
ಢಾಕಾ, ಜುಲೈ 16: ವಿಶ್ವಕಪ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಬಾಂಗ್ಲಾದೇಶ ತಂಡ ವಿಫಲಗೊಂಡರೂ ಅನುಭವಿ ಆಟಗಾರ ಮಶ್ರಫೆ ಮೊರ್ತಾಝ ನಾಯಕನ ಸ್ಥಾನದಲ್ಲಿ ಮುಂದುವರಿದಿದ್ದು, ಮುಂಬರುವ ಶ್ರೀಲಂಕಾ ಪ್ರವಾಸದಲ್ಲಿ ಬಾಂಗ್ಲಾ ತಂಡವನ್ನು ಮುನ್ನಡೆಸಲಿದ್ದಾರೆ.
ಬಾಂಗ್ಲಾದೇಶದ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವರದಿಗಳ ಪ್ರಕಾರ ಶ್ರೀಲಂಕಾ ಪ್ರವಾಸಕ್ಕೆ ಬಾಂಗ್ಲಾ ಕ್ರಿಕೆಟ್ ಮಂಡಳಿಯು ತನ್ನ ಸ್ಟಾರ್ ಆಟಗಾರರಾದ ಶಾಕಿಬ್ ಅಲ್ ಹಸನ್ಗೆ ವಿರಾಮ ನೀಡಿದೆ. ಶಾಕಿಬ್ ವಿಶ್ವಕಪ್ನಲ್ಲಿ 606 ರನ್ಗಳನ್ನು ಗಳಿಸಿದರಲ್ಲದೆ ಒಟ್ಟು 11 ವಿಕೆಟ್ಗಳನ್ನೂ ಪಡೆದು ಮಿಂಚಿದ್ದರು.
ಶ್ರೀಲಂಕಾ ಪ್ರವಾಸದಲ್ಲಿ ಬಾಂಗ್ಲಾದೇಶ ತಂಡ ಮೂರು ಏಕದಿನ ಪಂದ್ಯಗಳ ಸರಣಿಯನ್ನಾಡಲಿದ್ದು, ಜುಲೈ 26, 28 ಮತ್ತು 31ರಂದು ಕೊಲೊಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.
ಶ್ರೀಲಂಕಾ ಪ್ರವಾಸಕ್ಕೆ ಪ್ರಕಟಿಸಲಾಗಿರುವ ಬಾಂಗ್ಲಾ ತಂಡ: ಮಶ್ರಫೆ ಮೊರ್ತಾಝ (ನಾಯಕ), ತಮಿಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಮುಷ್ಫಿಕರ್ ರಹೀಮ್, ಮಹ್ಮುದುಲ್ಲಾ ರಿಯಾದ್, ಮೊಹಮ್ಮದ್ ಮಿಥುನ್, ಮೊಸಾದೆಕ್ ಹುಸೇನ್, ಸಬ್ಬೀರ್ ರೆಹಮಾನ್, ರುಬೆಲ್ ಹುಸೇನ್, ಮುಸ್ತಾಫಿಝುರ್ ರೆಹಮಾನ್, ಅನಾಮುಲ್ ಹಕ್, ಮೆಹ್ದಿ ಹಸನ್ ಮಿರಾಝ್, ಮೊಹಮ್ಮದ್ ಸೈಫುದ್ದೀನ್ ಮತ್ತು ತೈಜುಲ್ ಇಸ್ಲಾಮ್.