
ಲಾರ್ಡ್ಸ್, ಜುಲೈ 15: ಇಂಗ್ಲೆಂಡ್ ನ ಲಾರ್ಡ್ಸ್ ನಲ್ಲಿ ನಡೆದ ಇಂಗ್ಲೆಂಡ್-ಭಾರತ ನಡುವಿನ ಎರಡನೇ ಏಕದಿನ ಪಂದ್ಯದ ವೇಳೆ ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್ ನಲ್ಲಿ 10,000 ರನ್ ಪೂರೈಸಿದ ಭಾರತದ ನಾಲ್ಕನೇ ಆಟಗಾರನೆಂಬ ಕೀರ್ತಿಗೆ ಪಾತ್ರವಾದರು. ಆದರೆ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸದ ಕಾರಣಕ್ಕಾಗಿ ಧೋನಿ, ಅಭಿಮಾನಿಗಳ ಅಪಹಾಸ್ಯಕ್ಕೀಡಾದ ಸಂಗತಿಯೂ ನಡೆಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 322 ರನ್ ಪೇರಿಸಿ ಭಾರತಕ್ಕೆ 323 ರನ್ ಗುರಿ ನೀಡಿತ್ತು. ಈ ವೇಳೆ ಭಾರತ ಆಟಗಾರರಿಂದ ಕಳಪೆ ಬ್ಯಾಟಿಂಗ್ ಪ್ರದರ್ಶಿಸಲ್ಪಟ್ಟಿತು. ಈ ವೇಳೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದ ಧೋನಿಯಿಂದಲೂ ನೀರಸ ಆಟ ಕಂಡಿತು. ಹೀಗಾಗಿ ಭಾರತ 50 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದು 236 ಪೇರಿಸಿ 86 ರನ್ ನಿಂದ ಆಂಗ್ಲರೆದುರು ಶರಣಾಯಿತು. ಇದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಯಿತು.
ಧೋನಿ ಈ ಪಂದ್ಯದಲ್ಲಿ 59 ಎಸೆತಗಳಿಗೆ ಬರೀ 37ರನ್ ಬಾರಿಸಿದರು ಪ್ಲಂಕೆಟ್ ಓವರ್ ನಲ್ಲಿ ಔಟಾದರು. ಇಷ್ಟರಲ್ಲಾಗಲೇ ದೋನಿಯ 10,000 ರನ್ ಸಾಧನೆ ಆಗಿಹೋಗಿತ್ತು. ಆದರೆ ಮಾಜಿ ನಾಯಕನಾಗಿರುವ ಧೋನಿ ಇಂತಹ ಒತ್ತಡದ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದಕ್ಕೆ ಪೆವಿಲಿಯನ್ ನಲ್ಲಿದ್ದ ಭಾರತದ ಅಭಿಮಾನಿಗಳಿಂದ ಟೀಕೆ ವ್ಯಕ್ತವಾಯಿತು. ಈ ಮಧ್ಯೆ ಧೋನಿಯ ಏಕದಿನ ಸಾಧನೆಗಾಗಿ ಸ್ಟೇಡಿಯಂನಾದ್ಯಂತ ಅಭಿನಂದನೆ ವ್ಯಕ್ತವಾಗಿದ್ದೂ ಕಂಡುಬಂತು.
ಧೋನಿ ಬ್ಯಾಟಿಂಗ್ ಗೆ ಇಳಿಯುವಾಗ ಭಾರತಕ್ಕೆ 23 ಓವರ್ ಗಳಲ್ಲಿ 183 ರನ್ನಿನ ಅಗತ್ಯವಿತ್ತು. ಅಗತ್ಯವಿದ್ದ ರನ್ ರೇಟ್ ಕೂಡ ಕೇವಲ 8. ಆದರೆ ಧೋನಿ ಅವರು ಮಾಜಿ ನಾಯಕನ ಆಟ ಆಡಲಿಲ್ಲ. ಧೋನಿ ಬ್ಯಾಟಿಂಗ್ ಗಿಳಿದಾಗ ಅಭಿಮಾನಿಗಳಲ್ಲಿ ಮೂಡಿದ್ದ ಗೆಲುವಿನ ನಿರೀಕ್ಷೆ ಓವರ್ ಮುಗಿಯುತ್ತಾ ಬಂದಂತೆ ಸುಳ್ಳಾಗತೊಡಗಿತ್ತು.
47ನೇ ಓವರ್ ವರೆಗೂ ನಿಂತಿದ್ದ ಧೋನಿ ಅನಂತರ ಪ್ಲಂಕೆಟ್ ಓವರ್ ನಲ್ಲಿ ಬೆನ್ ಸ್ಟೋಕ್ಸ್ ಗೆ ಕ್ಯಾಚಿತ್ತು ಪೆವಿಲಿಯನ್ ನತ್ತ ನಡೆದರು. ಆಗ ಅಭಿಮಾನಿಗಳಿಂದ ಧೋನಿ ಬಗ್ಗೆ ನಿರಾಶೆಯೂ ವ್ಯಕ್ತವಾಗಿತ್ತು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, 'ಟೀಕಾಕಾರರು ಇನ್ನಿಂಗ್ಸನ್ನು ತೀವ್ರವಾಗಿ ಹಚ್ಚಿಕೊಂಡಂತಿದೆ. ಹಚ್ಚಿಕೊಳ್ಳಲಿ ಪರವಾಗಿಲ್ಲ. ಅವರ ಟೀಕೆಗಳಿಂದ ತಂದಕ್ಕೇನೂ ಹಾನಿಯಾಗುವುದಿಲ್ಲ' ಎಂದು ತಿರುಗೇಟು ನೀಡಿದ್ದಾರೆ.