ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಎಂಎಸ್ ಧೋನಿ ಒಬ್ಬರು ಎನ್ನುವುದರಲ್ಲಿ ನಿಸ್ಸಂಶಯ. ಟೀಮ್ ಇಂಡಿಯಾವನ್ನು ಐಸಿಸಿಯ ಎಲ್ಲಾ ಟೂರ್ನಿಗಳಲ್ಲಿಯೂ ಚಾಂಪಿಯನ್ ಮಾಡಿದ ಏಕೈಕ ನಾಯಕ ಎಂಎಸ್ ಧೋನಿ. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಎಂಎಸ್ ಧೋನಿ ನಾಯಕತ್ವದಲ್ಲಿ ಗೆದ್ದುಕೊಂಡಿದೆ. ಇನ್ನು ಐಪಿಎಲ್ನಲ್ಲಿಯೂ ಎಂಎಸ್ ಧೋನಿ ಆಟಗಾರನಾಗಿ ಹಾಗೂ ನಾಯಕನಾಗಿ ಅಮೋಘ ಕೊಡುಗೆ ನೀಡಿದ್ದು ನಾಲ್ಕು ಬಾರಿ ಸಿಎಸ್ಕೆ ಚಾಂಪಿಯನ್ ಪಟ್ಟಕ್ಕೇರಲು ಕಾರಣವಾಗಿದ್ದಾರೆ.
ಇನ್ನು ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದರೂ ಐಪಿಎಲ್ನಲ್ಲಿ ಇನ್ನು ಕೂಡ ಸಕ್ರಿಯವಾಗಿದ್ದಾರೆ. ಅದರಲ್ಲೂ ಕಳೆದ ಐಪಿಎಲ್ ಟೂರ್ನಿಯಲ್ಲಿ ತಂಡವನ್ನು ನಾಲ್ಕನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು. ಇದೀಗ ಧೋನಿ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಆಡಲಿದ್ದಾರಾ ಇಲ್ಲವಾ ಎನ್ನುವ ಪ್ರಶ್ನೆ ಹಾಗೆಯೇ ಉಳಿದುಕೊಂಡಿದ್ದು ಈ ವಿಚಾರವಾಗಿ ಧೋನಿ ಸುಳಿವೊಂದನ್ನು ಬಿಟ್ಟುಕೊಟ್ಟಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಎಂಎಸ್ ಧೋನಿ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಸಂದರ್ಶಕ ಎಂಎಸ್ ಧೋನಿ ಅವರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಧೋನಿಯನ್ನು ನಿವೃತ್ತ ಕ್ರಿಕೆಟಿಗ ಎಂದು ಉಲ್ಲೇಖಿಸಿದರು. ಈ ಸಂದರ್ಭದಲ್ಲಿ ಎಂಎಸ್ ಧೋನಿ ಸಂದರ್ಶನಕನನ್ನು ಸರಿಪಡಿಸುತ್ತಾ ತಾನು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಮಾತ್ರವೇ ನಿವೃತ್ತಿ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಕಳೆದ ಐಪಿಎಲ್ ಸಂದರ್ಭದಲ್ಲಿ ಧೋನಿಗೆ ಅತಿಯಾಗಿ ಕಾಡಿದ್ದ ಮೊಣಕಾಲಿನ ಗಾಯದ ಬಗ್ಗೆ ಪ್ರಶ್ನೆ ಕೇಳಲಾಗಿದ್ದು ಅದಕ್ಕೆ ಧೋನಿ ಉತ್ತರ ನೀಡಿದ್ದಾರೆ. "ಶಸ್ತ್ರಚಿಕಿತ್ಸೆಯ ಬಳಿಕ ಮೊಣಕಾಲು ನೋವು ಸುಧಾರಿಸಿದೆ. ನವೆಂಬರ್ ವೇಳೆಗೆ ಮತ್ತಷ್ಟು ಉತ್ತಮವೆನಿಸಲಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ದೈನಂದಿನ ಕಾರ್ಯಗಳಿಗೆ ಯಾವುದೇ ಸಮಸ್ಯೆಯಿಲ್ಲ" ಎಂದು ಎಂಎಸ್ ಧೋನಿ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಇದೇ ವೇಲೆ ಮುಂದುವರಿದು ಮಾತನಾಡಿದ ಧೋನಿ ತಾನು ಅತ್ಯುತ್ತಮ ಕ್ರಿಕೆಟಿಗನಾಗಿ ನನ್ನನ್ನು ಜನ ಯಾವಾಗಲೂ ನೆನಪಿಸಿಕೊಳ್ಳಬೇಕು ಎಂದು ಬಯಸಿದವನಲ್ಲ ಎಂದಿದ್ದು ತನ್ನನ್ನು ಅತ್ಯುತ್ತಮ ಮಾನುಷ್ಯ ಎಂದು ನೆನಪಿಸಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ. ಅದು ಜೀವನದ ಕೊನೆಯವರೆಗೂ ನಡೆಯುವ ಪ್ರಕ್ರಿಯೆ ಎಂದಿದ್ದಾರೆ ಎಂಎಸ್ ಧೋನಿ.
"ನಿಮಗೊತ್ತಾ, ನಾನು ಆರಂಭದಿಂದಲೂ ಜನರು ನನ್ನನ್ನು ಉತ್ತಮ ಕ್ರಿಕೆಟಿಗ ಎಂದು ನೆನಪಿಸಿಕೊಳ್ಳಲಿ ಎಂದು ಬಯಸಿದವನಲ್ಲ್. ನಾನು ಯಾವಾಘಲೂ ಹೇಳುವುದು ಜನರು ನನ್ನನ್ನು ಉತ್ತಮ ಮನುಷ್ಯ ಎಂದು ನೆನಪಿಸಿಕೊಳ್ಳಲಿ ಎಂದು. ನೀವು ಉತ್ತಮ ಮನುಷ್ಯ ಎಂದು ಕರೆಸಿಕೊಳ್ಳಬೇಕಾದರೆ ಅದು ನೀವು ಜೀವನದ ಕೊನೆಯವರೆಗೂ ನಡೆಸುವ ಪ್ರಕ್ರಿಯೆ" ಎಂದು ಎಂಎಸ್ ಧೋನಿ ಹೇಳಿಕೆ ನೀಡಿದ್ದಾರೆ.
ಇನ್ನು ಕಳೆದ ಐಪಿಎಲ್ನಲ್ಲಿ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ ಬಳಿಕ ಎಂಎಸ್ ಧೋನಿ ಮುಂದಿನ ಆವೃತ್ತಿಯಲ್ಲಿ ತನ್ನ ಅಭಿಮಾನಿಗಳಿಗೋಸ್ಕರ ಮೈದಾನಕ್ಕೆ ಆಟಗಾರನಾಗಿ ಕಣಕ್ಕಿಳಿಯುವ ಇಂಗುತ ವ್ಯಕ್ತಪಡಿಸಿದ್ದರು. ಆದರೆ ಅದಕ್ಕಾಗಿ ದೇಹ ಯಾವ ರೀತಿ ಸ್ಪಂದಿಸುತ್ತದೆ ಎನ್ನುವುದನ್ನು ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು.
"ಸಾಂದರ್ಭಿಕವಾಗಿ ಹೇಳುವುದಾದರೆ ನಿವೃತ್ತಿ ಘೋಷಣೆ ಮಾಡಲು ಇದು ಅತ್ಯುತ್ತಮವಾದ ಸಂದರ್ಭ. ಎಲ್ಲರಿಗೂ ಧನ್ಯವಾದ ಎಂದು ಹೇಳಿ ನಿವೃತ್ತನಾಗುವುದು ನನಗೆ ಸುಲಭ. ಆದರೆ ಸಿಎಸ್ಕೆ ಅಭಿಮಾನಿಗಳಿಂದ ನಾನು ಪಡೆದುಕೊಂಡಿರುವ ಪ್ರೀತಿಯಿಂದಾಗಿ ನಾನು ಅವರಿಗೆ ಮತ್ತೊಂದು ಆವೃತ್ತಿಯಲ್ಲಿ ಆಡಿ ಉಡುಗೊರೆ ನೀಡಲು ಬಯಸುತ್ತೇನೆ" ಎಂದು ಎಂಎಸ್ ಧೋನಿ ಕಳೆದ ಐಪಿಎಲ್ನಲ್ಲಿ ಗೆದ್ದ ಬಳಿಕ ಘೋಷಣೆ ಮಾಡಿದ್ದರು.