
ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಘೋಷಿಸುತ್ತಿದ್ದಂತೆಯೇ ಧೋನಿ ಆಪ್ತ ಗೆಳೆಯ ಸುರೇಶ್ ರೈನಾ ತಮ್ಮ ನಿವೃತ್ತಿಯ ನಿರ್ಧಾರವನ್ನೂ ಶನಿವಾರ ಪ್ರಕಟಿಸಿದ್ದರು. ಧೋನಿಯ ಜೊತೆಗೆ ನಾನೂ ಸೇರಿಕೊಳ್ಳುತ್ತಿದ್ದೇನೆ ಎನ್ನುವ ಮೂಲಕ ಆಪ್ತ ಗೆಳೆಯನ ನಿವೃತ್ತಿಯಲ್ಲಿ ತಾನೂ ಸಾಥ್ ನಿಡಿ ದಿಗಿಲು ಹುಟ್ಟಿಸಿದ್ದರು.
ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ಒಂದು ವರ್ಷದ ನಂತರ ಸುರೇಶ್ ರೈನಾ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು. ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಟೀಮ್ ಇಂಡಿಯಾದಲ್ಲಿ ಸುರೇಶ್ ರೈನಾ ಸ್ಥಾನವನ್ನು ಪಡೆದುಕೊಂಡಿದ್ದರು.
ಆದರೆ ಸುರೇಶ್ ರೈನಾ ಅವರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಹೊರಬಂದಿದ್ದು ಧೋನಿ ನಾಯಕತ್ವದಲ್ಲಿ. ಅದು ಕೂಡ ಸಿಎಸ್ಕೆ ತಂಡ ಜರ್ಸಿಯಲ್ಲಿ. ಸುರೇಶ್ ರೈನಾ ಹಾಗೂ ಎಂಎಸ್ ಧೋನಿ ಸಿಎಸ್ಕೆ ತಂಡದ ಪರವಾಗಿ 2008ರಿಂದಲೂ ಕಣಕ್ಕಿಳಿಯುತ್ತಿದ್ದಾರೆ. ಆದರೆ ಮ್ಯಾಚ್ ಫಿಕ್ಸಿಂಗ್ ಕಾರಣದಿಂದಾಗಿ ಎರಡು ವರ್ಷ ತಂಡ ನಿಷೇಧಕ್ಕೊಳಗಾಗಿದ್ದಾಗ ಮಾತ್ರ ಇಬ್ಬರೂ ಬೇರೆ ತಂಡಗಳನ್ನು ಆ ಸಂದರ್ಭದಲ್ಲಿ ಮುನ್ನಡೆಸಿದ್ದರು.
ಸುರೇಶ್ ರೈನಾ ಅವರನ್ನು ಧೋನಿ ತಂಡದ ಆಲ್ರೌಂಡರ್ ಆಗಿ ಉತ್ತಮ ರೀತಿಯಲ್ಲಿ ಬಳಸಿಕೊಂಡರು. ನಾಯಕನ ನಿರೀಕ್ಷೆಗೆ ತಕ್ಕನಾಗಿ ಸುರೇಶ್ ರೈನಾ ಕೂಡ ಪ್ರದರ್ಶನವನ್ನು ನೀಡುತ್ತಿದ್ದರು. ಹೀಗಾಗಿ ಇಬ್ಬರ ನಡುವೆ ಅಂಗಳದಾಚೆಯೂ ಅದ್ಭುತ ಗೆಳೆತನ ಬೆಳೆದಿತ್ತು.
ಐಪಿಎಲ್ನಲ್ಲಿ ಚೆನ್ನೈ ತಂಡದ ನಾಯಕ ಉಪನಾಯಕನಾಗಿ ಇಬ್ಬರ ಕೊಡುಗೆಯೂ ಸಾಕಷ್ಟು ಮಹತ್ವದ್ದು. ತಮಿಳುನಾಡಿನ ಅಭಿಮಾನಿಗಳು ಈ ಇಬ್ಬರೂ ಕ್ರಿಕೆಟಿಗರನ್ನು ತಲ ಹಾಗೂ ಚಿನ್ನ ತಲ ಎಂದೇ ಕರೆಯುತ್ತಾರೆ.
ವರ್ಷಗಳ ಅಂತರದಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಂಡ ಇಬ್ಬರು ಪ್ರತಿಭಾನ್ವಿತ ಕ್ರಿಕೆಟರ್ಗಳು ಜೊತೆಯಾಗಿ ನಿವೃತ್ತಿಯನ್ನು ಹೇಳಿದ್ದಾರೆ. ಆದರೆ ಐಪಿಎಲ್ನಲ್ಲಿ ಇಬ್ಬರ ಆಟವನ್ನು ಕಣ್ತುಂಬಿಕೊಳ್ಳಹುದು ಎಂಬುದು ಅಭಿಮಾನಿಗಳ ಪಾಲಿಗೆ ಸಮಾಧಾನಕರ ಸಂಗತಿ.