ಇನ್ನೇನು ಕೆಲವೇ ದಿನಗಳಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿ ಟೀಮ್ ಇಂಡಿಯಾಕ್ಕೆ ಸವಾಲಾಗಿದೆ. ಅನುಭವಿಗಳ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಶುಭಮನ್ ಗಿಲ್ ಹೊಂದಿದ್ದಾರೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಯುವ ಆಟಗಾರರು ಆರ್ಭಟಿಸುವ ಕನಸು ಕಾಣುತ್ತಿದ್ದಾರೆ. ಈ ಟೆಸ್ಟ್ ಸರಣಿಯ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ಎಡಗೈ ಸ್ಪಿನ್ನರ್ ಮಾಂಟಿ ಪನೇಸರ್ ದೊಡ್ಡ ಹೇಳಿಕೆ ನೀಡಿದ್ದಾರೆ.
ಒಂದು ಸರಣಿ ಆರಂಭವಾಗುತ್ತಿದ್ದಂತೆ ಮಾಜಿ ಆಟಗಾರರು, ಸರಣಿಯಲ್ಲಿ ಗೆಲ್ಲಬಹುದಾದ ತಂಡವನ್ನು ಹೆಸರಿಸುತ್ತಾರೆ. ಈ ಬಾರಿಯೂ ಇಂಗ್ಲೆಂಡ್ ಮಾಜಿ ಆಟಗಾರ ಇದೇ ಕೆಲಸವನ್ನು ಮಾಡಿದ್ದಾರೆ. ಇವರ ಹೇಳಿಕೆ ಸದ್ಯ ವೈರಲ್ ಆಗುತ್ತಿದೆ. ಭಾರತದ ಯುವ ಪಡೆ ಈ ಸರಣಿಯನ್ನು ಗೆಲ್ಲುವ ನೆಚ್ಚಿನ ತಂಡ ಎಂದು ಮೌಂಟಿ ತಿಳಿಸಿದ್ದಾರೆ. ಜೂನ್ 20 ರಿಂದ ಆರಂಭವಾಗುವ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಯುವ ಆಟಗಾರರು ಸ್ಥಿರ ಪ್ರದರ್ಶನ ನೀಡಬಲ್ಲರು ಎಂಬ ವಿಶ್ವಾಸವನ್ನು ಇಂಗ್ಲೆಂಡ್ ಸ್ಪಿನ್ ಬೌಲರ್ ಹೊಂದಿದ್ದಾರೆ.

ಟೀಮ್ ಇಂಡಿಯಾದ ಹಲವು ಆಟಗಾರರು ಇಂಗ್ಲೆಂಡ್ನಲ್ಲಿ ಕೌಂಟಿ ಪಂದ್ಯಗಳನ್ನು ಆಡುತ್ತಾರೆ. ಇದರ ಲಾಭವನ್ನು ಅವರು ಹೆಚ್ಚಾಗಿ ಪಡೆಯಲಿದ್ದಾರೆ. ಟೀಮ್ ಇಂಡಿಯಾ ಈ ಸರಣಿಯನ್ನು 2-0 ಅಂತರದಿಂದ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಭಾರತ ತಂಡ ಇಂಗ್ಲೆಂಡ್ನ 'ಬ್ಯಾಕ್ಬಾಲ್' ತಂತ್ರವನ್ನು ಉತ್ತಮವಾಗಿ ನಿಭಾಯಿಸುತ್ತದೆ ಎಂದು ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.
ಭಾರತ ತಂಡದಲ್ಲಿ ಕೌಂಟಿ ಕ್ರಿಕೆಟ್ನಲ್ಲಿ ಆಡುವ ಸಾಕಷ್ಟು ಆಟಗಾರರು ಇದ್ದಾರೆ. ಈ ಆಟಗಾರರು ತಮ್ಮ ಅನುಭವವನ್ನು ತಂಡಕ್ಕೆ ಧಾರೆ ಎರೆಯಬಹುದು. ಕೌಂಟಿಯಲ್ಲಿ ಆಡುವುದರಿಂದ ಇಂಗ್ಲೆಂಡ್ ಪರಿಸ್ಥಿತಿಗಳ ಬಗ್ಗೆಯೂ ಅವರಿಗೆ ಚೆನ್ನಾಗಿ ಅರಿವಿದೆ. ಪಿಚ್ ವೇಗದ ಬೌಲರ್ಗಳಿಗೆ ಸಹಾಯ ಮಾಡಿದರೆ ಇಂಗ್ಲೆಂಡ್ ಈ ಸರಣಿಯಲ್ಲಿ ಲಾಭ ಪಡೆಯಬಹುದಾಗಿದೆ. ಆದರೆ ಫ್ಲ್ಯಾಟ್ ಪಿಚ್ಗಳಲ್ಲಿ ಭಾರತ ಮೇಲುಗೈ ಸಾಧಿಸುತ್ತದೆ ಎಂದು ಮೌಂಟಿ ಭವಿಷ್ಯ ನುಡಿದಿದ್ದಾರೆ. ಟೀಮ್ ಇಂಡಿಯಾ ಅಭ್ಯಾಸವನ್ನು ಮಾಡುತ್ತಿರುವಾಗ ಇಂಗ್ಲೆಂಡ್ ಮಾಜಿ ಆಟಗಾರ ಈ ಹೇಳಿಕೆ ನೀಡಿದ್ದು, ಆಟಗಾರರ ವಿಶ್ವಾಸ ಹೆಚ್ಚಿಸಿದೆ.

ರೋಹಿತ್ ಶರ್ಮಾ ಅವರಿಂದ ತೆರವಾದ ನಾಯಕ ಸ್ಥಾನವನ್ನು ಶುಭ್ಮನ್ ಗಿಲ್ ತುಂಬಿದ್ದಾರೆ. ಇವರ ಮುಂದೆ ಸಾಲು ಸಾಲು ಸವಾಲುಗಳು ಇವೆ. ಈ ಸವಾಲುಗಳನ್ನು ಹೇಗೆ ಮೆಟ್ಟಿ ನಿಲ್ಲುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ ಆಗಿದೆ. ಇನ್ನು ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಗಿಲ್ ಜೋಡಿಗೂ ಇದು ಮೊದಲ ಪರೀಕ್ಷೆ. ಈ ಸರಣಿಯಲ್ಲಿ ಶುಭಮನ್ ಗಿಲ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಹೇಗೆ ಪ್ರದರ್ಶನ ನೀಡುತ್ತದೆ ಎಂಬ ಬಗ್ಗೆ ಕುತೂಹಲ ಮನೆ ಮಾಡಿದೆ. ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಲಭಿಸುತ್ತದೆ ಎಂಬುದಕ್ಕೆ ಶುಕ್ರವಾರ ಉತ್ತರ ಸಿಗಲಿದೆ.