
ಚೆನ್ನೈ: ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ಟೆಸ್ಟ್ ತಂಡದ ನಾಯಕರಾಗಿ ಸರಣಿ ಜಯಿಸಿ ಭಾರತೀಯರ ಮನ ಗೆದ್ದಿದ್ದ ಅಜಿಂಕ್ಯ ರಹಾನೆ ಮುಂಬರಲಿರುವ ಭಾರತ-ಇಂಗ್ಲೆಂಡ್ ಸರಣಿಯಲ್ಲಿ ಹಿಂದಿನ ಸೀಟಲ್ಲಿ ಕೂತು ನಾಯಕ ವಿರಾಟ್ ಕೊಹ್ಲಿಗೆ ನೆರವು ನೋಡುತ್ತೇನೆ. ಅದೇ ನನ್ನ ಕೆಲಸ ಎಂದಿದ್ದಾರೆ.
ಇತ್ತೀಚೆಗಷ್ಟೇ ಕೊನೆಗೊಂಡ ಭಾರತ-ಆಸ್ಟ್ರೇಲಿಯಾ ಸರಣಿಯ ಆರಂಭಿಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಆಡಿದ್ದರು. ಆ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿತ್ತು (ದ್ವಿತೀಯ ಇನ್ನಿಂಗ್ಸ್ನಲ್ಲಿ ಕೇವಲ 36 ರನ್ ಗಳಿಸಿದ್ದ ಭಾರತ). ಆದರೆ ಮುಂದಿನ ಮೂರು ಪಂದ್ಯಗಳಲ್ಲಿ ಕೊಹ್ಲಿ ಆಡದೆ ಪಿತೃತ್ವ ರಜೆ ಪಡೆದುಕೊಂಡು ಭಾರತಕ್ಕೆ ಬಂದಿದ್ದರು.
ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದ ಅಜಿಂಕ್ಯ ರಹಾನೆ ಅತ್ಯುತ್ತಮ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸಿದ್ದರು. ಪರಿಣಾಮವಾಗಿ ಮುಂದಿನ ಮೂರು ಟೆಸ್ಟ್ ಪಂದ್ಯಗಳಲ್ಲಿ ಭಾರತ 1 ಪಂದ್ಯ ಡ್ರಾ ಮಾಡಿ, 2 ಪಂದ್ಯಗಳಲ್ಲಿ ಗೆದ್ದು ಸರಣಿಯನ್ನೇ ವಶವಾಗಿಸಿಕೊಂಡಿತ್ತು. ಇದೇ ಕಾರಣಕ್ಕಾಗಿ ನಾಯಕತ್ವದ ಬಗ್ಗೆ ಚರ್ಚೆ ಶುರುವಾಗಿದೆ.
ನಾಯಕತ್ವದ ಬಗೆಗಿನ ಚರ್ಚೆ ಪ್ರತಿಕ್ರಿಯಿಸಿರುವ ರಹಾನೆ, 'ನಾನು ಹಿಂದಿನ ಸೀಟಿನಲ್ಲಿ ಕೂತುಕೊಳ್ಳುತ್ತೇನೆ. ಯಾವಾಗ ಅಗತ್ಯ ಬೀಳುತ್ತೋ ಅಥವಾ ಯಾವಾಗ ಏನಾನಾದರೂ ಕೊಹ್ಲಿ ಕೇಳುತ್ತಾನೋ ನಾನದಕ್ಕೆ ಉತ್ತರಿಸುತ್ತೇನೆ. ವೈಯಕ್ತಿಕವಾಗಿ ಮತ್ತು ಸಾಮಾನ್ಯವಾಗಿ ಹೇಳೋದಾದ್ರೆ ಉಪನಾಯಕನಾಗಿ ನಾನು ಹಿಂದಿನ ಸೀಟಿನಲ್ಲಿ ಕೂರಬಯಸುತ್ತೇನೆ,' ಎಂದಿದ್ದಾರೆ.