ಮತ್ತೆ ಟೀಮ್ ಇಂಡಿಯಾ ಸೇರಿ ಎಂದು ಧೋನಿ ಮನವೊಲಿಸಲು ಮುಂದಾದ ರವಿಶಾಸ್ತ್ರಿಗೆ ಸಿಕ್ಕ ಉತ್ತರವಿದು!

ಸದ್ಯ ಟೀಮ್ ಇಂಡಿಯಾದ ಹೆಡ್ ಕೋಚ್ ರವಿಶಾಸ್ತ್ರಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿದ್ದು ತಮ್ಮ ತಂಡಕ್ಕೆ ತರಬೇತಿ ನೀಡುವಲ್ಲಿ ನಿರತರಾಗಿದ್ದಾರೆ. ಈ ಸರಣಿಯ ಮೊದಲ 3 ಪಂದ್ಯಗಳು ಈಗಾಗಲೇ ಮುಗಿದಿದ್ದು ಭಾರತ ಮತ್ತು ಇಂಗ್ಲೆಂಡ್ ತಂಡಗಳೆರಡೂ ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿವೆ.
ಹೀಗೆ ಭಾರತ ಮತ್ತು ಇಂಗ್ಲೆಂಡ್ ತಂಡಗಳೆರಡು ಸರಣಿಯಲ್ಲಿ ಸಮಬಲ ಸಾಧಿಸಿರುವ ಕಾರಣ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಕುರಿತು ಕ್ರೀಡಾಭಿಮಾನಿಗಳಲ್ಲಿ ಕುತೂಹಲ ಮತ್ತು ನಿರೀಕ್ಷೆ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಈಗಾಗಲೇ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಟೀಮ್ ಇಂಡಿಯಾ ಆಟಗಾರರು ಉತ್ತಮ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಇನ್ನು ಈ ಪಂದ್ಯ ಆರಂಭವಾಗುವ ಹಿಂದಿನ ದಿನ ಸಂಜೆ ಲಂಡನ್ನ ಹೋಟೆಲ್ ಒಂದರಲ್ಲಿ ಟೀಮ್ ಇಂಡಿಯಾದ ಹೆಡ್ ಕೋಚ್ ರವಿಶಾಸ್ತ್ರಿ ಬರೆದಿರುವ "ಸ್ಟಾರ್ಗೇಜ಼ಿಂಗ್: ದಿ ಪ್ಲೇಯರ್ಸ್ ಇನ್ ಮೈ ಲೈಫ್" ಪುಸ್ತಕದ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ಪುಸ್ತಕದಲ್ಲಿ ಹಲವಾರು ದಿಗ್ಗಜ ಕ್ರಿಕೆಟಿಗರ ಬಗ್ಗೆ ತಮ್ಮ ಅಭಿಪ್ರಾಯಗಳು ಮತ್ತು ಅವರ ಜೊತೆ ತಮ್ಮ ಒಡನಾಟ ಹೇಗಿತ್ತು ಎಂಬುದನ್ನು ಬರೆದುಕೊಂಡಿರುವ ರವಿಶಾಸ್ತ್ರಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಕುರಿತು ಕೂಡ ಪುಸ್ತಕದಲ್ಲಿ ಬರೆದಿದ್ದಾರೆ. ಹೀಗೆ ಎಂ ಎಸ್ ಧೋನಿ ಟೆಸ್ಟ್ ನಿವೃತ್ತಿಯ ಸಮಯದ ಕುರಿತು ರವಿ ಶಾಸ್ತ್ರಿ ಪುಸ್ತಕದಲ್ಲಿ ಈ ಕೆಳಕಂಡಂತೆ ಬರೆದುಕೊಂಡಿದ್ದಾರೆ..

ಮತ್ತೆ ಟೆಸ್ಟ್ ಕ್ರಿಕೆಟ್ಗೆ ಮರಳುವಂತೆ ಧೋನಿ ಮನವೊಲಿಸಲು ಮುಂದಾಗಿದ್ದ ರವಿಶಾಸ್ತ್ರಿ
ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ನಿಂದ 2014ರ ಸಮಯದಲ್ಲಿ ದೂರ ಸರಿದು ನಿವೃತ್ತಿಯನ್ನು ಘೋಷಿಸಿದರು. ಟೆಸ್ಟ್ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ ಎಂಎಸ್ ಧೋನಿ ಅವರ ನಿರ್ಧಾರ ಕ್ರೀಡಾಭಿಮಾನಿಗಳಲ್ಲಿ ಆಶ್ಚರ್ಯವನ್ನು ಮೂಡಿಸಿತ್ತು. ಹೀಗೆ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಎಂಎಸ್ ಧೋನಿ ಮನವೊಲಿಸಲು ರವಿಶಾಸ್ತ್ರಿ ಮುಂದಾಗಿದ್ದರಂತೆ. 90 ಟೆಸ್ಟ್ ಪಂದ್ಯಗಳನ್ನಾಡಿದ ಬಳಿಕ ಎಂಎಸ್ ಧೋನಿ ನಿವೃತ್ತಿ ಘೋಷಿಸಿದ್ದರು, ಹೀಗಾಗಿ 100 ಪಂದ್ಯಗಳ ಮೈಲಿಗಲ್ಲನ್ನಾದರೂ ಎಂಎಸ್ ಧೋನಿ ಮುಟ್ಟಬೇಕು ಎಂಬ ಉದ್ದೇಶದಿಂದ ಮತ್ತೆ ಟೆಸ್ಟ್ ಕ್ರಿಕೆಟ್ಗೆ ಮರಳುವಂತೆ ಧೋನಿ ಬಳಿ ರವಿಶಾಸ್ತ್ರಿ ಮನವಿಯನ್ನು ಮಾಡಿದ್ದರಂತೆ.

ಗಟ್ಟಿ ನಿರ್ಧಾರ ಕೈಗೊಂಡಿದ್ದ ಎಂಎಸ್ ಧೋನಿ
ರವಿಶಾಸ್ತ್ರಿ ಎಂಎಸ್ ಧೋನಿಯವರನ್ನು ಮತ್ತೆ ಟೆಸ್ಟ್ ಕ್ರಿಕೆಟ್ ಆಡುವಂತೆ ಮನವೊಲಿಸಲು ಮುಂದಾದಾಗ ರವಿಶಾಸ್ತ್ರಿಗೆ ಹೆಚ್ಚೇನೂ ಮಾತನಾಡಲೂ ಬಿಡದ ಎಂಎಸ್ ಧೋನಿ ರವಿಶಾಸ್ತ್ರಿ ಅವರ ಮನವೊಲಿಕೆಗೆ ಆರಂಭದಲ್ಲಿಯೇ ಬ್ರೇಕ್ ಹಾಕಿದ್ದರು. ಹೀಗಾಗಿ ಎಂಎಸ್ ಧೋನಿ ಮನವೊಲಿಸುವ ಯತ್ನವನ್ನು ಪೂರ್ಣಗೊಳಿಸಲಾಗದ ರವಿಶಾಸ್ತ್ರಿ ಧೋನಿಯವರ ವಿದಾಯದ ಹಿಂದೆ ದೃಢವಾದ ನಿರ್ಧಾರವಿತ್ತು ಎಂದು ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.ಹಲವಾರು ಕ್ರಿಕೆಟಿಗರು ಮೈಲಿಗಲ್ಲು ಮುಟ್ಟಬೇಕು ಹಾಗೂ ಬೀಳ್ಕೊಡುಗೆ ಪಂದ್ಯವನ್ನಾಡಬೇಕು ಎಂದು ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಆದರೆ ಧೋನಿಗೆ ಆ ರೀತಿಯ ಆಸೆಗಳೇ ಇರಲಿಲ್ಲ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಕೇವಲ ಭಾರತವಲ್ಲ, ಧೋನಿ ವಿಶ್ವ ಶ್ರೇಷ್ಠ ಆಟಗಾರ
ಇನ್ನೂ ಮುಂದುವರಿದು ಎಂ ಎಸ್ ಧೋನಿ ಕುರಿತು ಬರೆದುಕೊಂಡಿರುವ ರವಿಶಾಸ್ತ್ರಿ 'ಎಂಎಸ್ ಧೋನಿ ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವದ ಶ್ರೇಷ್ಠ ಕ್ರಿಕೆಟ್ ನಾಯಕ, 2 ವಿಶ್ವಕಪ್ ಟ್ರೋಫಿಗಳು ಸೇರಿದಂತೆ ಒಟ್ಟು 3 ಐಸಿಸಿ ಟ್ರೋಫಿಗಳನ್ನು ತನ್ನ ನಾಯಕತ್ವದಲ್ಲಿ ಭಾರತಕ್ಕೆ ಗೆಲ್ಲಿಸಿಕೊಟ್ಟಿರುವ ಎಂ ಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಓರ್ವ ಯಶಸ್ವಿ ನಾಯಕನಾಗಿದ್ದಾರೆ' ಎಂದು ಶ್ಲಾಘಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications