
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಲಭಿಸಿದ್ದು ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರ ಪಾಲಿಗೆ ಅವಿಸ್ಮರಣೀಯ ಕ್ಷಣ. ಸಿರಾಜ್ ತಂದೆ ಮೊಹಮ್ಮದ್ ಗೌಸ್ ಅವರಿಗೂ ಮಗ ದೇಶಕ್ಕಾಗಿ ಆಡಬೇಕನ್ನೋ ಕನಸಿತ್ತು. ಇನ್ನು ಟೆಸ್ಟ್ ಸರಣಿಯಲ್ಲಿ ಭಾರತ ಗೆದ್ದರೆ ಸಿರಾಜ್ ಪಾಲಿಗೆ ಆಸ್ಟ್ರೇಲಿಯಾ ಪ್ರವಾಸ ಇನ್ನೂ ಚಿರಸ್ಮರಣೀಯ ಅನ್ನಿಸಲಿದೆ.
ಆದರೆ ಸಿರಾಜ್ ಟೆಸ್ಟ್ ಸರಣಿ ಆಡುವುದಕ್ಕೂ ಮುನ್ನವೇ ಅವರಿಗೆ ಆಘಾತಕಾರಿ ವಿಚಾರವೊಂದು ಕೇಳಿ ಬಂದಿತ್ತು. ಶ್ವಾಸಕೋಶಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯಲ್ಲಿ ಬಳಲುತ್ತಿದ್ದ ಸಿರಾಜ್ ತಂದೆ ಕಳೆದ ಶುಕ್ರವಾರ ಹೈದರಾಬಾದ್ನಲ್ಲಿ ಕೊನೆಯುಸಿರೆಳೆದಿದ್ದರು. ಭಾರತಕ್ಕೆ ವಾಪಸ್ ಬರಲು ಸಿರಾಜ್ಗೆ ಬಿಸಿಸಿಐ ಅವಕಾಶ ನೀಡಿತ್ತಾದರೂ ಸಿರಾಜ್ ತಂಡದ ಜೊತೆಗಿರುವ ನಿರ್ಧಾರ ತಾಳಿದ್ದರು.
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿರುವ ಸಿರಾಜ್ ಸಹೋದರ ಮೊಹಮ್ಮದ್ ಇಸ್ಮಾಯಿಲ್, 'ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಚೆನ್ನಾಗಿ ಆಡುವ ಮೂಲಕ ತಂದೆಗೆ ಗೌರವ ಸಲ್ಲಿಸುವುದಾಗಿ ಸಿರಾಜ್ ಭರವಸೆ ನೀಡಿದ್ದಾನೆ. ತಂದೆಗೋಸ್ಕರ ಟೆಸ್ಟ್ ಸರಣಿ ಗೆಲ್ಲಲು ಸಿರಾಜ್ ಬಯಸಿದ್ದಾನೆ,' ಎಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುವ ಸಿರಾಜ್, ಭಾರತ-ಆಸ್ಟ್ರೇಲಿಯಾ ಸರಣಿಯಲ್ಲಿ ಟೆಸ್ಟ್ ತಂಡದಲ್ಲಿ ಹೆಸರಿಸಲ್ಪಟ್ಟಿದ್ದಾರೆ. ಇತ್ತಂಡಗಳ ಸರಣಿ ನವೆಂಬರ್ 27ರ ಶುಕ್ರವಾರದಿಂದ ಆರಂಭಗೊಳ್ಳಲಿದೆ. ಟೆಸ್ಟ್ ಸರಣಿ ಡಿಸೆಂಬರ್ 17ರಿಂದ ಆರಂಬಗೊಳ್ಳಲಿದೆ.