
ರಾಂಚಿ, ಮಾರ್ಚ್ 7: ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ಎಂಎಸ್ ಧೋನಿ ಅವರು ಜೊತೆ ಆಟಗಾರರಾದ ಕೇದಾರ್ ಜಾಧವ್ ಮತ್ತು ರಿಷಬ್ ಪಂತ್ ಅವರನ್ನು ತವರೂರು ರಾಂಚಿಯಲ್ಲಿ ತನ್ನ ಹಮ್ಮರ್ ಕಾರ್ನಲ್ಲಿ ರೈಡ್ಗೆ ಕರೆದೊಯ್ದಿದ್ದಾರೆ. ಬುಧವಾರ (ಮಾರ್ಚ್ 6) ರಾಂಚಿಗೆ ಬಂದಿಳಿದಿರುವ ಟೀಮ್ ಇಂಡಿಯಾ ಆಟಗಾರರು ಮಾಹಿ ಜೊತೆಗೊಂದು ಸುತ್ತಾಟ ನಡೆಸಿದ್ದಾರೆ.
ನಾಗ್ಪುರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಭಾರತ 8 ರನ್ ರೋಚಕ ಗೆಲುವು ದಾಖಲಿಸಿತ್ತು. ಈಗ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-0ಯ ಮುನ್ನಡೆಯಲ್ಲಿರುವುದರಿಂದ ಹುಮ್ಮಸ್ಸಿನಲ್ಲಿರುವ ಕೂಲ್ ಕ್ಯಾಪ್ಟನ್ ಮತ್ತವರ ಸಹ ಆಟಗಾರರು ಧೋನಿಯ ಹಮ್ಮರ್ ಕಾರ್ ರೈಡ್ನೊಂದಿಗೆ ಖುಷಿಯ ಕ್ಷಣಗಳನ್ನು ಕಳೆದರು.
ಇಂಡಿಯನ್ ಕ್ರಿಕೆಟ್ ಟೀಮ್ 7 ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋವನ್ನು ಮಾರ್ಚ್ 6ರಂದು ಅಪ್ ಲೋಡ್ ಮಾಡಲಾಗಿದೆ. ಟ್ವಿಟರ್ನಲ್ಲೂ ಈ ವಿಡಿಯೋವಿದೆ. ಧೋನಿ ಹುಟ್ಟೂರು ರಾಂಚಿಯಲ್ಲಿ ಧೋನಿ ಮತ್ತು ಸಹ ಆಟಗಾರರು ಜಾಲಿ ರೈಡ್ ಹೊರಡೋಕೂ ಮುನ್ನ ಅಭಿಮಾನಿಗಳು ಸುತ್ತುವರಿದು ವೀಕ್ಷಿಸಿದ್ದನ್ನು ವಿಡಿಯೋದಲ್ಲಿ ಕಾಣಬಹುದು.