
ನವದೆಹಲಿ, ಡಿಸೆಂಬರ್ 20: ಜನವರಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಕ್ಕಾಗಿ ಭಾರತ ಕ್ರಿಕೆಟ್ ತಂಡದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಸ್ಥಾನ ಗಿಟ್ಟಿಸಿಕೊಳ್ಳಬೇಕಾದರೆ ಅವರು ರಣಜಿ ಆಡಬೇಕು ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಈಗ ಬೇರೆಯೇ ಮಾತುಗಳು ಕೇಳಿಬರುತ್ತಿವೆ.
ಇತ್ತೀಚೆಗೆ ಫಾರ್ಮ್ ಕಳೆದುಕೊಂಡಿರುವುದರಿಂದ ಧೋನಿ ಅವರನ್ನು ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಸ್ಥಾನ ನೀಡಿರಲಿಲ್ಲ. ಏಕದಿನದಲ್ಲಾದರೂ ಧೋನಿ ಸ್ಥಾನ ಗಳಿಸಬೇಕಾದರೆ ತಾನು ಫಿಟ್ ಎಂಬುದನ್ನು ತೋರಿಸಿಕೊಳ್ಳಬೇಕು. ಹೀಗಾಗಿ ಅವರು ರಣಜಿಯಲ್ಲಿ ಆಡಬೇಕು ಎಂದು ಮಾಜಿ ಆಟಗಾರ ಮೋಹೀಂದರ್ ಅಮರ್ನಾಥ್ ಹೇಳಿದ್ದರು.
ಆದರೆ ಧೋನಿ ರಣಜಿಯಲ್ಲಿ ಆಡಬೇಕಿದ್ದ ಜಾರ್ಖಂಡ್ ತಂಡದ ಕೋಚ್ ರಾಜೀವ್ ಕುಮಾರ್ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಮಾಹಿ ರಣಜಿಯಲ್ಲಿ ಆಡಿದರೆ ಒಬ್ಬ ಪ್ರತಿಭಾವಂತ ಯುವ ಆಟಗಾರ ಅವಕಾಶ ವಂಚಿತನಾಗುತ್ತಾನೆ ಎಂದು ರಾಜೀವ್ ಅಭಿಪ್ರಾಯಿಸಿದ್ದಾರೆ.
'ನಾಲ್ಕು ದಿನದಾಟದ ಈ ಮಾದರಿಯಲ್ಲಿ ಧೋನಿ ಅವಕಾಶ ಪಡೆಯುತ್ತಾರೆ ಎಂದರೆ ಒಬ್ಬ ಉದಯೋನ್ಮುಖ ಆಟಗಾರನಿಂದ ಧೋನಿ ಅವಕಾಶ ಕಸಿದುಕೊಂಡಿದ್ದಾರೆ ಎಂದರ್ಥ. ಆಯ್ಕೆ ಸಮಿತಿಯ ಮೇಲೆ ಪ್ರಭಾವ ಬೀರಲು ಯುವಕರಿಗೆ ಇಂಥ ಪಂದ್ಯಗಳೇ ಪ್ರಮುಖವಾದು. ಅವರೇ ಅವಕಾಶ ಕಾಳೆದುಕೊಳ್ಳುತ್ತಾರೆ. ಬದಲಿಗೆ, ರಾಂಚಿಗೆ ಬಂದಾಗೆಲ್ಲ ಧೋನಿ ಯುವ ಆಟಗಾರರಿಗೆ ಅಭ್ಯಾಸದ ವೇಳೆ ನೆರವಾಗುತ್ತಿದ್ದರೆ ಚೆನ್ನ' ಎಂದು ರಾಜೀವ್ ತಿಳಿಸಿದ್ದಾರೆ.