ಶುಕ್ರವಾರ, ಮೇ 3ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಸಂಘಟಿತ ಬೌಲಿಂಗ್ ದಾಳಿಗೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತತ್ತರಿಸಿ ಹೋಗಿದೆ.
ಮುಂಬೈ ಪರ ಜಸ್ಪ್ರೀತ್ ಬುಮ್ರಾ ಮತ್ತು ನುವಾನ್ ತುಷಾರ ಅದ್ಭುತ ಸ್ಪೆಲ್ ಮಾಡುವ ಮೂಲಕ ಕೆಕೆಆರ್ ರನ್ ವೇಗಕ್ಕೆ ಬ್ರೇಕ್ ಹಾಕಿದ್ದಾರೆ. ಹೀಗಾಗಿ ನಿಗದಿತ 20 ಓವರ್ಗಳಲ್ಲಿ ವೆಂಕಟೇಶ್ ಅಯ್ಯರ್ ಗಳಿಸಿದ ಅರ್ಧಶತಕದ ನೆರವಿನಿಂದ ಕೆಕೆಆರ್ ಆಲೌಟ್ ಆಗುವ ಮೂಲಕ 169 ರನ್ ಗಳಿಸಲಷ್ಟೆ ಶಕ್ತವಾಯಿತು. ಇದೀಗ ಮುಂಬೈ ಗೆಲುವಿಗೆ 170 ರನ್ಗಳ ಅವಶ್ಯಕತೆ ಇದೆ.

ಮುಂಬೈ ಎದುರು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಕೆಕೆಆರ್ಗೆ ಉತ್ತಮ ಆರಂಭ ಸಿಗಲಿಲ್ಲ. ಕಳೆದ ಪಂದ್ಯಗಳಲ್ಲಿ ಅಬ್ಬರಿಸಿದ್ದ ಫಿಲಿಪ್ ಸಾಲ್ಟ್ ಕೇವಲ 5 ರನ್ಗೆ ನುವಾನ್ ತುಷಾರ ಬೌಲಿಂಗ್ ವಿಕೆಟ್ ಕಳೆದುಕೊಂಡರು. ಬಳಿಕ ಮೂರನೇ ಕ್ರಮಾಂಕದಲ್ಲಿ ಬಂದ ಆಂಗ್ಕ್ರಿಶ್ ರಘುವಂಶಿ (13) ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಎರಡು ಸಿಕ್ಸರ್ ಬಾರಿಸಿ ನುವಾನ್ ತುಷಾರಗೆ ವಿಕೆಟ್ ಒಪ್ಪಿಸಿದರು.
ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬಂದ ನಾಯಕ ಶ್ರೇಯಸ್ ಅಯ್ಯರ್ ಕೂಡ ತಂಡಕ್ಕೆ ಆಸರೆಯಾಗಲಿಲ್ಲ. 6 ರನ್ ಗಳಿಸಿ ನುವಾನ್ ತುಷಾರ ಅವರಿಗೆ ಮೂರನೇ ವಿಕೆಟ್ಯಾಗಿ ಆಟ ನಿಲ್ಲಿಸಿದರು. ಸುನಿಲ್ ನರೈನ್ ಅವರ ಸ್ಪೋಟಕ ಆಟ ಮುಂಬೈ ಬೌಲರ್ಸ್ ಮುಂದೆ ನಡೆಯಲಿಲ್ಲ. ನರೈನ್ ಕೂಡ ಕೇವಲ 8 ರನ್ಗೆ ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಔಟ್ ಆದರು. ರಿಂಕು ಸಿಂಗ್ ಸಹಾ ಕೇವಲ 9 ರನ್ಗಳಿಸಿ ಪಿಯೂಷ್ ಚಾವ್ಲಾ ಅವರಿಗೆ ವಿಕೆಟ್ ನೀಡಿದರು.
ನಂತರ ವೆಂಕಟೇಶ್ ಅಯ್ಯರ್ ಮತ್ತು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೀಳಿದಿದ್ದ ಮನೀಶ್ ಪಾಂಡೆ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು. ಕುಸಿತ ಕೆಕೆಆರ್ ತಂಡವನ್ನು ಮೇಲೆತ್ತಿದ ಈ ಜೋಡಿ ಮುಂಬೈ ಬೌಲರ್ಸ್ ಅನ್ನು ಕಾಡಿದರು. ಅಪರೂಪಕ್ಕೆ ಸಿಕ್ಕ ಅವಕಾಶವನ್ನು ಬಾಚಿಕೊಂಡ ಕನ್ನಡಿಗ ಮನೀಶ್ ಪಾಂಡೆ ಅದ್ಭುತ ಪ್ರದರ್ಶನ ನೀಡಿದರು.
ಮನೀಶ್ ಪಾಂಡೆ ಎದುರಿಸಿದ 31 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗು ಬೌಂಡರಿ ಬಾರಿಸುವ ಮೂಲಕ 42 ರನ್ ಹೊಡೆದು ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ವಿಕೆಟ್ ಕಳೆದುಕೊಂಡರು. ಬಳಿಕ ಬಂದ ಆಂಡ್ರೆ ರಸೆಲ್ ಒಂದು ಸಿಕ್ಸರ್ ಹೊಡೆದು ಬೃಹತ್ ರನ್ ಕಲೆ ಹಾಕುವ ಸಂದೇಶ ನೀಡಿದರು. ಆದರೆ ದುರದೃಷ್ಟಕರ ಆಂಡ್ರೆ ರಸೆಲ್ (7) ರನ್ ಔಟ್ಗೆ ಬಲಿಯಾದರು.
ಇದೇ ವೇಳೆ ರಮಣದೀಪ್ ಸಿಂಗ್ (2), ಮಿಚೆಲ್ ಸ್ಟಾರ್ಕ್ ಶೂನ್ಯಕ್ಕೆ ಔಟ್ ಆದರು.
ಒಂದು ಕಡೆ ವಿಕೆಟ್ ಬೀಳುತ್ತಿದರೆ, ಇನ್ನೊಂದೆಡೆ ಗಟ್ಟಿಯಾಗಿ ನಿಂತು ಹೋರಾಟ ನಡೆಸಿದ ವೆಂಕಟೇಶ್ ಆಯ್ಯರ್ ಕೆಕೆಆರ್ ತಂಡಕ್ಕೆ ನೆರವಾದರು. 52 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿ ಮೂಲಕ 70 ರನ್ ಹೊಡೆದು ಜಸ್ಪ್ರೀತ್ ಬುಮ್ರಾ ಬೌಲಿಂಗ್ ಕ್ಲೀನ್ ಬೌಲ್ಡ್ ಆದರು. ಕೊನೆಯಲ್ಲಿ ವೈಭವ್ ಅರೋರಾ ಯಾವುದೇ ರನ್ ಗಳಿಸದೆ ಅಜೇಯರಾಗುಳಿದರು. ಈ ಮೂಲಕ ಕೆಕೆಆರ್ 169 ರನ್ಗಳಿಗೆ ಆಲೌಟ್ ಆಯಿತು.
ಮುಂಬೈ ಪರ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ ಕಂಡು ಬಂತು. ಜಸ್ಪ್ರೀತ್ ಬುಮ್ರಾ ಮತ್ತು ನುವಾನ್ ತುಷಾರ 3 ವಿಕೆಟ್ ಪಡೆದುಕೊಂಡರು. ಆದರೆ ಜಸ್ಪ್ರೀತ್ ಬುಮ್ರಾ ಉತ್ತಮ ಸ್ಪೆಲ್ ಮಾಡಿದರು. ನಾಯಕ ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಪಿಯೂಷ್ ಚಾವ್ಲಾ 1 ವಿಕೆಟ್ ಉರಳಿಸಿದರು.