ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಇಂದು 42ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ರಾಂಚಿಯ ಪುಟ್ಟ ಹಳ್ಳಿಯೊಂದರಿಂದ ಬಂದು ಕ್ರಿಕೆಟ್ನಲ್ಲಿ ಅತ್ಯುನ್ನತ ಸಾಧನೆಗಳನ್ನು ಮಾಡಿ ವಿಶ್ವದ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿರುವ ಮಾಹಿ ಭಾರತೀಯ ಕ್ರಿಕೆಟ್ಗೆ ನೀಡಿದ ಕೊಡುಗೆ ಸಾಮಾನ್ಯದ್ದಲ್ಲ. ಎರಡು ವಿಶ್ವಕಪ್ ಗೆದ್ದ ಧೋನಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಯಾವತ್ತೂ ಮರೆಯದ ಅನರ್ಘ್ಯ ರತ್ನ.
ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿ ಹತ್ತಿರತ್ತಿರ ಮೂರು ವರ್ಷವಾಗುತ್ತಾ ಬಂದಿದೆ. ಆದರೆ ಐಪಿಎಲ್ನಲ್ಲಿ ಧೋನಿ ಇನ್ನೂ ಸಕ್ರಿಯವಾಗಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕಳೆದ ಐಪಿಎಲ್ ಆವೃತ್ತಿಯಲ್ಲಿಯೂ ಧೋನಿ ನೇತೃತ್ವದಲ್ಲಿ ಸಿಎಸ್ಕೆ 5ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಸಾಧನೆ ಮಾಡಿದೆ. ಇನ್ನು ಧೋನಿ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಅತ್ಯುನ್ನತ ಮಟ್ಟವನ್ನು ಕಂಡು ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿತ್ತು. ಟಿ20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನು ಧೋನಿ ನಾಯಕತ್ವದಲ್ಲಿಯೇ ಭಾರತ ಗೆದ್ದುಕೊಂಡಿತ್ತು. ಅಲ್ಲದೆ ವೈಯಕ್ತಿಯವಾಗಿ ಸಾಕಷ್ಟು ಸ್ಮರಣೀಯ ಇನ್ನಿಂಗ್ಸ್ಗಳನ್ನು ನೀಡಿದ್ದಾರೆ ಮಾಹಿ.

ಇಂದು ಅಭಿಮಾನಿಗಳ ಪ್ರೀತಿಯ ಧೋನಿಗೆ 42ನೇ ಹುಟ್ಟುಹಬ್ಬ. ಈ ವಿಶೇಷ ಸಂದರ್ಭದಲ್ಲಿ ಧೋನಿ ಅಭಿಮಾನಿಗಳು ಎಂದೂ ಮರೆಯಲಾರದ 5 ಸ್ಮರಣೀಯ ಇನ್ನಿಂಗ್ಸ್ಗಳ ಬಗ್ಗೆ ನೋಡೋಣ. ಮುಂದೆ ಓದಿ.
ಭಾರತೀಯ ಕ್ರಿಕೆಟ್ ಅಭಿಮಾನಿಗಳು ಎಂದೆಂದೂ ಮರೆಯದ ಇನ್ನಿಂಗ್ಸ್ ಇದು. 2011ರ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಧೋನಿ ಬ್ಯಾಟ್ನಿಂದ ಈ ಅದ್ಭುತ ಹೊರಬಂದಿತ್ತು. ವಾಂಖೆಡೆ ಸ್ಟೇಡಿಯಮ್ನಲ್ಲಿ ನಡೆದ ಈ ಪಂದ್ಯದಲ್ಲಿ ಧೋನಿ ತಮ್ಮ ಎಂದಿನ ಐದನೇ ಕ್ರಮಾಂಕಕ್ಕೂ ಮುನ್ನವೇ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಈ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಫೈನಲ್ ಪಂದ್ಯದಲ್ಲಿ ಧೋಣಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಆ ವಿಶ್ವಕಪ್ನಲ್ಲಿ ಹೇಳಿಕೊಳ್ಳುವಂತಾ ಅದ್ಭುತ ಪ್ರದರ್ಶನ ಧೋನಿ ಬ್ಯಾಟ್ನಿಂದ ಬಂದಿರಲಿಲ್ಲವಾದರೂ ಫೈನಲ್ ಪಂದ್ಯದಲ್ಲಿ ಈ ಧೋನಿ ಶ್ರೇಷ್ಠ ಇನ್ನಿಂಗ್ಸ್ ಆಡಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಈ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ ಏಕದಿನ ವಿಶ್ವಕಪ್ನಲ್ಲಿ 28 ವರ್ಷಗಳ ಬಳಿಕ ಚಾಂಪಿಯನ್ ಎನಿಸಿಕೊಂಡಿತು.
ಎಂಎಸ್ ಧೋನಿ ತನ್ನ ಸಾಮರ್ಥ್ಯವೇನು ಎಂಬುದನ್ನು ಆರಂಭಿಕ ಹಂತದಲ್ಲಿಯೇ ಸಾಬೀತುಪಡಿಸಿದ್ದರು. ಅದರಲ್ಲೂ 2005ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ಗೆ ಕ್ರಿಕೆಟ್ ಜಗತ್ತು ಬೆಚ್ಚಿ ಬಿದ್ದಿತ್ತು. ಈ ಪಂದ್ಯದಲ್ಲಿ ಮಾಹಿ ತನ್ನ ಬ್ಯಾಟಿಂಗ್ ಬಲ ಬಹಿರಂಗಪಡಿಸಿದ್ದರು. ಶ್ರೀಲಂಕಾ ವಿರುದ್ಧ ಜೈಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಲಂಕಾ ಪಡೆ ಸಂಗಕ್ಕರ ಶತಕದ ನೆರವಿನಿಂದ 298 ರನ್ಗಳನ್ನು ಸಿಡಿಸಿತ್ತು. ಇದನ್ನು ಬೆನ್ನಟ್ಟಿದ ಭಾರತ ತಂಡದ ಪರವಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದಿದ್ದರು ಧೋನಿ. ಬೌಂಡರಿ, ಸಿಕ್ಸರ್ಗಳ ಸುರಿಮಳೆ ಸಿಡಿಸಿದ ಧೋನಿ ಭರ್ಜರಿ 183 ರನ್ಗಳನ್ನು ಗಳಿಸಿ ಭಾರತ ತಂಡದ ಗೆಲುವಿಗೆ ಕಾರಣವಾಗಿದ್ದರು.
ಎಂಎಸ್ ಧೋನಿಯ ಶತಕದ ಹೊರತಾಗಿಯೂ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದ ಈ ಅಪರೂಪದ ಪಂದ್ಯ ನಡೆದಿದ್ದು 2012ರಲ್ಲಿ ಪಾಕಿಸ್ತಾನದ ವಿರುದ್ಧ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಗಿ 29 ರನ್ಗಳಿಸುವಷ್ಟರಲ್ಲಿ ಅಗ್ರ 5 ವಿಕೆಟ್ ಕಳೆದುಕೊಂಡಿತ್ತು. ಈ ಕಠಿಣ ಪರಿಸ್ಥಿತಿಯಲ್ಲಿ ಧೋನಿ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿ ಇನ್ನಿಂಗ್ಸ್ ಕಟ್ಟಿ ತಂಡಕ್ಕೆ ಚೇತರಿಕೆ ನೀಡಿದರು. ಧೋನಿ 125 ಎಸೆತಗಳಲ್ಲಿ 113 ರನ್ ದಾಖಲಿಸಿದ ಧೋನಿ ತಂಡದ ಗೌತವಯುತ ಮೊತ್ತಕ್ಕೆ ಕಾರಣವಾದರು. ಈ ಪಂದ್ಯದಲ್ಲಿ ಭಾರತ ನಿಗದಿತ 50 ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 227 ರನ್ ಗಳಿಸಲು ಸಾಧ್ಯವಾಗಿತ್ತು. ಆದರೆ ಈ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಸಾಧ್ಯವಾಗಲಿಲ್ಲ
2012ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಶತಕ ಅಲ್ಲ ಅರ್ಧ ಶತಕವನ್ನೂ ಸಿಡಿಸಿರಲಿಲ್ಲ. ಹಾಗಿದ್ದರೂ ಇದು ಧೋನಿ ಅಭಿಮಾನಿಗಳ ನೆನಪಿನಲ್ಲಿ ಸದಾ ಉಳಿದುಕೊಂಡ ಇನ್ನಿಂಗ್ಸ್ ಎಂದೇ ಹೇಳಲಾಗುತ್ತದೆ. ಆ ಪಂದ್ಯದಲ್ಲಿ ಧೋನಿ ಗಳಿಸಿದ ರನ್ ಅಂದು ಭಾರತದ ಪಾಲ್ಗೊಂಡಿದ್ದ ಕಾಮನ್ವೆಲ್ತ್ ತ್ರಿಕೋನ ಸರಣಿಯಲ್ಲಿ ಜೀವಂತವಿರಲು ಕಾರಣವಾಯಿತು. ಅಂತಿಮ ಓವರ್ವಲ್ಲಿ ಭಾರತದ ಗೆಲುವಿಗೆ ಅಗತ್ಯವಿದ್ದಿದ್ದು 13 ರನ್ಗಳು. ಈ ಹಂತದಲ್ಲಿ ಕ್ಲಿಂಟ್ ವಿಕಿ ಎಸೆದ ಮೂರನೇ ಎಸೆತವನ್ನು ಸಿಕ್ಸರ್ಗೆ ಅಟ್ಟುವ ಮೂಲಕ ಭಾರತದ ಗೆಲುವಿಗೆ ಕಾರಣವಾಗಿದ್ದರು ಧೋನಿ. ಆ ಪಂದ್ಯದಲ್ಲಿ ಮಾಹಿ ಅಜೇಯ 44 ರನ್ಗಳನ್ನು ಗಳಿಸಿದ್ದರು.
ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಶ್ರೀಲಂಕಾ ವೆಸ್ಟ್ ಇಂಡೀಸ್ ತಂಡವನ್ನು ಒಳಗೊಂಡ ತ್ರಿಕೋನ ಸರಣಿಯಲ್ಲಿ ಧೋನಿ ಮತ್ತೊಂದು ಸ್ಮರಣೀಯ ಇನ್ನಿಂಗ್ಸ್ ಆಡಿದ್ದರು. ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ನಲ್ಲ ನಡೆದ ಈ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಭಾರತ 201 ರನ್ಗಳಿಗೆ ಕಟ್ಟಿಹಾಕಿತ್ತು. ಇದನ್ನು ಬೆನ್ನತ್ತಿದ ಭಾರತ 32 ನೇ ಓವರ್ನ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 139 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಆಘಾತವಾಗಿದ್ದು ರೋಹಿತ್ ಶರ್ಮಾ ಔಟಾದ ಬಳಿಕ. ನಂತರ ಹಠಾತ್ ಕುಸಿತ ಕಂಡ ಭಾರತ 182 ರನ್ಗಳಿಗೆ 9 ವಿಕೆಟ್ ಕಳೆದುಕೊಂಡು ಶಾಕ್ ಅನುಭವಿಸಿತ್ತು. ಆದರೆ ಧೋನಿ ಕ್ರೀಸ್ನಲ್ಲಿದ್ದು ಗೆಲುವಿನ ಹೋರಾಟವನ್ನು ಕೈಬಿಟ್ಟಿರಲಿಲ್ಲ. ಶಮಿಂಡ ಎರಂಗ ಎಸೆತ ಅಂತಿಮ ಓವರ್ನಲ್ಲಿ ಭಾರತದ ಗೆಲುವಿಗೆ ಬೇಕಿದ್ದಿದ್ದು ಬರೊಬ್ಬರಿ 15 ರನ್. ಆದರೆ ಧೋನಿ ಈ ಓವರ್ನಲ್ಲಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಸಿಡಿಸುವ ಮೂಲಕ ಆ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.