
ಅಡಿಲೇಡ್, ಜನವರಿ 16: ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ (ಜನವರಿ 15) ಮುಕ್ತಾಯಗೊಂಡ ಭಾರತ vs ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ಜಯಿಸಿದ್ದಾಗಿದೆ. ಆದರೆ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ರನ್ ಒಂದು ಈಗ ವಿವಾದಕ್ಕೀಡಾಗಿದೆ.
ದ್ವಿತೀಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿಯ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ 6 ವಿಕೆಟ್ ಗೆಲುವನ್ನಾಚರಿಸಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-1ರಿಂದ ಸಮಬಲಗೊಳಿಸಿಕೊಂಡಿತ್ತು. ಆದರೆ ದ್ವಿತೀಯ ಪಂದ್ಯದಲ್ಲಿ ರನ್ ಕದಿಯುವಾಗ ಧೋನಿ ಎಡವಟ್ಟೊಂದನ್ನು ಮಾಡಿದ್ದರು.
ಅಡಿಲೇಡ್ ಪಂದ್ಯವನ್ನು ಭಾರತ 50 ಓವರ್ ಮುಕ್ತಾಯಕ್ಕೆ ಇನ್ನೂ 4 ಎಸೆತ ಬಾಕಿಯಿರುವಾಗಲೆ 299 ರನ್ ಗುರಿ ತಲುಪಿತ್ತು. ಟೀಮ್ ಇಂಡಿಯಾ ನಾಯಕ ಕೊಹ್ಲಿ ಮತ್ತು ಧೋನಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ್ದರು. ಆದರೆ ಪಂದ್ಯದ ಅಂತಿಮ ಕ್ಷಣದಲ್ಲಿ ಧೋನಿ ಶಾರ್ಟ್ ರನ್ ಮಾಡಿದ್ದರು. ಆದರೆ ಅದು ಅವರ ಗಮನಕ್ಕೂ ಬಂದಿರಲಿಲ್ಲ, ಅಂಪೈರ್ ಕೂಡ ಗಮನಿಸಿರಲಿಲ್ಲ!
45ನೇ ಓವರ್ ಎಸೆಯೋಕೆ ನಾಥನ್ ಲಿಯಾನ್ ಬಂದಿದ್ದರು. 44.5ನೇ ಎಸೆತದ ಸಂದರ್ಭ ಭಾರತಕ್ಕೆ 31 ಎಸೆತಗಳಲ್ಲಿ 45 ರನ್ಗಳ ಅಗತ್ಯವಿತ್ತು. ಆ ವೇಳೆ ಧೋನಿ ಶಾರ್ಟ್ ರನ್ ಮಾಡಿದ್ದರು. ಇದು ಅಂಪೈರ್ ಗಮನಕ್ಕೆ ಬಂದಿರಲಿಲ್ಲ. ಒಂದು ವೇಳೆ ಆಗ ಇದನ್ನು ಅಂಪೈರ್ ಗಮನಿಸಿದ್ದರೆ ತಂಡಕ್ಕೆ 5 ರನ್ಗಳ ಪೆನಾಲ್ಟಿ ಲಭಿಸುತ್ತಿತ್ತು; ಪಂದ್ಯ ತಿರುವನ್ನು ಪಡೆಯುವ ಸಂಭವವಿತ್ತು.