ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಭಾರತ ತಂಡಕ್ಕೆ ಭರ್ಜರಿ ಕಂ ಬ್ಯಾಕ್ ಮಾಡಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಮತ್ತೆ ಬಹು ತಿಂಗಳುಗಳ ಬಳಿಕ ತಂಡಕ್ಕೆ ಮರಳಿದ್ದಾರೆ. ತಮ್ಮ ಸ್ವಿಂಗ್ ಬೌಲಿನಿಂಗ್ನಿಂದಲೇ ಎದುರಾಳಿಗಳನ್ನು ಕಾಡುವ ಶಮಿ ಅನುಪಸ್ಥಿತಿ ಈ ಹಿಂದಿನ ಹಲವು ಸರಣಿಗಳಲ್ಲಿ ಎದ್ದು ಕಂಡಿದೆ. ಆದರೆ ಈಗ ಅವರ ಸಂಪೂರ್ಣ ಫಿಟ್ ಆಗಿದ್ದು, ಭಾರತ ತಂಡಕ್ಕೆ ಚಾಂಪಿಯನ್ಸ್ ಟ್ರೋಫಿ ಮುಕುಟ ತೊಡಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಸ್ವಿಂಗ್ ಬೌಲರ್ ಶಮಿ ಗಾಯಕ್ಕೆ ತುತ್ತಾಗಿದ್ದರು. ಇದೇ ವೇಳೆ ಅವರು ಶಸ್ತ್ರ ಚಿಕಿತ್ಸೆಗೂ ಒಳಗಾದರು. ಈ ಸಂದರ್ಭದಲ್ಲಿ ಶಮಿ ಹಲವು ಬಾರಿ ಕ್ರಿಕೆಟ್ ಅಂಗಳಕ್ಕೆ ಶೀಘ್ರ ಬರುವುದಾಗಿ ತಿಳಿಸಿದ್ದರು. ಕೊನೆಗೂ ಅವರ ಆಸೆ ಈಡೇರಿದೆ. ಮಾಜಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಮೊಹಮ್ಮದ್ ಶಮಿ ತಂಡಕ್ಕೆ ಕಂ ಬ್ಯಾಕ್ ಮಾಡಲು ರೆಡಿಯಾಗಿದ್ದಾರೆ.

ಮೊಹಮ್ಮದ್ ಶಮಿ ಈ ಸಾಹಸ ಅಷ್ಟು ಸುಲಭವಾಗಿರಲಿಲ್ಲ. ಆರಂಭದಲ್ಲಿ ಪಾದಕ್ಕೆ ಶಸ್ತ್ರ ಚಿಕಿತ್ಸೆ ಮುಗಿದ ಬಳಿಕ ಮೈದಾನಕ್ಕೆ ಎಂಟ್ರಿ ನೀಡಿದರು. ಕ್ರಮೇಣ ಚೇತರಿಸಿಕೊಳ್ಳುತ್ತಾ ಸಾಗಿದರು. ಈ ವೇಳೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುವ ಮುನ್ನವೇ ದೇಶೀಯ ಕ್ರಿಕೆಟ್ನಲ್ಲಿ ಆಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದರು. ಅದರಂತೆ ಶಮಿ ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಆಯ್ಕೆ ದಾರರ ಗಮನ ಸೆಳೆದರು.
ಸ್ಪೋರ್ಟ್ಸ್ಬೂಮ್.ಕಾಮ್ ವರದಿಯ ಪ್ರಕಾರ, ತರಬೇತುದಾರ ಶಿಬ್ ಶಂಕರ್ ಪಾಲ್ ಹಲವು ವಿಚಾರಗಳನ್ನು ತೆಗೆದಿಟ್ಟಿದ್ದಾರೆ. ಶಮಿ ಬೌಲಿಂಗ್ ಮಾಡಲು ಮೈದಾನಕ್ಕೆ ಬರುವಾಗ ಎಲ್ಲರೂ ಬರುವ ಮುನ್ನವೇ ಅಭ್ಯಾಸಕ್ಕೆ ಹಾಜರಾಗುತ್ತಿದ್ದರು. ಎಲ್ಲರೂ ಹೋದರೂ ಇನ್ನು ಶಮಿ ಮೂದಾನದಲ್ಲಿ ಬೆವರು ಹರಿಸುತ್ತಿದ್ದರು. ಇದು ಶಮಿ ಅವರಿಗೆ ಕ್ರೀಡೆಯ ಮೇಲೆ ಇದ್ದ ಪ್ರೀತಿ ತೋರಿಸುತ್ತದೆ ಎಂದಿದ್ದಾರೆ.

ಶಮಿ ಕಟ್ಟುನಿಟ್ಟಿನ ಆಹಾರ ಕ್ರಮ ಹೊಂದಿದ್ದಾರೆ. ಅವರು ದಿನಕ್ಕೆ ಒಮ್ಮೆ ಮಾತ್ರ ತಿನ್ನುವುದನ್ನು ನಾನು ನೋಡಿದೆ. ಅವರಿಗೆ ಬಿರಿಯಾನಿ ಇಷ್ಟ, ಆದರೆ ಕ್ರಿಕೆಟ್ಗೆ ಕಂ ಬ್ಯಾಕ್ ಮಾಡುವ ಸಲುವಾಗಿ ಸುಮಾರು ಎರಡು ತಿಂಗಳಿನಿಂದ ಅವರು ಬಿರಿಯಾನಿ ತಿಂದಿಲ್ಲ ಎಂದು ತಿಳಿಸಿದ್ದಾರೆ. ಶಮಿ ಅದೆಷ್ಟೋ ಬಾರಿ ಸಂದರ್ಶನಗಳಲ್ಲಿ ತಮಗೆ ಬಿರಿಯಾನಿ ಇಷ್ಟ ಎಂದು ತಿಳಿಸಿದ್ದರು. ಆದರೆ ಈಗ ತಂಡಕ್ಕೆ ಕಂ ಬ್ಯಾಕ್ ಮಾಡಲು ತಮ್ಮ ಇಷ್ಟದ ಆಹಾರವನ್ನು ತ್ಯಜಿಸಿದ್ದಾರೆ.
ಏಕದಿನ ಫಾರ್ಮೆಟ್ನಲ್ಲಿ ಮನಮೋಹ ಪ್ರದರ್ಶನ ನೀಡಿರುವ ಮೊಹಮ್ಮದ್ ಶಮಿ ಈ ಬಾರಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ತಂಡಕ್ಕೆ ಚಾಂಪಿಯನ್ಸ್ ಟ್ರೋಫಿಯ ಮುಕುಟ ತೊಡಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹಾಗಿದ್ದರೆ ಶಮಿ ತಮ್ಮ ಪ್ರಯತ್ನದಲ್ಲಿ ಯಶಸ್ಸು ಕಾಣಲಿ ಎಂಬುದೇ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಆಶಯ.