ಬ್ಯಾಟಿಂಗ್ ಕ್ರಮಾಂಕ ಬದಲಾವಣೆ
ಮುಖ್ಯವಾಗಿ ಸೆಮಿಫೈನಲ್ ಪಂದ್ಯದಲ್ಲಿ ಧೋನಿಯನ್ನು 7ನೇ ಕ್ರಮಾಂಕದಲ್ಲಿ ತಂದಿದ್ದೇ ಸೋಲಿಗೆ ಕಾರಣ. ಯಾವಾಗಲೂ 5ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯುತ್ತಿದ್ದ ಧೋನಿ, ಸೆಮಿಫೈನಲ್ನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಎತ್ತಿಕೊಳ್ಳುವಲ್ಲಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಪ್ರಮುಖ ಕಾರಣ ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಸಂಜಯ್ ಸ್ಪಷ್ಟನೆ ನೀಡಿದ್ದಾರೆ.
ನಿಜಕ್ಕೂ ಮೆಚ್ಚಿಕೊಳ್ಳಬೇಕು
ಹಿಂದುಸ್ತಾನ್ ಟೈಮ್ಸ್ ಸಂದರ್ಶನವೊಂದರಲ್ಲಿ, ಧೋನಿ 7ನೇ ಕ್ರಮಾಂಕದಲ್ಲಿ ಬಂದಿದ್ದಕ್ಕೆ ಬಂಗಾರ್ ಕಾರಣ ಎಂಬ ಮಾತುಗಳು ಕೇಳಿಬಂದಿದ್ದವು ಎಂಬ ಸುದ್ದಿಗಾರರ ಮಾತಿಗೆ ಉತ್ತರಿಸಿದ ಬಂಗಾರ್, 'ಹೀಗೆ ನನ್ನತ್ತ ಬೊಟ್ಟು ಮಾಡಿ ಮಾತನಾಡುವವರನ್ನು ನಿಜಕ್ಕೂ ಮೆಚ್ಚಿಕೊಳ್ಳಬೇಕು. ಯಾಕೆಂದರೆ ಬ್ಯಾಟಿಂಗ್ ಕ್ರಮಾಂಕದ ವಿಚಾರದಲ್ಲಿ ನಾನು ಒಬ್ಬನೇ ನಿರ್ಧಾರ ಕೈಗೊಳ್ಳುವಂತಿಲ್ಲ ಎಂಬ ವಿಚಾರ ಅವರಿಗೆ ಗೊತ್ತಿಲ್ಲವಲ್ಲ,' ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.
ಬದಲಾವಣೆಗೆ ಬಯಸಿದ್ದೆವು
'30-40ನೇ ಓವರ್ ಬಳಿಕ ಹೆಚ್ಚಿನ ರನ್ ಸೇರ್ಪಡೆಯತ್ತ ನಾವು ಯೋಚಿಸಿ, 5, 6 ಮತ್ತು 7ನೇ ಕ್ರಮಾಂಕದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಬಯಸಿದೆವು. ಇದನ್ನು ಸೆಮಿಫೈನಲ್ ಬಳಿಕ ವಿರಾಟ್ ಕೂಡ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ. ಅಫ್ಘಾನಿಸ್ತಾನದ ಪಂದ್ಯದ ಬಳಿಕ ಧೋನಿಯನ್ನು ಕೊಂಚ ಕೆಳ ಕ್ರಮಾಂಕದಲ್ಲಿ ಇಳಿಸಲು ತಂಡ ನಿರ್ವಹಣಾ ಸಮಿತಿ ನಿರ್ಧರಿಸಿತ್ತು,' ಎಂದು ಬಂಗಾರ್ ವಿವರಿಸಿದರು.
ಹೊರೆ ಇಳಿಸುವ ಉಪಾಯ
ಅಫ್ಘಾನಿಸ್ತಾನ ಪಂದ್ಯದ ವರೆಗೂ 5ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರುತ್ತಿದ್ದ ಧೋನಿಯನ್ನು ಅನಂತರದ ಪಂದ್ಯಗಳಲ್ಲಿ ಕೊಂಚ ಕೆಳ ಕ್ರಮಾಂಕದಲ್ಲಿ ಇಳಿಸಲು ನಿರ್ಧಾರವಾಗಿತ್ತು. ಯಾಕೆಂದರೆ ಧೋನಿ 35 ಓವರ್ಗಳ ಬಳಿಕ ಆಡಿ, ಅಂತಿಮ ಓವರ್ನಲ್ಲಿ ತೀರಾ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳ ಮೇಲಿನ ರನ್ ಹೊರೆ ಕಡಿಮೆಗೊಳಿಸುತ್ತಾರೆ ಎಂಬುದು ನಮ್ಮ ನಂಬಿಕೆಯಾಗಿತ್ತು. ಹೀಗಾಗಿ ಅನಂತರದ ಪಂದ್ಯಗಳಲ್ಲಿ 6ನೇ ಕ್ರಮಾಂಕದಲ್ಲಿ ಧೋನಿಯನ್ನು ಇಳಿಸಲಾಯ್ತು. ಸೆಮಿಫೈನಲ್ನಲ್ಲಿ 7ನೇ ಕ್ರಮಾಂಕದಲ್ಲಿ ಇಳಿಸಲಾಯ್ತು. ಆದರೆ ಈ ನಿರ್ಧಾರ ನನ್ನೊಬ್ಬನದ್ದಲ್ಲ,' ಎಂದು ಸಂಜಯ್ ತಿಳಿಸಿದ್ದಾರೆ.