ಶುಕ್ರವಾರ ರಾತ್ರಿ ಭಾರತ ತಂಡದ ಬ್ಯಾಟರ್ ಸರ್ಫರಾಜ್ ಖಾನ್ ಅವರ ಕಿರಿಯ ಸಹೋದರ ಮತ್ತು ಅವರ ತಂದೆ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದರು. ಮುಶೀರ್ ಖಾನ್ ಕಾರು ಅಪಘಾತದ ನಂತರ, ಅವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಭಾರತೀಯ ಕ್ರಿಕೆಟ್ ಅಭಿಮಾನಿಗಳು ತುಂಬಾ ಕುತೂಹಲಗೊಂಡಿದ್ದರು.
ಅಪಘಾತದ ವೇಳೆ ಮುಶೀರ್ ಅವರ ಕುತ್ತಿಗೆಗೆ ಗಾಯವಾಗಿದ್ದು, ಅವರ ತಂದೆಗೂ ಸಣ್ಣ ಪುಟ್ಟ ಗಾಯಗಳು ಆಗಿದ್ದವು. ಇದೀಗ ಮುಶೀರ್ ಮತ್ತು ಅವರ ತಂದೆ ನೌಶಾದ್ ಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ತಾವು ಸಂಪೂರ್ಣವಾಗಿ ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಮುಶೀರ್ ಖಾನ್ ಕುತ್ತಿಗೆಗೆ ಕಟ್ಟುಪಟ್ಟಿ ಧರಿಸಿಕೊಂಡು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಇರಾನಿ ಕಪ್ ಪಂದ್ಯವನ್ನು ಆಡಲು ಸಾಧ್ಯವಾಗದೇ ಇರುವುದಕ್ಕೆ ಕೂಡ ವಿಷಾದ ವ್ಯಕ್ತಪಡಿಸಿದ್ದಾರೆ.
'ಈ ಹೊಸ ಜೀವನಕ್ಕಾಗಿ ನಾನು ಮೊದಲು ದೇವರಿಗೆ ಧನ್ಯವಾದ ಹೇಳುತ್ತೇನೆ. ನಮಗಾಗಿ ಪ್ರಾರ್ಥಿಸಿದ ಹಿತೈಷಿಗಳು, ಸ್ನೇಹಿತರು, ಆತ್ಮೀಯರಿಗೂ ಧನ್ಯವಾದಗಳು. ಇದಲ್ಲದೆ, ಎಂಸಿಎ ಮತ್ತು ಬಿಸಿಸಿಐಗೆ ವಿಶೇಷ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ' ಎಂದು ನೌಶಾದ್ ಖಾನ್ ವಿಡಿಯೋದಲ್ಲಿ ಮಾತನಾಡಿದ್ದಾರೆ.
ಇದಾದ ಬಳಿಕ ಮಾತನಾಡಿರುವ ಮುಶೀರ್, 'ನನಗೆ ಹೊಸ ಬದುಕು ಸಿಕ್ಕಿದೆ. ಸದ್ಯಕ್ಕೆ ನಾನು ಆರೋಗ್ಯವಾಗಿದ್ದೇನೆ. ನನ್ನ ಜೊತೆಗಿದ್ದ ನನ್ನ ತಂದೆಯೂ ಆರೋಗ್ಯವಾಗಿದ್ದಾರೆ. ನಿಮ್ಮ ಶುಭ ಹಾರೈಕೆಗಳಿಗೆ ಎಲ್ಲರಿಗೂ ಧನ್ಯವಾದಗಳು; ಎಂದಿದ್ದಾರೆ.
ಅಕ್ಟೋಬರ್ 1 ರಿಂದ 5 ರವರೆಗೆ ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಮುಂಬೈ ಮತ್ತು ರೆಸ್ಟ್ ಆಫ್ ಇಂಡಿಯಾ ನಡುವೆ ಇರಾನಿ ಕಪ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಶುಕ್ರವಾರ ತಡರಾತ್ರಿ ಮುಶೀರ್ ಖಾನ್ ಅವರು ತಮ್ಮ ತಂದೆಯೊಂದಿಗೆ ಕಾರಿನಲ್ಲಿ ಲಕ್ನೋಗೆ ಪ್ರಯಾಣಿಸುವಾಗ ಹೈವೇಯಲ್ಲಿ ಅಪಘಾತಕ್ಕೀಡಾಗಿದ್ದರು. ಈ ಪಂದ್ಯವನ್ನು ಆಡಲು ಅವರು ತಮ್ಮ ತಂದೆಯೊಂದಿಗೆ ಕಾರಿನಲ್ಲಿ ಲಕ್ನೋಗೆ ಬರುತ್ತಿದ್ದರು. ರಸ್ತೆಯಲ್ಲಿ ಕಾರು 4-5 ಬಾರಿ ಪಲ್ಟಿಯಾಗಿದ್ದು, ಮುಶೀರ್ಗೆ ಗಂಭೀರ ಗಾಯಗಳಾಗಿದ್ದವು.
ಘಟನೆ ಬಳಿಕ ಮುಶೀರ್ ಅವರನ್ನು ಲಕ್ನೋದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಗಾಯಗೊಂಡಿರುವ ಕಾರಣ ಅವರು ಕನಿಷ್ಠ ಮೂರು ತಿಂಗಳ ಕಾಲ ಮೈದಾನದಿಂದ ಹೊರಗುಳಿಯಲಿದ್ದಾರೆ. ಮುಶೀರ್ ಖಾನ್ ಅವರ ಕುಟುಂಬವು ಮೂಲತಃ ಉತ್ತರ ಪ್ರದೇಶದ ಅಜಂಗಢ್ನ ಸಗ್ರಿ ತೆಹಸಿಲ್ನ ಬಸುಪರ್ ಗ್ರಾಮದವರು. ಅಲ್ಲಿ ಮುಶೀರ್ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಇದೀಗ ಮುಶೀರ್ ಸಂಪೂರ್ಣ ಅಪಾಯದಿಂದ ಪಾರಾಗಿದ್ದಾರೆ.