
ರಾಂಚಿ, ಮಾರ್ಚ್ 8: ಭಾರತ ಕ್ರಿಕೆಟ್ ತಂಡದ ಪಾಲಿಗೆ ಎಂಎಸ್ ಧೋನಿ ಒಬ್ಬ ಸ್ಫೂರ್ತಿದಾಯಕ ವ್ಯಕ್ತಿ. ಡ್ರೆಸ್ಸಿಂಗ್ ರೂಮ್ನಲ್ಲಿ ಧೋನಿಯ ಉಪಸ್ಥಿತಿ ಎಷ್ಟರ ಮಟ್ಟಿಗೆ ಮಹತ್ವದ್ದು ಎಂಬುದನ್ನು ಅವರಿವರು ಯುವ ಆಟಗಾರರು ಹೇಳುತ್ತಲೇ ಇರುತ್ತಾರೆ. ಕನ್ನಡಿಗ ಕೆಎಲ್ ರಾಹುಲ್ ಕೂಡ ಧೋನಿ ಬಗ್ಗೆ ಮಾತನಾಡಿದ್ದಾರೆ.
ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕಾಗಿ ಟೀಮ್ ಇಂಡಿಯಾ ರಾಂಚಿಯಲ್ಲಿದೆ. ಭಾರತ ತಂಡದಲ್ಲಿರುವ ರಾಹುಲ್, ಧೋನಿ ಉಪಸ್ಥಿತಿ ತಂಡದ ಆಟಗಾರರಿಗೆ ಯಾವೆಲ್ಲ ರೀತಿಯಲ್ಲಿ ನೆರವಾಗುತ್ತಿದೆ ಎಂಬುದನ್ನು ವಿವರಿಸಿದ್ದಾರೆ.
'ಯುವ ಆಟಗಾರರಿರಲಿ ಅಥವಾ ಎಲ್ಲರೂ ಏನೇ ಗೊಂದಲಗಳಿದ್ದರೂ ನಾವು ಹೋಗೋದು ಧೋನಿ ಬಳಿಗೆ. ಅದು ಕ್ರಿಕೆಟ್ಗೆ ಸಂಬಂಧಿಸಿದ್ದಾಗಿರಲಿ ಇಲ್ಲ ವೈಯಕ್ತಿಕವಾಗಿರಲಿ ಸಮಸ್ಯೆಗಳಿದ್ದರೆ ನಾವು ಧೋನಿಯಲ್ಲಿ ಹೇಳಿಕೊಳ್ಳುತ್ತೇವೆ. ತಂಡದ ಎಲ್ಲಾ ಆಟಗಾರರಿಗೂ ಧೋನಿಯೊಂಥರಾ ಅಣ್ಣನಿದ್ದಂತೆ' ಎಂದು ರಾಹುಲ್ ಹೇಳಿದ್ದಾರೆ.
ಮಾತು ಮುಂದುವರೆಸಿದ ರಾಹುಲ್, 'ಧೋನಿ ಅವರು ಡ್ರೆಸ್ಸಿಂಗ್ ರೂಮ್ಗೆ ಶಾಂತತೆ ತರುತ್ತಾರೆ. ಅವರ ಜೊತೆಗಿರುವುದನ್ನು ನಾವೆಲ್ಲರೂ ಇಷ್ಟಪಡುತ್ತೇವೆ' ಎಂದರು. ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಕೂಡ ಮಾತನಾಡಿ, 'ರಾಂಚಿಯಲ್ಲಿ ಪ್ರತಿಯೊಬ್ಬರೂ ಮಾತನಾಡುವ ಒಬ್ಬರೇ ಒಬ್ಬ ವ್ಯಕ್ತಿಯೆಂದರೆ ಅದು ಧೋನಿ' ಎಂದಿದ್ದಾರೆ (ಪೂರ್ತಿ ವಿಡಿಯೋ ಬಿಸಿಸಿಐ ಟ್ವಿಟರ್ ಲಿಂಕ್ನಲ್ಲಿದೆ).