
ಐಪಿಎಲ್ ಟೂರ್ನಿಯ ಈವರೆಗಿನ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಆಟಗಾರ ಕೇದಾರ್ ಜಾಧವ್ ನಿರಾಸೆ ಮೂಡಿಸಿದ್ದಾರೆ. ನಿರ್ಣಾಯಕ ಸಂದರ್ಭದಲ್ಲಿ ರನ್ ವೇಗವನ್ನು ಹೆಚ್ಚಿಸಲು ಅಸಮರ್ಥರಾಗಿರುವುದು ಚೆನ್ನೈ ತಂಡಕ್ಕೆ ದೊಡ್ಡ ಹಿನ್ನೆಡೆಯನ್ನುಂಟು ಮಾಡಿದೆ. ಅದರಲ್ಲೂ ಕೆಕೆಆರ್ ವಿರುದ್ಧ ನೀಡಿದ ಪ್ರದರ್ಶನದ ಬಳಿಕ ಜಾಧವ್ ವಿರುದ್ಧ ಸಾಕಷ್ಟು ಟೀಕೆ ಕೇಳಿ ಬಂದಿತ್ತು.
ಆದರೆ ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಜಾಧವ್ ಬೆಂಬಲಕ್ಕೆ ನಿಂತಿದ್ದಾರೆ. ಜಾಧವ್ ಅವರನ್ನು ತಂಡದಿಂದ ಹೊರಗಿಡಿ ಎಂಬ ಬಗ್ಗೆ ಸಾಕಷ್ಟು ಅಭಪ್ರಾಯಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ ವೀರೇಂದ್ರ ಸೆಹ್ವಾಗ್ ಅನುಭವಿ ಆಟಗಾರನಿಗೆ ಧೋನಿ ಬೆಂಬಲವಾಗಿ ನಿಲ್ಲಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರ್ಸಿಬಿ ವಿರುದ್ಧ ಚೆನ್ನೈ ಕಣಕ್ಕಿಳಿಯುವ ಮುನ್ನ ತಮ್ಮ ಫೇಸ್ಬುಕ್ ಶೋ "ವೀರೂ ಕಿ ಬೈಠಕ್" ಕಾರ್ಯಕ್ರಮದಲ್ಲಿ ಸೆಹ್ವಾಗ್ ಐಪಿಎಲ್ ವಿಚಾರವಾಗಿ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಅಭಿಮಾನಿ ಜಾಧವ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಜಾಧವ್ ಕಳೆದ ಕೆಲ ಪಂದ್ಯಗಳಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಿಲ್ಲ ನಿಜ. ಆದರೆ ಆತನೊಬ್ಬ ಉತ್ತಮ ಆಟಗಾರನಾಗಿದ್ದು ಮುಂದಿ ಪಂದ್ಯಗಳಲ್ಲಿ ತಮ್ಮ ನೈಜ ಪ್ರದರ್ಶನವನ್ನು ನೀಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ಮುಂದಿನ ಪಂದ್ಯದಿಂದ ಕೈಬಿಡುವ ಯೋಚನೆಯನ್ನು ಧೋನಿ ಮಾಡಬಾರದು ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಜಾದವ್ ಭಾರತ ತಂಡದ ಪರವಾಗಿ ಆಡಿದವರು, ಅವರು ಇನ್ನೂ ಭಾರತೀಯ ತಂಡದ ಭಾಗವಾಗಿದ್ದಾರೆ. ಅವರು ಆಡುವ ಬಳಗದಲ್ಲಿ ಖಂಡಿತಾ ಕಾಣಿಸಿಕೊಳ್ಳಬೇಕು. ಆದರೆ ಅವರಿಗೆ ತಂಡದ ನಾಯಕ ಧೊನಿ ಕಡೆಯಿಂದ ಸ್ಪೂರ್ತಿ ದೊರೆಯಬೇಕು. ಇದರಿಂದ ಉತ್ತಮ ಪ್ರದರ್ಶನ ಹೊರಬರಲು ಸಾಧ್ಯವಿದೆ. ಕಳೆದೆರಡು ಪಂದ್ಯಗಳಲ್ಲಿ ಜಾಧವ್ ವಿಫಲರಾಗಿರಬಹುದು. ಆದರೆ ಅವರು ಖಂಡಿತಾ ಮರಳಿ ತಮ್ಮ ಲಯವನ್ನು ಕಂಡುಕೊಳ್ಳಲಿದ್ದಾರೆ ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.