
ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಆರಿಸಿದ್ದರು ಸಂಪೂರ್ಣವಾಗಿ ಕೌಶಲದ ಆಧಾರದಲ್ಲಿ ಎಂದು ಎಂಐ ಕೋಚ್ ಮಹೇಲ ಜಯವರ್ಧನೆ ಹೇಳಿದ್ದಾರೆ.
ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆದಿದ್ದ ಐಪಿಎಲ್ ಆಟಗಾರರ ಹರಾಜಿನಲ್ಲಿ ಪಾಲ್ಗೊಂಡಿದ್ದ ಅರ್ಜುನ್ ತೆಂಡೂಲ್ಕರ್ ಅವರನ್ನು ಅವರ ಮೂಲ ಬೆಲೆ 20 ಲಕ್ಷ ರೂ.ಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಖರೀದಿಸಿತ್ತು. ಈ ಖರೀದಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದವು.
21ರ ಹರೆಯದ ಎಡಗೈ ಮಧ್ಯಮ ವೇಗಿ ಅರ್ಜುನ್ ಅವರನ್ನು ಮುಂಬೈ ಆರಿಸಿದ್ದರು ಅವರು ಸಚಿನ್ ಪುತ್ರ ಅನ್ನೋ ಕಾರಣಕ್ಕಾಗಿ ಹೊರತು ಪ್ರತಿಭೆ ಆಧಾರದಲ್ಲಿ ಅಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳು ಹರಿದಾಡತೊಡಗಿದ್ದವು. 2 ಟಿ20 ಪಂದ್ಯಗಳನ್ನಾಡಿರುವ ಅರ್ಜುನ್, 2 ವಿಕೆಟ್ ಪಡೆದಿದ್ದಾರೆ.
'ಸಂಪೂರ್ಣವಾಗಿ ಕೌಶಲದ ಆಧಾರದಲ್ಲಿ ನಾವು ಅರ್ಜುನ್ ಅವರನ್ನು ನೋಡಿದ್ದೇವೆ. ಸಚಿನ್ ಹೆಸರಿನ ಕಾರಣಕ್ಕಾಗಿದ್ದರೆ ಅವರಿಗೆ ಹೆಚ್ಚಿನ ಮೌಲ್ಯ ಲಭಿಸುತ್ತಿತ್ತು. ಆದರೆ ಅದೃಷ್ಟವಶಾತ್ ಅರ್ಜುನ್ ಬ್ಯಾಟ್ಸ್ಮನ್ ಅಲ್ಲ, ಬೌಲರ್. ಅರ್ಜುನ್ನಂತೆ ಬೌಲಿಂಗ್ ಮಾಡಲು ಸಾಧ್ಯವಾಗಿದ್ದರೆ ಸಚಿನ್ ಹೆಮ್ಮೆ ಪಡುತ್ತಿದ್ದರು ಎಂದು ನನಗನ್ನಿಸುತ್ತದೆ,' ಎಂದು ಇಎಸ್ಪಿಎನ್ ಕ್ರಿಕ್ ಇನ್ಫೋ ಜೊತೆ ಜಯವರ್ಧನೆ ಹೇಳಿದ್ದಾರೆ.