
ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾಕ್ಕೆ ಅನುಭವಿ ಬ್ಯಾಟ್ಸ್ಮನ್ ಶಿಖರ್ ಧವನ್ ನಾಯಕನಾಗಿದ್ದರೆ, ಉಪನಾಯನಾಗಿ ವೇಗಿ ಭುವನೇಶ್ವರ್ ಕುಮಾರ್ ಇದ್ದಾರೆ. ತಂಡದ ಉಪನಾಯಕನಾಗಿ ಇತರರಿಗೆ ಅವರ ಕೌಶಲ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ ನೆರವು ನೀಡೋದು ನನ್ನ ಕೆಲಸ ಎಂದು ಭುವನೇಶ್ವರ್ ಹೇಳಿದ್ದಾರೆ.
ಭಾರತ-ಶ್ರೀಲಂಕಾ ಸರಣಿ ಜುಲೈ 13ರಿಂದ ಆರಂಭಗೊಳ್ಳಲಿದೆ. ಪ್ರವಾಸವು ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಐ ಪಂದ್ಯಗಳನ್ನು ಒಳಗೊಂಡಿರಲಿದೆ. ಜುಲೈ 13ರಂದು ಏಕದಿನ ಸರಣಿಯೊಂದಿಗೆ ಆರಂಭಗೊಳ್ಳುವ ಪ್ರವಾಸ ಜುಲೈ 25ಕ್ಕೆ ಕೊನೆಗೊಳ್ಳಲಿದೆ.
"ಹೌದು, ನಾನು ಉಪನಾಯಕ ಜವಾಬ್ದಾರಿಯಲ್ಲಿದ್ದೇನೆ. ಅಂದಮಾತ್ರಕೆ ವಿಚಾರಗಳು ಬದಲಾಗಿದೆ ಎಂದು ನಾನಂದುಕೊಳ್ಳಲಾರೆ. ಒಬ್ಬ ಹಿರಿಯ ಆಟಗಾರನಾಗಿ ನಾನು ಇತರರ ಕೌಶಲ ಹೆಚ್ಚಿಸಲು ಮತ್ತು ಅವರ ಮಾನಸಿಕ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುತ್ತೇನೆ," ಎಂದು ಸ್ಟಾರ್ ಸ್ಪೋರ್ಟ್ಸ್ ಜೊತೆ ಭುವನೇಶ್ವರ್ ಕುಮಾರ್ ಹೇಳಿದ್ದಾರೆ.
ಭಾರತ ಪರ 117 ಏಕದಿನ ಪಂದ್ಯಗಳಲ್ಲಿ ಭುವಿ 138 ವಿಕೆಟ್ ದಾಖಲೆ ಹೊಂದಿದ್ದಾರೆ. ಭಾರತದ ಎಂದಿನ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಅಲ್ಲಿ ಭಾರತ-ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಆಗಸ್ಟ್ 4ರಿಂದ ಈ ಸರಣಿ ಆರಂಭಗೊಳ್ಳಲಿದೆ. ಹೀಗಾಗಿ ಶ್ರೀಲಂಕಾ ಪ್ರವಾಸದಲ್ಲಿರುವ ತಂಡಕ್ಕೆ ಧವನ್ ನಾಯಕನಾಗಿ, ಭುವಿ ಉಪನಾಯಕರಾಗಿ ಜವಾಬ್ದಾರಿ ಹೊತ್ತಿದ್ದಾರೆ.