ಭಾರತ ಹಾಗೂ ಅಮೆರಿಕ ತಂಡಗಳು ಟಿ20 ವಿಶ್ವಕಪ್ 2026 ಗುಂಪು ಹಂತದ ಪಂದ್ಯದಲ್ಲಿ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಭರ್ಜರಿ ಜಯ ದಾಖಲಿಸಿದೆ. ಬ್ಯಾಟಿಂಗ್ನಲ್ಲಿ ಸೂರ್ಯಕುಮಾರ್ ಯಾದವ್ ಅಮೋಘ ಪ್ರದರ್ಶನ ನೀಡಿದರೆ, ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್ ಅಬ್ಬರಿಸಿದರು. ಪರಿಣಾಮ ಟೀಮ್ ಇಂಡಿಯಾ ಗೆಲುವಿನ ಆರಂಭವನ್ನು ಮಾಡುವಲ್ಲಿ ನೆರವಾದರು. 24 ಗಂಟೆಗಳ ಮೊದಲು ತಂಡದಲ್ಲಿ ಇರದ ಮೊಹಮ್ಮದ್ ಸಿರಾಜ್ ಈಗ ಗೆಲುವಿನ ಹೀರೋ ಆದರು.
ಟೀಮ್ ಇಂಡಿಯಾದ ಟೆಸ್ಟ್ ತಂಡದ ಅವಿಭಾಜ್ಯ ಅಂಗವಾಗಿರುವ ಮೊಹಮ್ಮದ್ ಸಿರಾಜ್, ಟಿ20 ಫಾರ್ಮೆಟ್ನಿಂದ ದೂರ ಉಳಿದಿದ್ದರು. ಇವರು ಟೀಮ್ ಇಂಡಿಯಾ ಪರ 30 ಜುಲೈ 2024ರಲ್ಲಿ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು. ಅಲ್ಲಿಂದ ಟಿ20 ಫಾರ್ಮೆಟ್ಗೆ ಕಂ ಬ್ಯಾಕ್ ಮಾಡಲು ಹರಸಾಹಸ ಪಡುತ್ತಿದ್ದರು. ಆದರೆ ಆ ಕನಸಿಗೆ ಟಿ20 ವಿಶ್ವಕಪ್ ವೇದಿಕೆ ಕಲ್ಪಿಸಿಕೊಟ್ಟಿತು.

ಟೀಮ್ ಇಂಡಿಯಾದ ಟಿ20 ವಿಶ್ವಕಪ್ ತಂಡವನ್ನು ಪ್ರಕಟಿಸಿದಾಗ ಮೊಹಮ್ಮದ್ ಸಿರಾಜ್ ಅವರಿಗೆ ತಂಡದಲ್ಲಿ ಸ್ಥಾನ ಲಭಿಸಿರಲಿಲ್ಲ. ಇವರು ದೇಶೀಯ ಟೂರ್ನಿಯಲ್ಲಿ ಹೈದರಾಬಾದ್ ತಂಡದ ಪರ ಬಿಗುವಿನ ದಾಳಿ ನಡೆಸಿ ಮಿಂಚುತ್ತಿದ್ದರು. ಇವರು ಟಿ20 ವಿಶ್ವಕಪ್ನಲ್ಲಿ ತಮಗೆ ಸ್ಥಾನ ಲಭಿಸಬಹುದು ಎಂಬ ಆಸೆಯನ್ನು ಸಹ ಹೊಂದಿರಲಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ಅದೃಷ್ಟ ಇವರ ಮನೆಯ ಬಾಗಿಲನ್ನು ಹುಡುಕಿಕೊಂಡು ಹೋಗಿದೆ.
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಹರ್ಷಿತ್ ರಾಣಾ ಸ್ಥಿರ ಪ್ರದರ್ಶನ ನೀಡಿದ್ದರು. ಇವರ ಮೇಲೆ ನಿರೀಕ್ಷೆಗಳು ಸಹ ಹೆಚ್ಚಾಗಿದ್ದವು. ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬೌಲಿಂಗ್ ಮಾಡುವಾಗ ಹರ್ಷಿತ್ ಗಾಯಕ್ಕೆ ತುತ್ತಾದರು. ಪರಿಣಾಮ ಅವರನ್ನು ಸ್ಕ್ಯಾನಿಂಗ್ಗೆ ಒಳಪಡಿಸಲಾಯಿತು. ಆಗ ಇವರ ಗಾಯದ ತೀವ್ರತೆಯನ್ನು ಅರಿತ ಬಿಸಿಸಿಐ ಇವರನ್ನು ಟಿ20 ವಿಶ್ವಕಪ್ನಿಂದ ಕೈ ಬಿಟ್ಟಿತು. ಅಲ್ಲದೆ ಅನುಭವಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿತು.
ಸಿರಾಜ್ ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ, ಅವರು ಫೆಬ್ರವರಿ 15 ರಂದು ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಲು ಸ್ಪೇನ್ಗೆ ಪ್ರಯಾಣಿಸಲು ಯೋಜಿಸಿದ್ದರು. ಆದರೆ ಆ ಒಂದು ಕಾಲ್ ಅವರ ಅದೃಷ್ಟವನ್ನೇ ಬದಲಿಸಿತು. ಹರ್ಷಿತ್ ರಾಣಾ ಗಾಯಕ್ಕೆ ತುತ್ತಾಗುತ್ತಿದ್ದಂತೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಮೊಹಮ್ಮದ್ ಸಿರಾಜ್ ಅವರಿಗೆ ಕಾಲ್ ಮಾಡಿ ತಂಡ ಸೇರಬೇಕು ಎಂದು ತಿಳಿಸಿದರು. ಬಳಿಕ ಆಯ್ಕೆ ಸಮಿತಿ ಸದಸ್ಯ ಪ್ರಗ್ಯಾನ್ ಓಜಾ ಕರೆ ಮಾಡಿ ತಂಡ ಸೇರಿಕೊಳ್ಳುವಂತೆ ಸೂಚಿಸಿದರು. ಸಿರಾಜ್ ಟೀಮ್ ಇಂಡಿಯಾ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದರು.

ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿರುವ ಸಿರಾಜ್, ನನಗೆ ಸೂರ್ಯ ಕಾಲ್ ಮಾಡಿದು. ಮತ್ತು ಬ್ಯಾಗ್ ಪ್ಯಾಕ್ ಮಾಡಲು ಸೂಚಿಸಿದರು. ಆಗ ನಾನು ಸೂರ್ಯ ಭಾಯ್ ಜೋಕ್ ಮಾಡಬೇಡಿ. ಇದು ಖಂಡಿತಾ ನಡೆಯಲು ಸಾಧ್ಯವಿಲ್ಲ' ಎಂದೆ. ಅವರು ನಾನು ನಿಜವನ್ನೇ ಹೇಳುತ್ತಿರುವುದು ತಕ್ಷಣ ನೀನು ರೆಡಿಯಾಗಲು ತಿಳಿಸಿದರು ಎಂದು ಸಿರಾಜ್ ವಿವರಿಸಿದ್ದಾರೆ.
ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡಿರುವ ಸಿರಾಜ್ ಅಮೆರಿಕ ವಿರುದ್ಧ ಅಬ್ಬರಿಸಿದರು. ಇವರು 557 ದಿನಗಳ ಬಳಿಕ ಟೀಮ್ ಇಂಡಿಯಾದ ಪರ ಮೊದಲ ಟಿ20 ಪಂದ್ಯವನ್ನು ಆಡಿದರು. ಅದು ಸಹ ಬಿಗುವಿನ ದಾಳಿ ನಡೆಸಿ ಅಮೆರಿಕ ವಿರುದ್ಧ ಮೂರು ವಿಕೆಟ್ ಪಡೆದರು.
ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ 45 ಟೆಸ್ಟ್ ಪಂದ್ಯಗಳನ್ನು ಆಡಿದ್ದು 139 ವಿಕೆಟ್ ಪಡೆದಿದ್ದಾರೆ. ಅಲ್ಲದೆ 50 ಏಕದಿನ ಪಂದ್ಯಗಳಲ್ಲಿ 76 ವಿಕೆಟ್ ಉರುಳಿಸಿದ್ದು, ಆಡಿದ 17 ಟಿ20 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿದ್ದಾರೆ.