

ನವದೆಹಲಿ, ಡಿಸೆಂಬರ್ 12: ರಾಷ್ಟ್ರೀಯ ತಂಡಕ್ಕೆ ಆಯ್ಕೆ ಅರ್ಹತೆ ಗಿಟ್ಟಿಸಿಕೊಳ್ಳಬೇಕಾದರೆ ಮಹೇಂದ್ರ ಸಿಂಗ್ ಧೋನಿ ಅವರು ದೇಸಿ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳಬೇಕು ಎಂದು ಭಾರತ ತಂಡದ ಮಾಜಿ ಆಲ್ ರೌಂಡರ್ ಆಟಗಾರ ಮತ್ತು ಆಯ್ಕೆ ಸಮಿತಿ ಮಾಜಿ ಸದಸ್ಯ, ಈಗ ಕ್ರಿಕೆಟ್ ವಿಶ್ಲೇಷಕರಾಗಿರುವ ಮೋಹೀಂದರ್ ಅಮರ್ನಾಥ್ ಹೇಳಿದ್ದಾರೆ.
ಆಡಲು ಅವಕಾಶವಿದ್ದರೂ ಮಹಿ, 50 ಓವರ್ಗಳ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಎದುರುಗೊಳ್ಳಲಿದ್ದು, ಸ್ಥಾನ ದೊರೆತರೂ ಧೋನಿ ಅಭ್ಯಾಸವೇ ಇಲ್ಲದೆ ಮೈದಾನಕ್ಕಿಳಿಯಬೇಕಿದೆ. ಇವೆಲ್ಲವನ್ನೂ ಅರಿತಿರುವ ಅಮರ್ನಾಥ್ ಧೋನಿ ಬಗ್ಗೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಮಾಜಿ ನಾಯಕ ಧೋನಿ ಅವರನ್ನು ಇತ್ತೀಚಿಗೆ ಟಿ20 ತಂಡದಿಂದ ಕೈ ಬಿಡಲಾಗಿತ್ತು. ಈಗ ಧೋನಿ ಅವರನ್ನು ಏಕದಿನ ಕ್ರಿಕೆಟ್ನಲ್ಲಷ್ಟೇ ಪರಿಗಣಿಸುತ್ತಿದ್ದು, ಅದರಲ್ಲೂ ಸ್ಥಾನ ಅನಿಶ್ಚಿತ ಎಂಬಂತಿದೆ. ಇದರಿಂದಲೇ ಮೋಹೀಂದರ್ ಅವರ ಸಲಹೆಯಲ್ಲಿ ಅರ್ಥವಿದೆ ಅನ್ನಿಸಿದೆ.
'ಒಬ್ಬರಿಗಿಂದ ಒಬ್ಬರು ಭಿನ್ನವಾಗಿರುತ್ತಾರೆ. ಹೆಚ್ಚಿನ ಅನುಭವಿ ಆಟಗಾರರು ದೇಸೀ ಕ್ರಿಕೆಟ್ ಆಡೋದಿಲ್ಲ. ಆದರೆ ನಾನು ಭಾವಿಸಿರುವಂತೆ ಭಾರತಕ್ಕೆ ಆಡಲು ಬಯಸುವ ಆಟಗಾರ ಅವರವರ ರಾಜ್ಯಕ್ಕೂ ಆಡಬೇಕು. ಬಿಸಿಸಿಐ ಜೊತೆ ಸೇರಿ ಇಂಥದ್ದೊಂದು ನಿಯಮ ಸೇರಿಸುವ ನೆಲೆಯಲ್ಲಿ ಯೋಚಿಸಬೇಕು' ಎಂದು ಪಿಟಿಐ ಜೊತೆ ಮಾತನಾಡುತ್ತ ಅಮರ್ನಾಥ್ ಬುಧವಾರ (ಡಿ.12) ಹೇಳಿಕೊಂಡಿದ್ದಾರೆ.