

ಸಿಡ್ನಿ, ಜನವರಿ 16: ಬೇರೆ ಬೇರೆ ಪಂದ್ಯಗಳ ಸಂದರ್ಭಗಳಿಗೆ ತಕ್ಕಂತೆ ಹೇಗೆ ಆಡಬೇಕು ಅನ್ನೋದು ಮಹೇಂದ್ರ ಸಿಂಗ್ ಧೋನಿಗೆ ಗೊತ್ತಿದೆ. ಇದೇ ಕಾರಣಕ್ಕೆ ಧೋನಿ ಭಾರತ ತಂಡಕ್ಕೆ ಅಮೂಲ್ಯ ಆಸ್ತಿ ಅನ್ನಿಸಿಕೊಂಡಿದ್ದಾರೆ ಎಂದು ಆಸ್ಟ್ರೇಲಿಯಾ ಮಾಜಿ ವೇಗಿ ಜೇಸನ್ ಗಿಲೆಸ್ಪಿ ಹೇಳಿದ್ದಾರೆ.
ಅಡಿಲೇಡ್ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ (ಜನವರಿ 15) ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದಲ್ಲಿ ಧೋನಿ ಅಜೇಯ ಅರ್ಧಶತಕ (55 ರನ್) ಬಾರಿಸಿದ್ದರು. ಭಾರತ ಈ ಪಂದ್ಯವನ್ನು 6 ವಿಕೆಟ್ನಿಂದ ಗೆದ್ದಿತ್ತಲ್ಲದೆ ಮೂರು ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿತ್ತು.
ಹಿಂದಿನ ಪಂದ್ಯಗಳಲ್ಲಿ ಅಂಥದ್ದೇನೂ ಪ್ರಖರ ಆಟ ತೋರದ ಧೋನಿ ಈಗ ಫಾರ್ಮ್ಗೆ ಮರಳಿರುವಂತೆ ಕಾಣುತ್ತಿದೆ. ದುರ್ಬಲ ಬ್ಯಾಟಿಂಗ್ಗಾಗಿ ಹಿಂದೆ ಕ್ರಿಕೆಟ್ ಅಭಿಮಾನಿಗಳ ಟೀಕೆಗೂ ಗುರಿಯಾಗಿದ್ದ ಕೂಲ್ ಕ್ಯಾಪ್ಟನ್ ಮತ್ತೆ ಉತ್ತಮ ಪ್ರದರ್ಶನ ನೀಡಲಾರಂಭಿಸಿರುವುದಕ್ಕೆ ಜೇಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಿಟಿಐ ಜೊತೆ ಮಂಗಳವಾರ ಮಾತನಾಡುತ್ತ ಗಿಲೆಸ್ಪಿ, 'ದಶಕದಿಂದಲೂ ಟೀಮ್ ಇಂಡಿಯಾವು ಧೋನಿ ಅವರ ಫಿನಿಷಿಂಗ್ ಸಾಮರ್ಥ್ಯದ ನೆರವನ್ನು ಪಡೆಯುತ್ತಾ ಬಂದಿದೆ. ಈಗಲೂ ತಂಡ ಅದನ್ನು ಮುಂದುವರೆಸಿದೆ. ಸಿಂಗ್ ಅವರ ಅನುಭವದ ಬಲವನ್ನು ತಂಡ ಪಡೆಯುತ್ತಿದೆ' ಎಂದು ಹೇಳಿದರು (ಮೇಲಿನ ಟ್ವೀಟ್ನಲ್ಲಿ ಗಿಲೆಸ್ಪಿ ಅವರನ್ನು ಕಾಣಬಹುದು).