
ನವದೆಹಲಿ, ನವೆಂಬರ್ 28: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಾಪಸ್ಸಾಗುತ್ತಾರಾ ಇಲ್ವಾ ಅನ್ನೋದು ಯುವ ಬ್ಯಾಟ್ಸ್ಮನ್-ವಿಕೆಟ್ ಕೀಪರ್ಗಳಾದ ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಅವರ ಪ್ರದರ್ಶನದ ಮೂಲಕ ನಿರ್ಧಾರವಾಗಲಿದೆ ಎಂದು ಮಾಜಿ ಕ್ರಿಕೆಟಿಗ, 'ವೆರಿ ವೆರಿ ಸ್ಪೆಷಲ್' ಖ್ಯಾತಿಯ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯಿಸಿದ್ದಾರೆ.
ಲಕ್ಷ್ಮಣ್ ಪ್ರಕಾರ, ಎಂಎಸ್ ಧೋನಿ ಮುಂದಿನ ಕೆಲ ತಿಂಗಳ ಕಾಲ ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಪ್ರದರ್ಶನದ ಮೇಲೆ ಕಣ್ಣಿಡಲಿದ್ದಾರೆ. ಅವರ ಪ್ರದರ್ಶನವನ್ನಾಧರಿಸಿ ತಾನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಬೇಕೋ ಬೇಡವೋ ಎಂದು ನಿರ್ಧರಿಸಲಿದ್ದಾರೆ.
'ನನ್ನ ಪ್ರಕಾರ ಧೋನಿ, ಪಂತ್ ಮತ್ತು ಸ್ಯಾಮ್ಸನ್ ಪ್ರದರ್ಶನವನ್ನು ತಾಳ್ಮೆಯಿಂದ ಕಾದು ನೋಡಲಿದ್ದಾರೆ. ಅವರಿಗೆ ಅವಕಾಶ ಸಿಕ್ಕರೆ, ಐಪಿಎಲ್ ಬಳಿಕ ಧೋನಿ ನಿವೃತ್ತಿ ಘೋಷಿಸಲಿದ್ದಾರೆ ಎಂದು ನನಗನ್ನಿಸುತ್ತಿದೆ. ಧೋನಿ ಐಪಿಎಲ್ಗೆ ತಯಾರಾಗುತ್ತಿದ್ದಾರೆ. ಸಿಎಸ್ಕೆ ಪರ ಆಡುವಾಗ ಹಿಂದಿನ ಅದೇ ಪ್ರದರ್ಶನವನ್ನು ಧೋನಿ ನೀಡಲಿದ್ದಾರೆ ಎಂದು ನನಗೆ ಭರವಸೆಯಿದೆ,' ಎಂದು ಲಕ್ಷ್ಮಣ್ ಹೇಳಿದ್ದಾರೆ.
ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ, ಧೋನಿಯ ಐಪಿಎಲ್ ಪ್ರದರ್ಶನ ಅವರ ಭವಿಷ್ಯವನ್ನು ನಿರ್ಧರಿಸಲಿದೆ ಎಂದಿದ್ದರು. ಅಂದರೆ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ನಲ್ಲಿ ಧೋನಿ ಆಡಬೇಕೋ ಬೇಡವೋ ಅನ್ನೋದು ಐಪಿಎಲ್ ಪ್ರದರ್ಶನದ ಮೂಲಕ ನಿರ್ಧರಿಸಲಾಗುತ್ತದೆ ಎಂಬರ್ಥದಲ್ಲಿ ಶಾಸ್ತ್ರಿ ಹೇಳಿಕೆ ನೀಡಿದ್ದರು.