ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಮುಂಬೈ ತಂಡದ ಭರವಸೆಯ ಆಟಗಾರ ಅಜಿಂಕ್ಯ ರಹಾನೆ ಅವರ ನ್ಯೂ ವರ್ಷನ್ ಅನಾವರಣವಾಗಿದೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ರಹಾನೆ ತಮ್ಮಲ್ಲಿ ಇನ್ನು ಬ್ಯಾಟಿಂಗ್ ಕ್ಷಮತೆ ಇರುವುದಾಗಿ ಸಾಬೀತು ಪಡಿಸಿದ್ದಾರೆ. ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದ ರಹಾನೆ ಬ್ಯಾಟಿಂಗ್ ಸ್ವರ್ಗದಲ್ಲಿ ಅಬ್ಬರದ ಆಟವನ್ನು ಆಡಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಈ ಮೂಲಕ ಬಿಸಿಸಿಐ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ.
ಈಗಾಗಲೇ ಟೆಸ್ಟ್ ತಂಡದಿಂದ ಹೊರಗುಳಿದಿರುವ ಅಜಿಂಕ್ಯ ರಹಾನೆ, ಪ್ರಸಕ್ತ ವರ್ಷ ಟಿ20 ಕ್ರಿಕೆಟ್ನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡರು. ಟೂರ್ನಿಯುದಕ್ಕೂ ಅಮೋಘ ಬ್ಯಾಟಿಂಗ್ ನಡೆಸಿರುವ ರಹಾನೆ ಅಬ್ಬರಿಸಿದರು. ಇವರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸುತ್ತಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರಹಾನೆಗೆ ಅಗ್ರ ಸ್ಥಾನ. ಇವರ ಭರ್ಜರಿ ಆಟದ ಫಲವಾಗಿ ಮುಂಬೈ ತಂಡ ಫೈನಲ್ಗೆ ಪ್ರವೇಶ ಪಡೆದಿದೆ.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಬರೋಡಾ 20 ಓವರ್ಗಳಲ್ಲಿ 7 ವಿಕೆಟ್ಗೆ 158 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ 17 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು.
ಬರೋಡಾ ತಂಡದ ಪರ ಸ್ಟಾರ್ ಆಟಗಾರರು ತಮ್ಮ ಮೇಲೆ ತಂಡ ಇಟ್ಟ ಭರವಸೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ತಂಡದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಸಿಂಗಲ್ ಡಿಜಿಟ್ನಲ್ಲಿ ಆಟ ಮುಗಿಸಿದರು. ಆದರೆ ನಾಯಕ ಕೃನಾಲ್ ಪಾಂಡ್ಯ 4 ಬೌಂಡರಿ ಸಹಾಯದಿಂದ 30, ಆರಂಭಿಕ ಶಾಶ್ವತ್ ರಾವತ್ 33, ಶಿವಾಲಿಕ್ ಶರ್ಮಾ 33 ಹಾಗೂ ಅತೀತ್ ಸೇಠ್ 22 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕ ಪೃಥ್ವಿ ಶಾ (8) ಹಾಗೂ ಅಜಿಂಕ್ಯ ರಹಾನೆ ಜೊತೆಗೂಡಿ ತಂಡಕ್ಕೆ 30 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಎರಡನೇ ವಿಕೆಟ್ಗೆ ಭರವಸೆಯ ಆಟಗಾರ ರಹಾನೆ ಜೊತೆಗೂಡಿದ ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಆಟದ ಪ್ರದರ್ಶನ ನೀಡಿದರು. ಈ ಜೋಡಿ ಎರಡನೇ ವಿಕೆಟ್ಗೆ 88 ರನ್ ಸೇರಿಸಿತು.
ಭರವಸೆಯ ಆಟಗಾರ ಅಜಿಂಕ್ಯ ರಹಾನೆ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಸೆಮಿಫೈನಲ್ ಪಂದ್ಯದಲ್ಲಿ 56 ಎಸೆತಗಳಲ್ಲಿ 11 ಬೌಂಡರಿ, 5 ಸಿಕ್ಸರ್ ನೆರವಿನಿಂದ ಕೇವಲ 2 ರನ್ಗಳ ಅಂತರದಿಂದ ಶತಕ ವಂಚಿತರಾದರು. ಇವರ ಬುಟ್ಟಿಯಲ್ಲಿ 98 ರನ್ಗಳು ಸೇರಿವೆ.