ಮಹಾರಾಜ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ 28 ರನ್ಗಳಿಂದ ಶಿವಮೊಗ್ಗ ಲಯನ್ಸ್ ತಂಡವನ್ನು ಮಣಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 179 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಶಿವಮೊಗ್ಗ ಲಯನ್ಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 151 ರನ್ ಕಲೆ ಹಾಕಿ ಸೋಲು ಕಂಡಿತು. ಈ ಗೆಲುವಿನ ಮೂಲಕ ಮೈಸೂರು ತಂಡ ಆಡಿದ ಆರು ಪಂದ್ಯಗಳಲ್ಲಿ ನಾಲ್ಕು ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆಯಿತು.

ಮೈಸೂರು ತಂಡದ ಪರ ಆರಂಭಿಕ ಎಸ್ಯು ಕಾರ್ತಿಕ್ (8) ರನ್ ಕಲೆ ಹಾಕುವಲ್ಲಿ ವಿಫಲರಾದರು. ಇನ್ನೋರ್ವ ಆರಂಭಿಕ ಅಜಿತ್ ಕಾರ್ತಿಕ್ 23 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ನೆರವಿನಿಂದ 30 ರನ್ ಸಿಡಿಸಿ ತಂಡಕ್ಕೆ ನೆರವಾದರು.
ಇನ್ನು ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಮೈಸೂರು ನಾಯಕ ಕರುಣ್ ನಾಯರ್ ಈ ಪಂದ್ಯದಲ್ಲೂ ಮುಂದುವರೆಸಿದರು. ಇವರು 23 ಎಸೆತಗಳಲ್ಲಿ 45 ರನ್ ಬಾರಿಸಿದರು. ಇವರ ಅಮೋಘ ಇನಿಂಗ್ಸ್ನಲ್ಲಿ 6 ಬೌಂಡರಿ, 2 ಸಿಕ್ಸರ್ ಸೇರಿವೆ. ಉಳಿದಂತೆ ಕಿಶನ್ ಬೆದಾರೆ (17), ಸುಮಿತ್ ಕುಮಾರ್ (28), ಮನೋಜ್ ಭಂಡಾರೆ (23) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಆಲ್ರೌಂಡರ್ ಜೆ.ಸುಚಿತ್ ಸಹ ಕೇವಲ 8 ಎಸೆತಗಳಲ್ಲಿ 22 ರನ್ ಸಿಡಿಸಿದರು. ಶಿವಮೊಗ್ಗ ಪರ ಎಚ್ಎಸ್ ಶರತ್ 4 ವಿಕೆಟ್ ಕಬಳಿಸಿದರು.
ಗುರಿಯನ್ನು ಹಿಂಬಾಲಿಸಿದ ಶಿವಮೊಗ್ಗ ತಂಡಕ್ಕೆ, ಮೈಸೂರು ವೇಗಿಗಳು ಕಾಟ ನೀಡಿದರು. ಮೊದಲ ಓವರ್ನಲ್ಲೇ ವಿದ್ಯಾಧರ್ ಪಾಟೀಲ್ ಎರಡು ವಿಕೆಟ್ ಕಬಳಿಸಿದರು. ಈ ಪೆಟ್ಟಿನ ಬಳಿಕ ಶಿವಮೊಗ್ಗ ತಂಡ ಚೇತರಿಸಿಕೊಳ್ಳಲು ಸಮಯ ಹಿಡಿಯಿತು. ನಾಯಕ ನಿಹಾಲ್ ಉಲ್ಲಾಳ ಹಾಗೂ ಭರವಸೆಯ ಆಟಗಾರ ಅಭಿನವ್ ಮನೋಹರ್ ತಂಡವನ್ನು ಅಪಾಯದಿಂದ ಮೇಲತ್ತುವ ತಯಾರಿ ನಡೆಸಿದರು. ಐದನೇ ವಿಕೆಟ್ಗೆ ಈ ಜೋಡಿ 70 ರನ್ಗಳ ಕಾಣಿಕೆ ನೀಡಿತು. ನಿಹಾಲ್ ಹಾಗೂ ಅಭಿನವ್ ಇಬ್ಬರೂ 46 ರನ್ ಸಿಡಿಸಿದರು. ಉಳಿದ ಬ್ಯಾಟರ್ಗಳು ಜವಾಬ್ದಾರಿ ಮರೆತರು.
ಮೈಸೂರು ತಂಡದ ಪರ ವಿದ್ಯಾಧರ್ ಪಾಟೀಲ್, ಅಜಿತ್ ಕಾರ್ತಿಕ್ ತಲಾ ಮೂರು ವಿಕೆಟ್ ಕಬಳಿಸಿ ಜಯದಲ್ಲಿ ಮಿಂಚಿದರು.