ಚಾಂಪಿಯನ್ಸ್ ಟ್ರೋಫಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ವೇಳೆ ಎಲ್ಲ ತಂಡಗಳು ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿವೆ. ಭಾರತ ಸಹ ಪ್ರಶಸ್ತಿ ಗೆಲ್ಲುವ ಹಾಟ್ ಫೆವರೀಟ್ ತಂಡಗಳಲ್ಲಿ ಒಂದಾಗಿದೆ. ಚಾಂಪಿಯನ್ಸ್ ಟ್ರೋಫಿಗೆ ಪ್ರಕಟಿತ ಟೀಮ್ ಇಂಡಿಯಾ ಬಲಾಢ್ಯವಾಗಿದೆ. ಆದರೆ ಅಭಿಮಾನನಿಗಳು ಹಾಗೂ ತಂಡದ ಮ್ಯಾನೇಜ್ಮೆಂಟ್ಗೆ ಒಂದೇ ಚಿಂತೆ ಇತ್ತು. ಸ್ಟಾರ್ ವೇಗದ ಫಾರ್ಮ್ ಎಲ್ಲರ ಚಿಂತೆಯನ್ನು ದ್ವಿಗುಣ ಮಾಡಿತ್ತು. ಆದರೆ ಈ ಎಲ್ಲ ಪ್ರಶ್ನೆಗಳಿಗೆ ಸ್ವಿಂಗ್ ಬೌಲರ್ ಮುಂಬೈನಲ್ಲಿ ಉತ್ತರ ನೀಡಿದ್ದಾರೆ.
ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟಿ20 ಪಂದ್ಯ ಮುಂಬೈನ ವಾಂಖೇಡೆ ಅಂಗಳದಲ್ಲಿ ನಡೆಯಿತು. ಈ ವೇಳೆ ಸೂರ್ಯಕುಮಾರ್ ಟಾಸ್ ಸೋತರು. ಆದರೆ ಅಭಿಮಾನಿಗಳ ಚಿತ್ತ ಭಾರತ ತಂಡದಲ್ಲಿ ಯಾವೆಲ್ಲಾ ಬದಲಾವಣೆಗಳು ಆಗಲಿವೆ ಎಂಬುದರ ಮೇಲೆ ಇತ್ತು. ನಿರೀಕ್ಷೆಯಂತೆ ಟೀಮ್ ಇಂಡಿಯಾದ ಭರವಸೆಯ ಬೌಲರ್ ಅರ್ಷದೀಪ್ ಸಿಂಗ್ಗೆ ವಿಶ್ರಾಂತಿ ನೀಡಿ, ಅನುಭವಿ ಸ್ವಿಂಗ್ ಬೌಲರ್ ಮೊಹಮ್ಮದ್ ಶಮಿಗೆ ಅವಕಾಶ ನೀಡಲಾಯಿತು.

ಮೊಹಮ್ಮದ್ ಶಮಿ ಗಾಯದಿಂದ ಮೈದಾನಕ್ಕೆ ಇಳಿದ ಬಳಿಕ ಲಯವನ್ನು ಕಂಡು ಕೊಳ್ಳಲು ಪರದಾಡುತ್ತಿದ್ದರು. ಇದನ್ನು ಕಂಡು ಅಭಿಮಾನಿಗಳಲ್ಲೂ ಟೆನ್ಷನ್ ಆರಂಭವಾಗಿತ್ತು. ಜಸ್ಪ್ರಿತ್ ಬುಮ್ರಾ ಗಾಯದ ಬಗ್ಗೆಯೂ ಯಾವುದೇ ಅಪ್ಡೇಟ್ ಸಿಗುತ್ತಿಲ್ಲ ಶಮಿ, ಲಯಕ್ಕೆ ಮರಳುತ್ತಿಲ್ಲ ಎಂಬ ಚಿಂತೆ ಹೆಚ್ಚಾಗಿತ್ತು. ಆದರೆ ಮುಂಬೈನ ವಾಂಖೇಡೆ ಅಂಗಳದಲ್ಲಿ ಮೊಹಮ್ಮದ್ ಶಮಿ ತಾವು ಫಿಟ್ ಆಗಿರುವುದಾಗಿ ಸಾಬೀತು ಪಡಿಸಿದರು. ಇವರು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಮೂರು ವಿಕೆಟ್ ಕಬಳಿಸಿದರು. ಈ ಮೂಲಕ ತಾವು ಲಯಕ್ಕೆ ಮರಳಿರುವುದಾಗಿ ಸಾರಿ ಹೇಳಿದರು.
ಟೀಮ್ ಇಂಡಿಯಾ ಪರ ಶಮಿ 819 ದಿನಗಳ ಬಳಿಕ ಟಿ20 ವಿಕೆಟ್ ಪಡೆದು ಸಂಭ್ರಮಿಸಿದ್ದರು. ಇದಕ್ಕೂ ಮೊದಲು 2022ರಲ್ಲಿ ಜಿಂಬಾಬ್ವೆ ವಿರುದ್ಧದ ಟಿ20 ವಿಶ್ವಕಪ್ 2022ರ ಪಂದ್ಯದಲ್ಲಿ ಶಮಿ 2 ವಿಕೆಟ್ ಪಡೆದಿದ್ದರು. ಅದಾದ ಬಳಿಕ ಇದೇ ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬರಿಗೈಯಲ್ಲಿ ವಾಪಸ್ ಆಗಿದ್ದರು. ಆದರೆ ಮುಂಬೈನಲ್ಲಿ ಶಮಿ ಶಿಸ್ತು ಬದ್ಧ ದಾಳಿಯನ್ನು ಸಂಘಟಿಸಿ ಮಿಂಚಿದರು. ಈ ಮೂಲಕ ತಮ್ಮಲ್ಲಿ ಇನ್ನು ಬೌಲಿಂಗ್ ಮಾಡುವ ಕ್ಷಮತೆ ಇರುವುದಾಗಿ ಸಾರಿ ಹೇಳಿದರು.

ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಆರಂಭವಾಗಲಿದೆ. ಈ ಬಾರಿ ಚಾಂಪಿಯನ್ಸ್ ಟ್ರೋಫಿ ಏಕದಿನ ಫಾರ್ಮೆಟ್ನಲ್ಲಿ ನಡೆಯಲಿದ್ದು, ಹೈಬ್ರೀಡ್ ಮಾದರಲ್ಲಿಯಲ್ಲಿ ನಡೆಯಲಿದೆ. ಭಾರತ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಟೀಮ್ ಇಂಡಿಯಾ ಫೆಬ್ರವರಿ 20 ರಂದು ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇನ್ನು ಚಾಂಪಿಯನ್ಸ್ ಟ್ರೋಫಿಯ ಪ್ರಕಟಿತ ತಂಡದಲ್ಲಿ ಏನಾದ್ರೂ ಮಾರ್ಪಾಡುಗಳು ಮಾಡಬೇಕಿದಲ್ಲಿ ಫೆಬ್ರವರಿ 11ರ ವರೆಗೂ ಅವಕಾಶ ನೀಡಲಾಗಿದೆ.