ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ತಮ್ಮ ಕರಾರುವಕ್ ದಾಳಿಯಿಂದ ಎದುರಾಳಿ ಬ್ಯಾಟರ್ಗಳನ್ನು ಕಟ್ಟಿ ಹಾಕುವ ಪ್ಲೇಯರ್. ಇವರ ಪರ್ಫೆಕ್ಟ್ ಲೈನ್ ಹಾಗೂ ಲೆಂತ್ಗಳು ಎದುರಾಳಿ ಬ್ಯಾಟರ್ಗಳನ್ನು ಕಾಡುತ್ತವೆ. ಇವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸಂದಿದೆ.
ಮೊಹಮ್ಮದ್ ಸಿರಾಜ್ ಅವರಿಗೆ ಶುಕ್ರವಾರ ತೆಲಂಗಾಣ ಪೊಲೀಸ್ನಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (DSP) ಹುದ್ದೆಯನ್ನು ವಹಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರಿಗೆ ಈ ಪದವಿಯನ್ನು ನೀಡಿದ್ದರ ಬಗ್ಗೆ ತೆಲಂಗಾಣ ಪೊಲೀಸ್ ಇಲಾಖೆ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದೆ. ಇನ್ನು ಮೈದಾನದ ಹೊರಗೆ ಸಿರಾಜ್ ಖಡಕ್ ಪೊಲೀಸ್ ಆಫೀಸರ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟೀಮ್ ಇಂಡಿಯಾದ ವೇಗದ ಬೌಲರ್ ಸಿರಾಜ್, ಹಲವು ಮಹತ್ವದ ಸನ್ನಿವೇಶಗಳಲ್ಲಿ ಬಿಗುವಿನ ದಾಳಿ ನಡೆಸಿ ಗಮನ ಸೆಳೆದ ಪ್ಲೇಯರ್. ಅಲ್ಲದೆ 2024ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದಿದ್ದ, ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಸದಸ್ಯ. ಇವರ ಅಮೋಘ ಸಾಧನೆಗಾಗಿ ತೆಲಂಗಾಣ ಪೊಲೀಸ್ ಈ ಹುದ್ದೆ ನೀಡಿದೆ. ಪ್ರಸಕ್ತ ವರ್ಷ ಟೀಮ್ ಇಂಡಿಯಾ ಟಿ20 ಕ್ರಿಕೆಟ್ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಬಳಿಕ, ಸಿರಾಜ್ ಅವರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಅಲ್ಲಿನ ಸರ್ಕಾರ ಘೋಷಿಸಿತ್ತು. ಈಗ ಸರ್ಕಾರ ತಾನು ಕೊಟ್ಟ ಮಾತನ್ನು ಉಳಿಸಿಕೊಂಡಿದೆ.
ತೆಲಂಗಾಣ ಪೊಲೀಸ್ ಇಲಾಖೆಯ ನೂತನ ಜವಾಬ್ದಾರಿಯನ್ನು ಸಿರಾಜ್ ಒಪ್ಪಿಕೊಂಡಿದ್ದಾರೆ. ಈ ಜವಾಬ್ದಾರಿ ಅವರ ಕ್ರಿಕೆಟ್ ಬುದಕಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇನ್ನು ಟಿ20 ವಿಶ್ವಕಪ್ ಚಾಂಪಿಯನ್ ಆದ ಬಳಿಕ ಸಿರಾಜ್ ಅವರಿಗೆ ಸರ್ಕಾರಿ ಉದ್ಯೋಗದ ಜೊತೆ ಜಮೀನು ನೀಡುವ ಬಗ್ಗೆ ತಿಳಿಸಲಾಗಿತ್ತು. ಈಗ ಸಿರಾಜ್ಗೆ ಉದ್ಯೋಗದ ಜತೆಗೆ ಹೈದರಾಬಾದ್ನಲ್ಲಿ ಮನೆಗಾಗಿ ಜಮೀನು ನೀಡಲಾಗಿದೆ. ಟಿ20 ವಿಶ್ವಕಪ್ ಚಾಂಪಿಯನ್ ತಂಡದಲ್ಲಿ ಸ್ಥಾನ ಪಡೆದಿದ್ದ ಏಕೈಕ ತೆಲಂಗಾಣ ಆಟಗಾರ ಸಿರಾಜ್.
ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ಗಳಲ್ಲಿ ಕಾಣಿಸಿಕೊಳ್ಳುವ ಸಿರಾಜ್, ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ದೊಡ್ಡ ಎತ್ತರಕ್ಕೆ ಬೆಳೆದ ಆಟಗಾರ. ಆರಂಭದಲ್ಲಿ ದೇಶೀಯ ಟೂರ್ನಿಯಲ್ಲಿ ಅಬ್ಬರಿಸಿದ್ದ ಸಿರಾಜ್, ನಂತರ ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನ ನೀಡಿ ಟೀಮ್ ಇಂಡಿಯಾದಲ್ಲಿ ಆಡುವ ಸ್ಥಾನ ಪಡೆದರು. ಟೀಂ ಇಂಡಿಯಾ ಪರ ಸಿರಾಜ್ 29 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 78 ವಿಕೆಟ್ಗಳು ಕಬಳಿಸಿದ್ದಾರೆ. ಇದರಲ್ಲಿ 15 ರನ್ಗಳಿಗೆ 6 ವಿಕೆಟ್ಗಳನ್ನು ಕಬಳಿಸಿರುವುದು ಸಿರಾಜ್ ಅವರ ಶ್ರೇಷ್ಠ ಸಾಧನೆ ಆಗಿದೆ. ಇನ್ನು ಟೀಮ್ ಇಂಡಿಯಾ ಪರ 44 ಏಕದಿನ ಪಂದ್ಯಗಳಲ್ಲಿ ಸಿರಾಜ್ 71 ಹಾಗೂ 16 ಟಿ20 ಪಂದ್ಯಗಳಲ್ಲಿ 14 ವಿಕೆಟ್ ಉರುಳಿಸಿದ್ದಾರೆ.