2011ರಲ್ಲಿ ಭಾರತ ಎರಡನೇ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದ ಭಾರತ ತಂಡದ ನಾಯಕ ಧೋನಿ ಸಿಕ್ಸರ್ ಸಿಡಿಸುವ ಮೂಲಕ ಐತಿಹಾಸಿಕ ವಿಜಯ ತಂದುಕೊಟ್ಟಿದ್ದರು.
ಎಂಎಸ್ ಧೋನಿ ಸಿಕ್ಸರ್ ಹೊಡೆದ ಚೆಂಡು ಬಿದ್ದ ಸ್ಥಳವನ್ನು ವಿಜಯದ ಸ್ಮಾರಕವನ್ನಾಗಿ ಮಾಡಲು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನಿರ್ಧರಿಸಿತ್ತು. ಅದಕ್ಕೆ ತಕ್ಕಂತೆ ಸ್ಟ್ಯಾಂಡ್ನಲ್ಲಿ ಸ್ಮಾರಕವನ್ನು ನಿರ್ಮಿಸಿ ಎಂಎಸ್ ಧೋನಿಗೆ ಕೂಡ ಗೌರವ ಸಲ್ಲಿಸಿದೆ. ಮಹೇಂದ್ರ ಸಿಂಗ್ ಧೋನಿ ಈ ಸ್ಮಾರಕವನ್ನು ಉದ್ಘಾಟನೆ ಮಾಡಿದ್ದಾರೆ. ಶನಿವಾರ ವಾಂಖೆಡೆ ಅಂಗಳದಲ್ಲಿ ಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ಕೂಡ ನಡೆಯಲಿದೆ.

ಏಪ್ರಿಲ್ 2, 2011ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 274 ರನ್ ಗಳಿಸಿತು. ಮಹೇಲ ಜಯವರ್ಧನೆ ಅಜೇಯ 103 ರನ್ ಗಳಿಸಿದರೆ, ನಾಯಕ ಕುಮಾರ್ ಸಂಗಾಕ್ಕರ 48 ರನ್ ಗಳಿಸಿದರು, ನುವಾನ್ ಕುಲಶೇಖರ 32 ರನ್ ಗಳಿಸಿದರೆ, ತಿಸಾರ ಪೆರೇರಾ ಅಜೇಯ 22 ರನ್ ಗಳಿಸಿ ಮಿಂಚಿದ್ದದ್ದು. ಯುವರಾಜ್ ಸಿಂಗ್ ಮತ್ತು ಜಹೀರ್ ಖಾನ್ ತಲಾ ಎರಡು ಮತ್ತು ಹರ್ಭಜನ್ ಸಿಂಗ್ ಒಂದು ವಿಕೆಟ್ ಪಡೆದರು.
ಗೆಲುವಿನ ಸಿಕ್ಸರ್ ಸಿಡಿಸಿದ್ದ ಧೋನಿ
275 ರನ್ಗಳ ಗುರಿ ಬೆನ್ನತ್ತಿದ ಭಾರತವು ಸೆಹ್ವಾಗ್ (0) ಮತ್ತು ತೆಂಡೂಲ್ಕರ್ (18) ಅವರನ್ನು ಬೇಗನೆ ಕಳೆದುಕೊಂಡಿತು. ಆದರೆ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ 83 ರನ್ಗಳ ಜೊತೆಯಾಟ ಆಡುವ ಮೂಲಕ ಭಾರತ ತಂಡಕ್ಕೆ ಆಸರೆಯಾದರು. ವಿರಾಟ್ ಕೊಹ್ಲಿ 35 ರನ್ ಗಳಿಸಿ ಔಟಾದರು. ಗೌತಮ್ ಗಂಭೀರ್ 122 ಎಸೆತಗಳಲ್ಲಿ 97 ರನ್ ಗಳಿಸಿದರು. ಧೋನಿ ಜೊತೆಗೂಡಿ 4ನೇ ವಿಕೆಟ್ಗೆ 109 ರನ್ಗಳ ಜೊತೆಯಾಟ ಆಡಿದರು.
ನಾಯಕ ಧೋನಿ 79 ಎಸೆತಗಳಲ್ಲಿ ಅಜೇಯ 91 ರನ್ ಗಳಿಸಿದರು, ಯುವರಾಜ್ ಸಿಂಗ್ ಅಜೇಯ 21 ರನ್ ಗಳಿಸಿದರು. 5ನೇ ವಿಕೆಟ್ಗೆ ಈ ಜೋಡಿ 54 ರನ್ಗಳನ್ನು ಕಲೆಹಾಕಿತು. ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಎಂಎಸ್ ಧೋನಿ ಭಾರತಕ್ಕೆ ಗೆಲುವು ತಂದುಕೊಟ್ಟರು. 28 ವರ್ಷಗಳ ಸುಧೀರ್ಘ ಕಾಯುವಿಕೆ ಬಳಿಕ ಭಾರತ ಎರಡನೇ ಏಕದಿನ ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು.

ಭಾರತದಲ್ಲಿ ಮತ್ತೆ ಏಕದಿನ ವಿಶ್ವಕಪ್
2023 ರಲ್ಲಿ ಮತ್ತೆ ಭಾರತದಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಏಕದಿನ ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ, ಭಾರತ ವಿಶ್ವಕಪ್ ಗೆದ್ದ 12 ವರ್ಷಗಳ ಸಂಭ್ರಮದ ದಿನವೇ ಐಸಿಸಿ ಈ ಬಾರಿ ವಿಶ್ವಕಪ್ನ ಲೋಗೊವನ್ನು ಅನಾವರಣ ಮಾಡಿದೆ. ಭಾರತ ಇದೇ ಮೊದಲ ಬಾರಿಗೆ ವಿಶ್ವಕಪ್ ಪಂದ್ಯಾವಳಿಯನ್ನು ಸಂಪೂರ್ಣವಾಗಿ ಆಯೋಜಿಸುತ್ತಿದೆ. ಗಮನಾರ್ಹವಾಗಿ ಕಳೆದ ಮೂರು ಬಾರಿ ವಿಶ್ವಕಪ್ ಟ್ರೋಫಿಯನ್ನು ಆತಿಥ್ಯ ವಹಿಸಿದ ರಾಷ್ಟ್ರಗಳೇ ಗೆದ್ದಿದ್ದು, ಭಾರತ ಕೂಡ ಈ ಬಾರಿ ಗೆಲ್ಲುವ ನೆಚ್ಚಿನ ತಂಡವಾಗಿದೆ.