ಅಹಮದಾಬಾದ್: ನಾಯಕ ವೆಂಕಟೇಶ್ ಅಯ್ಯರ್ ಬಾರಿಸಿದ ಅರ್ಧಶತಕ ಹಾಗೂ ಶಿವಾಂಗ್ ಕುಮಾರ್ ಪಡೆದ ಐದು ವಿಕೆಟ್ಗಳ ಬಲದಿಂದ ಮಧ್ಯ ಪ್ರದೇಶ ವಿಜಯ್ ಹಜಾರೆ ಏಕದಿನ ಸರಣಿಯಲ್ಲಿ 7 ವಿಕೆಟ್ಗಳಿಂದ ಕರ್ನಾಟಕ ತಂಡವನ್ನು ಮಣಿಸಿತು. ಕರ್ನಾಟಕ ಈ ಪಂದ್ಯದಲ್ಲಿ ಸೋಲು ಕಂಡರೂ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಕರ್ನಾಟಕ ಆಡಿದ 7 ಪಂದ್ಯಗಳಲ್ಲಿ 6 ಜಯ, 1 ಸೋಲು ಕಂಡಿದ್ದು 24 ಅಂಕಗಳನ್ನು ಕಲೆ ಹಾಕಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡದ ಆರಂಭ ಉತ್ತಮವಾಗಿತ್ತು. ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಭರವಸೆಯ ಆಟಗಾರ ದೇವದತ್ ಪಡಿಕ್ಕಲ್ ಮೊದಲ ವಿಕೆಟ್ಗೆ 77 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ವೇಳೆ ಉತ್ತಮವಾಗಿ ಆಡುತ್ತಿದ್ದ ದೇವದತ್ 35 ರನ್ ಬಾರಿಸಿದ್ದಾಗ ಔಟ್ ಆದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಕರುಣ್ ನಾಯರ್ 10, ರವಿಚಂದ್ರನ್ ಸ್ಮರಣ್ 11 ರನ್ಗಳಿಗೆ ಆಟ ಮುಗಿಸಿದರು. ನಾಯಕ ಮಯಾಂಕ್ ಅಗರ್ವಾಲ್ 1 ರನ್ಗಳಿಂದ ಅರ್ಧಶತಕ ತಪ್ಪಿಸಿಕೊಂಡರು. ಇವರು 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 49 ರನ್ ಸಿಡಿಸಿದರು.

ಕರ್ನಾಟಕ ತಂಡದ ಸ್ಟಾರ್ ಆಟಗಾರರಾದ ಅಭಿನವ್ ಮನೋಹರ್ (16) ಹಾಗೂ ಶ್ರೇಯಸ್ ಗೋಪಾಲ್ (19) ಸಹ ನೆಲಕಚ್ಚಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಕೆಳ ಕ್ರಮಾಂಕದಲ್ಲಿ ವಿದ್ಯಾಧರ್ ಪಾಟೀಲ್ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 34 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ಕರ್ನಾಟಕ 207 ರನ್ಗಳಿಗೆ ಆಲೌಟ್ ಆಯಿತು. ಮಧ್ಯ ಪ್ರದೇಶ ತಂಡದ ಪರ ಶಿವಾಂಗ್ ಕುಮಾರ್ ಬಿಗುವಿನ ದಾಳಿ ಸಂಘಟಿಸಿದರು. ಇವರು 10 ಓವರ್ ಬೌಲ್ ಮಾಡಿ 45 ರನ್ ನೀಡಿ 5 ವಿಕೆಟ್ ಕಬಳಿಸಿದರು.
ಸಾಧಾರಣ ಮೊತ್ತವನ್ನು ಹಿಂಬಾಲಿಸಿದ ಮಧ್ಯ ಪ್ರದೇಶ ತಂಡದ ಆರಂಭ ಸಹ ಉತ್ತಮವಾಗಿತ್ತು. ಯಶ್ ದುಬೆ ಹಾಗೂ ಹಿಮಾಂಶು ಮಂತ್ರಿ ಜೋಡಿ ಮೊದಲ ವಿಕೆಟ್ಗೆ 78 ರನ್ ಸೇರಿಸಿತು. ಹಿಮಾಂಶು ಮಂತ್ರಿ 5 ಬೌಂಡರಿ ನೆರವಿನಿಂದ 34 ರನ್ ಬಾರಿಸಿದರೆ, ಯಶ್ ದುಬೆ 6 ಬೌಂಡರಿ ಸಹಾಯದಿಂದ 40 ರನ್ ಬಾರಿಸಿದರು. ಅಕ್ಷತ್ ರಘುವಂಶಿ 26 ರನ್ ಬಾರಿಸಿ ಔಟ್ ಆದರು. 4ನೇ ವಿಕೆಟ್ಗೆ ನಾಯಕ ವೆಂಕಟೇಶ್ ಅಯ್ಯರ್ ಹಾಗೂ ತ್ರಿಪುರೇಶ್ ಸಿಂಗ್ (ಅಜೇಯ 36) ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 75 ರನ್ ಸೇರಿಸಿ ತಂಡಕ್ಕೆ ಆಸರೆಯಾಯಿತು. ವೆಂಕಟೇಶ್ ಅಯ್ಯರ್ 4 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 65 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಅಂತಿಮವಾಗಿ ಮಧ್ಯ ಪ್ರದೇಶ 23.2 ಓವರ್ಗಳಲ್ಲಿ 3 ವಿಕೆಟ್ಗೆ 208 ರನ್ ಸೇರಿಸಿ ಜಯ ಸಾಧಿಸಿತು.