ಜೂನ್ 30 ಭಾನುವಾರ, ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಮತ್ತು ರೋಹಿತ್ ಶರ್ಮಾ ಅವರ 'ಕೂಲ್' ನಾಯಕತ್ವದ ಬಲದಿಂದ ಭಾರತ 2024ರ ಟಿ20 ವಿಶ್ವಕಪ್ ಗೆದ್ದು ಬೀಗಿದೆ. ಈ ಮೂಲಕ ಐಸಿಸಿ ಟ್ರೋಫಿಗಾಗಿ 11 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೊಂಡಿದೆ.
ಟಿ20 ವಿಶ್ವಕಪ್ 2024ರ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡವು 7 ರನ್ಗಳಿಂದ ಜಯ ದಾಖಲಿಸಿತು. ಕಳೆದ ವರ್ಷ ನವೆಂಬರ್ 19 ರಂದು ಅಹಮದಾಬಾದ್ನಲ್ಲಿ ನನಸಾಗದ ಕನಸು ಅಂತಿಮವಾಗಿ ವೆಸ್ಟ್ ಇಂಡೀಸ್ನಲ್ಲಿ ನನಸಾಯಿತು.

ಈ ವೇಳೆ ರೋಹಿತ್ ಶರ್ಮಾ ಪಡೆ ಮೈದಾನದಲ್ಲಿ ಕಣ್ಣೀರು ಹಾಕಿತು. ಟಿವಿ ಮುಂದೆ ಕುಳಿತು ಇದನ್ನು ನೋಡಿದ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕಣ್ಣಲ್ಲೂ ನೀರು ತುಂಬಿತ್ತು.
ಭಾರತವು 2007 ರಲ್ಲಿ ತನ್ನ ಮೊದಲ ಟಿ20 ವಿಶ್ವಕಪ್ ಅನ್ನು ಗೆದ್ದುಕೊಂಡಿತು. ಬಳಿಕ 2013ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದಿತ್ತು.
ಕಳೆದ ವರ್ಷ ತವರಿನಲ್ಲಿ ನಡೆದಿದ್ದ 2023ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ಎದುರು ಭಾರತ ಸೋತಿತ್ತು. ಈ ನೋವು ಎಲ್ಲರಲ್ಲೂ ಇತ್ತು. ಆದರೆ ಇದೀಗ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಆ ನೋವಿಗೆ ಮುಲಾಮು ಸಿಕ್ಕಿದೆ.
ಭಾರತದ ಮೊದಲ ಟಿ20 ವಿಶ್ವ ಚಾಂಪಿಯನ್ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಟಿ20 ವಿಶ್ವಕಪ್ ಗೆದ್ದ ನಂತರ ಭಾರತ ತಂಡಕ್ಕೆ ಶುಭ ಕೋರಿದ್ದಾರೆ.
ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತವು 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿತ್ತು. ಇದೀಗ ಎರಡನೇ ಬಾರಿಗೆ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಇದರ ಬೆನ್ನಲ್ಲೇ ಧೋನಿ ಇನ್ಸ್ಟಾಗ್ರಾಮ್ನಲ್ಲಿ ಟೀಮ್ ಇಂಡಿಯಾಕ್ಕೆ ಶುಭ ಕೋರಿದ್ದಾರೆ.
'ವಿಶ್ವಕಪ್ ಚಾಂಪಿಯನ್ 2024. ನನ್ನ ಹೃದಯ ಬಡಿತ ಹೆಚ್ಚಾಗಿದೆ. ಶಾಂತವಾಗಿ ಮತ್ತು ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳುವ ಮೂಲಕ ಅದ್ಭುತವಾಗಿ ಆಟವಾಡಿದ್ದೀರಾ. ದೇಶದಲ್ಲಿರುವ ಮತ್ತು ಪ್ರಪಂಚದಾದ್ಯಂತ ಇರುವ ಎಲ್ಲಾ ಭಾರತೀಯರ ಪರವಾಗಿ, ವಿಶ್ವಕಪ್ ಅನ್ನು ಮನೆಗೆ ತಂದಿದ್ದಕ್ಕಾಗಿ ಅಭಿನಂದನೆಗಳು.
ಅದ್ಭುತ ಹುಟ್ಟುಹಬ್ಬದ ಉಡುಗೊರೆಗಾಗಿ ಧನ್ಯವಾದಗಳು' ಎಂದು ಧೋನಿ ಬರೆದುಕೊಂಡಿದ್ದಾರೆ. ಜುಲೈ 7 ರಂದು ಧೋನಿಗೆ 43 ವರ್ಷ ತುಂಬಲಿದೆ.
ಸಾಮಾಜಿಕ ಜಾಲತಾನದಲ್ಲಿ ಟೀಮ್ ಇಂಡಿಯಾ ಗೆಲುವಿನ ಬಗ್ಗೆ ಮಾತನಾಡಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು, 'ಟಿ20 ವಿಶ್ವ ಚಾಂಪಿಯನ್ ಆದ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು. ಟೂರ್ನಿಯಲ್ಲಿ ಅತ್ಯುತ್ತಮ ಮತ್ತು ಅಜೇಯ ತಂಡವಾಗಿದೆ. ಪ್ರತಿಯೊಬ್ಬ ಆಟಗಾರನೂ ಅಭಿನಂದನೆಗೆ ಅರ್ಹರು' ಎಂದಿದ್ದಾರೆ.
ದಿಗ್ಗಜ ಸ್ಪಿನ್ನರ್ ಹಾಗೂ 2011ರ ವಿಶ್ವಕಪ್ ವಿಜೇತ ರವಿಚಂದ್ರನ್ ಅಶ್ವಿನ್, 'ನಾವು ಚಾಂಪಿಯನ್ ಆದೆವು' ಎಂದಿದ್ದಾರೆ. ಮಾಜಿ ನಾಯಕ ಹಾಗೂ ಮಾಜಿ ಕೋಚ್ ಅನಿಲ್ ಕುಂಬ್ಳೆ, 'ಟೀಮ್ ಇಂಡಿಯಾಗೆ ಅಭಿನಂದನೆಗಳು. ಇದು ದೊಡ್ಡ ಗೆಲುವು ಎಂದು ಹೇಳಿದ್ದಾರೆ.
ಇನ್ನು ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, 'ಇದು ನನ್ನ ಭಾರತ. ನಾವು ಚಾಂಪಿಯನ್ಗಳು. ತಂಡದ ಬಗ್ಗೆ ಹೆಮ್ಮೆ ಇದೆ. 2011ರ ಏಕದಿನ ವಿಶ್ವಕಪ್ ಗೆಲುವಿನ ಹೀರೋ ಯುವರಾಜ್ ಸಿಂಗ್, 'ಕೊನೆಗೂ ನೀವು ಅದನ್ನು ಮಾಡಿದ್ದೀರಿ.
ಹಾರ್ದಿಕ್ ಪಾಂಡ್ಯ ನೀವು ಹೀರೋ. ಜಸ್ಪ್ರೀತ್ ಬುಮ್ರಾ ಒಂದೇ ಓವರ್ನಲ್ಲಿ ಭಾರತವನ್ನು ಮರಳಿ ಪಂದ್ಯಕ್ಕೆ ಕರೆತಂದರು. ರೋಹಿತ್ ಶರ್ಮಾಗೆ ತುಂಬಾ ಖುಷಿಯಾಗಿದೆ. ಒತ್ತಡದಲ್ಲಿ ಶ್ರೇಷ್ಠ ನಾಯಕ. ಕೊಹ್ಲಿ, ದ್ರಾವಿಡ್ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು. ಸೂರ್ಯ ಹಿಡಿದ ಕ್ಯಾಚ್ ಅದ್ಭುತ ಎಂದು ತಿಳಿಸಿದ್ದಾರೆ.
ಸಚಿನ್ ತೆಂಡೂಲ್ಕರ್, 'ಚಕ್ ದೇ ಇಂಡಿಯಾ' ಎಂದು ಬರೆದರೆ, ಸೌರವ್ ಗಂಗೂಲಿ, 'ರೋಹಿತ್ ಶರ್ಮಾ ಮತ್ತು ತಂಡಕ್ಕೆ ಅಭಿನಂದನೆಗಳು. ಎಂತಹ ದೊಡ್ಡ ಗೆಲುವು. ಬುಮ್ರಾ ಅವರ ಅದ್ಭುತ ಪ್ರದರ್ಶನ. ವಿರಾಟ್, ಅಕ್ಷರ್, ಹಾರ್ದಿಕ್ ಎಲ್ಲರೂ ಚೆನ್ನಾಗಿ ಆಡಿದರು. ರಾಹುಲ್ ದ್ರಾವಿಡ್ ಮತ್ತು ಸಹಾಯಕ ಸಿಬ್ಬಂದಿಗೆ ಅಭಿನಂದನೆಗಳು ಎಂದು ನುಡಿದಿದ್ದಾರೆ.