ಬಿಸಿಸಿಐ ರಿಟೆನ್ಷನ್ ಲೀಸ್ಟ್ ನೀಡಲು ಮಾಲೀಕರಿಗೆ ಇದೇ ಗುರುವಾರ ಕೊನೆಯ ದಿನವಾಗಿದೆ. ಹಲವಾರು ಸಭೆಗಳು, ಚರ್ಚೆಗಳು, ಮಾತುಕತೆಗಳ ಫಲ ನಾಳೆ ಅಕ್ಷರ ರೂಪದಲ್ಲಿ ಬಿಸಿಸಿಐ ಕೈ ಸೇರಲಿದೆ. ಯಾರನ್ನು ಯಾವ ತಂಡ ಉಳಿಸಿಕೊಳ್ಳುತ್ತದೆ. ಯಾರನ್ನು ಕೈ ಬಿಡುತ್ತದೆ ಎಂಬ ಗೊಂದಲಗಳು ಇನ್ನು ಸಹ ಅಭಿಮಾನಿಗಳ ಮನದಲ್ಲಿ ಹಾಗೇ ಇವೆ.
ಎಲ್ಲ ತಂಡಗಳು ತಾವು ಉಳಿಸಿಕೊಳ್ಳಲು ಬಯಸುವ ಆರು ಆಟಗಾರರನ್ನು ಅಂತಿಮ ಗೊಳಿಸುವ ಕಸರತ್ತು ನಡೆಸಿದ್ದಾರೆ. ಇನ್ನು ಐಪಿಎಲ್ ಹರಾಜಿನಲ್ಲಿ ಮಾಲೀಕರಿಗೆ ರೈಟ್ ಟು ಮ್ಯಾಚ್ ಕಾರ್ಡ್ ಅವಕಾಶ ಸಹ ಸಿಗಲಿದೆ. ಮಾಲೀಕರು ತಮ್ಮ ಥಿಂಕ್ ಟ್ಯಾಂಕ್ ಜೊತೆ ಪದೇ ಪದೇ ಮೀಟಿಂಗ್ ಮಾಡಿದ ಫಲ, ಇನ್ನೇನು ಕೆಲವೇ ಘಂಟೆಗಳಲ್ಲಿ ಎಲ್ಲರ ಮುಂದೆ ಬರಲಿದೆ. ಈ ನಡುವೆ ಮುಂಬೈ ಯಾರನ್ನೆಲ್ಲಾ ಉಳಿಸಿಕೊಳ್ಳಬಹುದು ಎಂಬ ಪ್ರಶ್ನೆಗೆ ಒಂದು ಹಂತದಲ್ಲಿ ಉತ್ತರ ಸಿಕ್ಕಂತೆ ಕಾಣುತ್ತಿದೆ.

ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಮುಂಬೈ ಇಂಡಿಯನ್ಸ್ ಐದು ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಅಂದಹಾಗೆ ಸ್ಟಾರ್ ಆಟಗಾರರೇ ತುಂಬಿ ಕೊಂಡಿರುವ ಈ ತಂಡದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು ಯಾರನ್ನು ಕೈ ಬಿಡಬೇಕು ಎಂಬ ಗೊಂದಲ ನಿಶ್ಚತವಾಗಿಯೂ ಇದ್ದೇ ಇರುತ್ತದೆ. ಮಾಲೀಕರು ಈ ನಿಟ್ಟಿನಲ್ಲಿ ಒಂದು ಹಂತದಲ್ಲಿ ಯಶಸ್ಸು ಕಂಡು ಕೊಂಡಂತೆ ಕಾಣುತ್ತಿದೆ. ಮೊದಲ ಆಯ್ಕೆಯ ಸ್ಟಾರ್ ಆಟಗಾರರಿಗೆ ರೆಡ್ ಕಾರ್ಪೆಟ್ ಹಾಕಲಿದೆ.
ಸದ್ಯ ಮುಂಬೈ ಅಭಿಮಾನಿಗಳಲ್ಲಿ ಇರುವ ದೊಡ್ಡ ಪ್ರಶ್ನೆ ಈ ಬಾರಿ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಯಾರು?. ಈ ಪ್ರಶ್ನೆಗೆ ಮುಂಬೈ ಫ್ರಾಂಚೈಸಿ ತನ್ನ ಮೊದಲ ಆಯ್ಕೆಯ ಆಟಗಾರನ ಮೂಲಕ ಉತ್ತರ ನೀಡುವ ಸಾಧ್ಯತೆ ಇದೆ. ಮುಂಬೈ ಹಾರ್ದಿಕ್ ರನ್ನು ತಮ್ಮ ಮೊದಲ ಆಯ್ಕೆಯ ಆಟಗಾರನಾಗಿ ತಂಡದಲ್ಲಿ ಉಳಿಸಿಕೊಳ್ಳುವುದು ಪಕ್ಕಾ ಎಂಬ ವರದಿಗಳು ಬರುತ್ತಿವೆ. ಇವರಿಗೆ ಮುಂಬೈ 18 ಕೋಟಿ ರೂ. ನೀಡುವ ಸಂಭವವಿದೆ.

ಇನ್ನು ಮುಂಬೈ ಇಂಡಿಯನ್ಸ್ ತಂಡದ ಎರಡನೇ ಆಯ್ಕೆಯ ಆಟಗಾರನಾಗಿ ಜಸ್ಪ್ರಿತ್ ಬುಮ್ರಾ ಅವರನ್ನು ಉಳಿಸಿಕೊಳ್ಳಬಹುದಾಗಿದೆ. ಅಲ್ಲದೆ ಇವರ ಜೇಬಿಗೆ 14 ಕೋಟಿ ರೂ. ಸೇರುವ ಸಾಧ್ಯತೆ ಇದೆ. ಟೀಮ್ ಇಂಡಿಯಾದ ಟಿ20 ಕ್ರಿಕೆಟ್ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಅವರನ್ನು ಸಹ ಮುಂಬೈ ಉಳಿಸಿಕೊಳ್ಳುವುದು ದಟ್ಟವಾಗಿದೆ. ಇವರಿಗೂ ಬುಮ್ರಾಗೆ ನೀಡಿದಷ್ಟೇ ಹಣವನ್ನು ನೀಡಬಹುದಾಗಿದೆ.
ಐಪಿಎಲ್ 2025ರಲ್ಲೂ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗುವ ಸಾಧ್ಯತೆ ಇದೆ. ಇವರು ನಾಲ್ಕನೇ ಆಯ್ಕೆಯ ಆಟಗಾರನಾಗಿ ತಂಡದಲ್ಲಿ ಉಳಿದರೂ ಸಹ ಹಾರ್ದಿಕ್ ಪಾಂಡ್ಯ ಅವರಿಗೆ ಲಭಿಸುವಷ್ಟೇ ಹಣ ಇವರಿಗೂ ಸಿಗಲಿದೆ.
ಇನ್ನು ಮುಂಬೈ ಯಾವ ವಿದೇಶಿ ಪ್ಲೇಯರ್ಗೆ ಮಣೆ ಹಾಕಿದೆ ಎಂಬುದು ಇನ್ನು ಪಕ್ಕಾ ಆಗಿಲ್ಲ. ಇದಕ್ಕೆಲ್ಲಾ ಉತ್ತರ ಗುರುವಾರ ಸಂಜೆಯ ವೇಳೆಗೆ ಸಿಗಲಿದೆ.