ಮುಂಬೈ ಕ್ರಿಕೆಟ್ ಸಂಸ್ಥೆಯ (ಎಂಸಿಎ) ಅಧ್ಯಕ್ಷರಾಗಿದ್ದ ಅಮೋಲ್ ಕಾಳೆ ಅವರು ಹೃದಯ ಸ್ತಂಭನದಿಂದ ನ್ಯೂಯಾರ್ಕ್ನಲ್ಲಿ ಭಾನುವಾರದಂದು ನಿಧನರಾಗಿದ್ದಾರೆ.
ಜೂನ್ 9ರಂದು ನ್ಯೂಯಾರ್ಕ್ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ 2024ರ ಟಿ20 ವಿಶ್ವಕಪ್ ಪಂದ್ಯವನ್ನು ವೀಕ್ಷಿಸಿದ ಕೆಲವೇ ಗಂಟೆಗಳ ನಂತರ, ಅಮೋಲ್ ಕಾಳೆ ಹೃದಯ ಇಹಲೋಕ ತ್ಯಜಿಸಿದರು.

ಅಮೋಲ್ ಕಾಳೆ ಅವರ ನಿಧನವು ಕ್ರಿಕೆಟ್ ಸಮುದಾಯದಲ್ಲಿ ಭಾರಿ ಆಘಾತವನ್ನು ಉಂಟುಮಾಡಿದೆ. ಹಾಲಿ ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವರು ಸಂತಾಪ ಸಂದೇಶದ ಜೊತೆಗೆ ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ.
ಮುಂಬೈ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಅಜಿಂಕ್ಯಾ ನಾಯ್ಕ್ ಮತ್ತು ಇನ್ನೊಬ್ಬ ಪದಾಧಿಕಾರಿಯೊಂದಿಗೆ ಭಾನುವಾರ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಅಮೋಲ್ ಕಾಳೆ ಅವರು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯವನ್ನು ವೀಕ್ಷಿಸಲು ನ್ಯೂಯಾರ್ಕ್ಗೆ ತೆರಳಿದ್ದರು.
47 ವರ್ಷದ ಅಮೋಲ್ ಕಾಳೆ 2022ರಲ್ಲಿ ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರು ಮುಂಬೈ ಕ್ರಿಕೆಟ್ ಸಂಸ್ಥೆಯ (ಎಂಸಿಎ) ಚುನಾವಣೆಯಲ್ಲಿ ವಿಶ್ವಕಪ್ ವಿಜೇತ ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಅವರನ್ನು ಸೋಲಿಸಿ ದೇಶದ ಪ್ರಬಲ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಅಮೋಲ್ ಕಾಳೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಆಪ್ತ ಸಹಾಯಕ ಎಂದು ಹೆಸರಾಗಿದ್ದರು. ಕ್ರಿಕೆಟ್ನಲ್ಲಿ ಅವರ ಕೆಲಸದ ಹೊರತಾಗಿ, ನಾಗ್ಪುರ ಮೂಲದ ಅಮೋಲ್ ಕಾಳೆ ಅವರು ಮೊದಲ ತಲೆಮಾರಿನ ಉದ್ಯಮಿಯಾಗಿದ್ದು, ಅವರು ಒಂದು ದಶಕದಿಂದ ಮುಂಬೈನಲ್ಲಿ ನೆಲೆಸಿದ್ದರು.
ದೇಶೀಯ ಆಟಗಾರರ ಪಂದ್ಯ ಶುಲ್ಕವನ್ನು ದ್ವಿಗುಣಗೊಳಿಸುವ ಬಿಸಿಸಿಐ ನಿರ್ಧಾರದ ನಂತರ, ಮುಂಬರುವ 2024-25ರ ರಣಜಿ ಋತುವಿಗಾಗಿ ಮುಂಬೈನಲ್ಲಿ ಹಿರಿಯ ದೇಶೀಯ ಕ್ರಿಕೆಟಿಗರ ಪಂದ್ಯ ಶುಲ್ಕವನ್ನು ದ್ವಿಗುಣಗೊಳಿಸುವಲ್ಲಿ ಅಮೋಲ್ ಕಾಳೆ ಪ್ರಮುಖ ಪಾತ್ರ ವಹಿಸಿದ್ದರು.
ಕೆಂಪು-ಚೆಂಡಿನ ಕ್ರಿಕೆಟ್ ಅನ್ನು ಉತ್ತೇಜಿಸುವ ಅಗತ್ಯತೆಯ ಬಗ್ಗೆ ಅಮೋಲ್ ಕಾಳೆ ಆಗಾಗ್ಗೆ ಮಾತನಾಡಿದ್ದಾರೆ. ಗಮನಾರ್ಹವಾಗಿ, ಎಂಸಿಎ, ಈ ವರ್ಷದ ಆರಂಭದಲ್ಲಿ 2023-24ರ ಋತುವಿನಿಂದ ವಿಜಯಶಾಲಿಯಾದ ರಣಜಿ ಟ್ರೋಫಿ ತಂಡಕ್ಕೆ 5 ಕೋಟಿ ರೂಪಾಯಿಗಳ ಹೆಚ್ಚುವರಿ ಬಹುಮಾನವನ್ನು ಘೋಷಿಸಿತ್ತು.