ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಹಿನ್ನಡೆಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡದ ಸ್ಟಾರ್ ವೇಗದ ಮೊಹಮ್ಮದ್ ಶಮಿ ಹೊರಗುಳಿದಿದ್ದಾರೆ. ಫಿಟ್ನೆಸ್ ದೃಷ್ಟಿಯಿಂದ ಶಮಿ ಅವರು ಹೊರಗುಳಿದಿರುವ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಗೌರವ ಜಂಟಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಖಚಿತಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಉಳಿದ ಎರಡು ಪಂದ್ಯಗಳಿಗೆ ಮೊಹಮ್ಮದ್ ಶಮಿ ಭಾರತ ತಂಡವನ್ನು ಸೇರುವ ನಿರೀಕ್ಷೆಯಿತ್ತು. ಇದೀಗ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮೊಹಮ್ಮದ್ ಶಮಿ ಹೊರಗುಳಿದಿರುವುದು ಬೇಸರ ತರಿಸಿದೆ.

ಕಳೆದ ಒಂದು ವರ್ಷದಿಂದ ಭಾರತ ತಂಡಕ್ಕೆ ಮೊಹಮ್ಮದ್ ಶಮಿ ಆಗಮನಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಶಮಿ ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದಾದ ನಂತರ ಕಾಲಿನ ಊತ ಅವರ ಪುನರಾಗಮನವನ್ನು ಮತ್ತಷ್ಟು ತಡವಾಗುವಂತೆ ಮಾಡಿದೆ. ಇದೀಗ ಬಾರ್ಡರ್-ಗವಾಸ್ಕರ್ ಜೊತೆಗೆ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿಯೂ ಆಡುವುದು ಅವರಿಗೆ ಕಷ್ಟಕರವಾಗಿದೆ.
ಮೊಹಮ್ಮದ್ ಶಮಿ ಗಾಯದ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿ ನೀಡಿದೆ. ತನ್ನ ಪ್ರಕಟಣೆಯಲ್ಲಿ 'ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿರುವ ಬಿಸಿಸಿಐನ ವೈದ್ಯಕೀಯ ತಂಡವು ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಬಲ ಹಿಮ್ಮಡಿಯ ಶಸ್ತ್ರಚಿಕಿತ್ಸೆಯ ನಂತರ ಅವರ ಚೇತರಿಕೆ ಕುರಿತು ಚಿಕಿತ್ಸೆ ಆರಂಭಿಸಿದೆ. ಹಿಮ್ಮಡಿ ಸಮಸ್ಯೆಯಿಂದ ಶಮಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಮೊದಲ ರೀತಿ ಶಮಿ ಬೌಲಿಂಗ್ ಮಾಡಲು ಹೆಚ್ಚು ಸಮಯ ಬೇಕಾಗಿದೆ. ಇದರಿಂದಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿಯ ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ಅವರನ್ನು ಫಿಟ್ ಎಂದು ಪರಿಗಣಿಸಲಾಗಿಲ್ಲ ಎಂದು ತಿಳಿಸಿದೆ.
ಮೊಣಕಾಲಿನ ಗಾಯದಿಂದಾಗಿ ಮೊಹಮ್ಮದ್ ಶಮಿ ಅವರಿಗೆ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ. ಹೀಗಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗೆ ಅವರು ಫಿಟ್ ಎಂದು ಪರಿಗಣಿಸಲಾಗಿಲ್ಲ. ಸ್ಟಾರ್ ಬೌಲರ್ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ.
ಈ ವರ್ಷ ನವೆಂಬರ್ನಲ್ಲಿ ನಡೆದ ರಣಜಿ ಟ್ರೋಫಿಯ ಮಧ್ಯಪ್ರದೇಶ ವಿರುದ್ಧ ಪಂದ್ಯದಲ್ಲಿ ಬಂಗಾಳದ ಪರ ಮೊಹಮ್ಮದ್ ಶಮಿ 43 ಓವರ್ ಬೌಲಿಂಗ್ ಮಾಡಿದ್ದರು. ನಂತರ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಎಲ್ಲಾ 9 ಪಂದ್ಯಗಳಲ್ಲಿ ಆಡಿದ್ದರು. ಇದರ ನಡುವೆ ಅವರು ಟೆಸ್ಟ್ ಪಂದ್ಯಗಳಿಗೆ ತಯಾರಾಗಲು ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚುವರಿ ಬೌಲಿಂಗ್ ಅವಧಿಗಳಲ್ಲಿ ಭಾಗವಹಿಸಿದರು. ದೀರ್ಘ ಸಮಯದ ನಂತರ ಹೆಚ್ಚಿದ ಬೌಲಿಂಗ್ನಿಂದಾಗಿ ಊತವು ಕಾಣಿಸಿಕೊಂಡಿದೆ.