
ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ನಲ್ಲಿ ಎಲ್ಲಾ ಮಹತ್ವದ ಸಾಧನೆಗಳನ್ನು ಮಾಡಿದಂತಾ ಕ್ರಿಕೆಟಿಗ. ವಿಶ್ವ ಕ್ರಿಕೆಟ್ನಲ್ಲಿ ಈವರೆಗೆ ಯಾವ ನಾಯಕನೂ ಮಾಡಲು ಸಾಧ್ಯವಾಗದ ಮಹತ್ವದ ಗೆಲುವುಗಳನ್ನು ಕಂಡವರು ಧೋನಿ. ಹೀಗಾಗಿ ಧೋನಿ ಭಾರತೀಯ ಕ್ರಿಕೆಟ್ಗೆ ಯಾವಾಗಲೂ ವಿಶೇಷ
ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಟೆಸ್ಟ್ನಲ್ಲಿ ನಂಬರ್ 1 ಪಟ್ಟ... ಈ ಎಲ್ಲಾ ಸಾಧನೆಯನ್ನು ಇನ್ಯಾವ ನಾಯಕನಿಂದಲೂ ಮಾಡಲು ಈವರೆಗೆ ಸಾಧ್ಯವಾಗಿಲ್ಲ. ಹಾಗಿದ್ದರೂ ಧೋನಿಯ ಅತಿ ದೊಡ್ಡ ಫ್ಯಾನ್ ಎನಿಸಿಕೊಂಡಿರುವ ರಾಮ್ ಬಾಬು ಒಂದು ಕನಸನ್ನು ಧೋನಿಯಿಂದ ನನಸು ಮಾಡಲು ಸಾಧ್ಯವಾಗಲಿಲ್ಲ ಎಂದು ದುಃಖಿಸಿದ್ದಾರೆ.
ಮಾಹಿ ಭಾಯಿ ಮೈದಾನದಲ್ಲೆ ದೇಶದ ಬಾವುಟ ಹಿಡಿದು ಹಾರಿಸುತ್ತಾ ಅಭಿಮಾನಿಗಳತ್ತ ಕೈಬೀಸುತ್ತಾ ಅವರ ಜೊತಗೆ ನಾನು ನಿಂತು ಸಂಭ್ರಮಿಸಬೇಕಿತ್ತು. ಆ ರೀತಿಯಾಗಿ ಅವರ ನಿವೃತ್ತಿ ಆಗಬೇಕಿತ್ತು. ಹಾಗಾಗಿದ್ದಲ್ಲಿ ನಾನು ಹಾಗೂ ಇಡೀ ದೇಶದ ಜನರು ಹೆಚ್ಚು ಸಂತುಷ್ಟರಾಗಿರುತ್ತಿದ್ದರು ಎಂದು ರಾಮ್ ಬಾಬು ಹೇಳಿದ್ದಾರೆ.
ಕಳೆದ ಹದಿನೈದು ವರ್ಷಗಳಿಂದ ರಾಮ್ ಭಾಯ್ ಧೋನಿ ಅಭಿಮಾನಿಯಾಗಿ ಭಾರತ ತಂಡದ ಜೊತೆಗೆ ಎಲ್ಲಾ ಪಂದ್ಯಗಳಲ್ಲೂ ಭಾರತ ತಂಡವನ್ನು ಹಾಗೂ ಧೋನಿಯನ್ನು ಬೆಂಬಲಿಸಿಕೊಂಡು ಬಂದಿದ್ದರು. ತ್ರಿವರ್ಣ ಮೈಪೂರ್ತಿ ಬಳಿದುಕೊಂಡು ಧೋನಿ ಹೆಸರು ಹಾಗೂ ಜರ್ಸಿ ನಂಬರ್ ಬರೆಸಿಕೊಂಡು ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕವೇ ಎಲ್ಲರ ಗಮನಸೆಳೆದಿದ್ದಾರೆ.
ಸಚಿನ್ ತೆಂಡೂಲ್ಕರ್ ಅಭಿಮಾನಿ ಸುಧೀರ್ ಚೌಧರಿಯಂತೆಯೇ ರಾಮ್ ಬಾಬು ಕೂಡ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಭಾರತ ತಂಡದ ಪ್ರವಾಸದ ಸಂದರ್ಭದಲ್ಲಿ ವಿಶೇಷ ಪಾಸ್ ಪಡೆದುಕೊಂಡು ಭಾರತದ ಎಲ್ಲಾ ಟೂರ್ನಿಗಳಲ್ಲೂ ಭಾಗಿಯಾಗಿದ್ದಾರೆ.