
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯವನ್ನು ಹೇಳಿದ ಬಳಿಕ ಧೋನಿ ಆಟದ ಬಗ್ಗೆ ಸ್ನೇಹಿತರು ಸಾಕಷ್ಟು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಧೋನಿ ಆಪ್ತ ಗೆಳೆಯರಲ್ಲಿ ಒಬ್ಬರೆನಿಸಿರುವ ಮಾಜಿ ವೇಗಿ ಆರ್ಪಿ ಸಿಂಗ್ ಕುತೂಹಲಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.
ಟೀಮ್ ಇಂಡಿಯಾದಲ್ಲಿ ಧೋನಿ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಒತ್ತಡವನ್ನು ನಿಭಾಯಿಸುತ್ತಾ ಫಿನಿಷಿಂಗ್ ಮಾಡುತ್ತಿದ್ದ ರೀತಿಗೆ ಖ್ಯಾತರಾಗಿದ್ದಾರೆ. ಆದರೆ ಧೋನಿ ಅತ್ಯುತ್ತಮ ಆಟಗಳು ಬಂದಿದ್ದು ಅಗ್ರ ಕ್ರಮಾಂಕದಲ್ಲಿ ಎಂಬುದೂ ಅಷ್ಟೇ ಸತ್ಯ. ಹೀಗಾಗಿ ಧೋನಿ ಸ್ವತಃ ಅಗ್ರ ಕ್ರಮಾಂಕದಲ್ಲೇ ಕಣಕ್ಕಿಳಿಯುವ ಬಯಕೆಯನ್ನು ಸ್ವತಃ ವ್ಯಕ್ತಪಡಿಸಿದ್ದರು ಎಂದು ಆರ್ಪಿ ಸಿಂಗ್ ಹೇಳಿದ್ದಾರೆ.
ಎಂಎಸ್ ಧೋನಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಾನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಬಗ್ಗೆ ಪ್ರಸ್ತಾಪವನ್ನು ಮಾಡಿದ್ದರು. ಆದರೆ ತಂಡದ ಮ್ಯಾನೇಜ್ಮೆಂಟ್ನ ಯೋಚನೆ ಯೇ ಬೇರೆಯಾಗಿತ್ತು. ಧೋನಿಯಷ್ಟು ಒತ್ತಡವನ್ನು ನಿಭಾಯಿಸಿಕೊಂಡು ಅಂತಿಮ ಹಂತದಲ್ಲಿ ಪಂದ್ಯವನ್ನು ಮುಗಿಸುವ ಆಟಗಾರ ತಂಡದಲ್ಲಿ ಇರಲಿಲ್ಲ. ಹಾಗಾಗಿ ಧೋನಿಗೆ ಕೆಳ ಕ್ರಮಾಂಕವನ್ನೇ ಖಾಯಂಗೊಳಿಸಲಾಯಿತು ಎಂದು ಆರ್ಪಿ ಸಿಂಗ್ ಹೇಳಿದ್ದಾರೆ.
"ಕ್ರಿಕೆಟ್ ಇತಿಹಾಸವನ್ನು ನೀವು ನೋಡಿದರೆ ಧೋನಿಯನ್ನು ಹೊರತುಪಡಿಸಿ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಅಷ್ಟು ಪ್ರಮಾಣದಲ್ಲಿ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿರುವ ಇನ್ನೊಬ್ ಆಟಗಾರ ಸಿಗಲಾರ. ನಾವು ಬೆವೆನ್ ಬಗ್ಗೆ ಮಾತನಾಡಬಹುದು ಆದರೆ ಎಂಎಸ್ ಧೋನಿ ಓರ್ವ ಸಂಪೂರ್ಣ ವಿಶೇಷವಾದ ಆಟಗಾರ" ಎಂದು ಆರ್ಪಿ ಸಿಂಗ್ ಹೇಳಿದ್ದಾರೆ.
ಎಂಎಸ್ ಧೋನಿ ಕಳೆದ ಸ್ವಾತಂತ್ರ್ಯೋತ್ಸವ ದಿನದಂದು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯವನ್ನು ಘೋಷಿಸಿದರು. ಆದರೆ ಐಪಿಎಲ್ನಲ್ಲಿ ಕಣಕ್ಕಿಳಿಯಲಿರುವ ಧೋನಿ ಈಗಾಗಲೇ ಯುಎಇಯನ್ನು ತಲುಪಿದ್ದಾರೆ. ಕ್ವಾರಂಟೈನ್ ಮುಗಿಸಿ ತಮ್ಮ ಅಭ್ಯಾಸವನ್ನು ಮುಂದುವರಿಸಲಿದ್ದಾರೆ.