಫರಾಗಿರುವ ಶಮಿ, ತವರಿನಲ್ಲಿ ಅಕ್ಟೋಬರ್ 15 ರಿಂದ ನಡೆಯಲಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ಬಂಗಾಳ ಪರ ಕಣಕ್ಕೆ ಇಳಿಯಲಿದ್ದಾರೆ. ಶಮಿ ನೀಡಿರುವ ಹೇಳಿಕೆ ಅವರಿಗೆ ಇನ್ನು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಆಸೆ ಇರುವುದಾಗಿ ತಿಳಿಸಿದಂತೆ ಇದೆ. ಟೀಮ್ ಇಂಡಿಯಾದ ವೇಗದ ಬೌಲರ್ ಶಮಿ ಕೊನೆಯ ಬಾರಿಗೆ ಚಾಂಪಿಯನ್ಸ್ ಟ್ರೋಪಿ ಏಕದಿನ ಟೂರ್ನಿಯಲ್ಲಿ ಭಾರತ ತಂಡದ ಪರ ಕಣಕ್ಕೆ ಇಳಿದಿದ್ದರು. ಈ ವೇಳೆ ಸ್ಥಿರ ಪ್ರದರ್ಶನ ನೀಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು.

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಾರ್ಡರ್ ಗವಾಸ್ಕರ್ ಸರಣಿಗೆ ಇವರನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅಲ್ಲದೆ ಆರಂಭಿಕ ಪಂದ್ಯಗಳಿಗೆ ಇವರು ಅಲಭ್ಯರಾಗಲಿದ್ದು, ಮಹತ್ವದ ಪಂದ್ಯಗಳಿಗೆ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿದ್ದವು. ಆದರೆ ಆಯ್ಕೆ ಸಮಿತಿ ಶಮಿ ಅವರನ್ನು ಕೈ ಬಿಟ್ಟಿತು. ಶಮಿ ಈಗ ದೇಶೀಯ ಟೂರ್ನಿಯಲ್ಲಿ ಆಡಲು ಸಿದ್ಧರಾಗುತ್ತಿದ್ದಾರೆ. ಅಲ್ಲದೆ ತಮ್ಮಲ್ಲಿ ಇನ್ನು ಕ್ಷಮತೆ ಇರುವುದಾಗಿ ತಿಳಿಸಲು ಇದನ್ನು ವೇದಿಕೆಯನ್ನಾಗಿ ಮಾಡಿಕೊಳ್ಳಲಿದ್ದಾರೆ. 35 ವರ್ಷದ ಶಮಿ ಭಾರತದ ಪರ 64 ಟೆಸ್ಟ್ ಹಾಗೂ 108 ಏಕದಿನ ಪಂದ್ಯಗಳನ್ನು ಆಡಿದ್ದಾರೆ.