
ಮೈಸೂರು, ಆಗಸ್ಟ್ 21: ಕ್ರಿಕೆಟ್ ಬಗ್ಗೆ ಅತೀವ ಪ್ರೀತಿ ಹಾಗೂ ಆಸಕ್ತಿ ಹೊಂದಿದ್ದ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಗಂಗೋತ್ರಿ ಗ್ಲೈಡ್ಸ್ (ಶ್ರೀಕಂಠದತ್ತ ನರಸಿಂಹರಾಜ ಒಡೆಯರ್) ಮೈದಾನದಲ್ಲಿ ಈ ಬಾರಿ ಆಗಸ್ಟ್ 25ರಿಂದ 2019ರ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಪಂದ್ಯಗಳು ಆರಂಭಗೊಳ್ಳಲಿವೆ. ಟೂರ್ನಿಯ ಆರಂಭಿಕ ಪಂದ್ಯಗಳು ಸದ್ಯ ಬೆಂಗಳೂರಿನಲ್ಲಿ ನಡೆಯುತ್ತಿವೆ.
ಕೆಪಿಎಲ್ ಪ್ರಮುಖ ತಾಣಗಳಲ್ಲಿ ಮೈಸೂರು ಒಂದಾಗಿರುವುದರಿಂದ, ಆಗಸ್ಟ್ 25ರಿಂದ ಇಲ್ಲಿ ಪಂದ್ಯಗಳು ನಡೆಯಲಿರುವುದರಿಂದ ಸ್ಥಳೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಈ ಕ್ರಿಕೆಟ್ ಜಾತ್ರೆಯಲ್ಲಿ ಹಲವಾರು ಸ್ಥಳಿಯ ಆಟಗಾರರು ಸ್ಥಾನ ಪಡೆದಿದ್ದಾರೆ. ಮೈಸೂರಿನಲ್ಲಿನ ಮೊದಲ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ಮತ್ತು ಶಿವಮೊಗ್ಗ ಲಯನ್ಸ್ ಕಾದಾಡಲಿವೆ.
ಹಚ್ಚ ಹಸಿರಿನಿಂದ ಕಂಗೊಳಿಸುವ ಗಂಗೋತ್ರಿ ಗ್ಲೇಡ್ಸ್ ಮೈದಾನವನ್ನು ಕೆಪಿಎಲ್ ಪಂದ್ಯದ ಹಿನ್ನೆಲೆಯಲ್ಲಿ ಸಜ್ಜುಗೊಳಿಸಲಾಗುತ್ತಿದೆ. ಹೊನಲು ಬೆಳಕಿನ ಪಂದ್ಯವಾದ್ದರಿಂದ ಕ್ರೀಡಾಂಗಣದ ಸುತ್ತ ನಾಲ್ಕು ಕಡೆ ಫ್ಲಡ್ ಲೈಟ್ ಅಳವಡಿಸಲಾಗಿದೆ. ಬ್ಯಾಟ್ಸ್ಮನ್ ಹಾಗೂ ಬೌಲರ್ ತುದಿಯಲ್ಲಿ ಸೈಟ್ ಸ್ಕ್ರೀನ್ ಅಳವಡಿಸಲಾಗಿದೆ. ಮೈದಾನದ ಸುತ್ತಲೂ ಕುಳಿತುಕೊಳ್ಳಲು ಝಿಂಕ್ ಶೀಟ್ಗಳ ಹೊದಿಕೆ ಇರುವ ಶೆಲ್ಟರ್ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ 8,000 ಮಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ.
ಟೂರ್ನಿ ನಿಮಿತ್ತ ಆನ್ ಲೈನ್ ನಲ್ಲಿ ಈಗಾಗಲೇ ಟಿಕೆಟ್ ಮಾರಾಟ ಆರಂಭವಾಗಿವೆ. ಗಂಗೋತ್ರಿಯ ಕ್ಲಾಕ್ ಟವರ್ ಬಳಿ ಆಗಸ್ಟ್ 23ರಿಂದ ಟಿಕೆಟ್ ವಿತರಣೆ ನಡೆಯಲಿದೆ. ಈಗಾಗಲೇ ಆನ್ಲೈನ್ನಲ್ಲಿ ಸಾಕಷ್ಟು ಮಂದಿ 50, 100, 300 ರೂ. ಟಿಕೆಟ್ ಖರೀದಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಇನ್ನು ಕ್ರೀಡಾಂಗಣಕ್ಕೆ ಇಳಿದ ಯಂತ್ರಗಳು ಪಿಚ್ ಸಿದ್ಧಪಡಿಸುವಲ್ಲಿ ತೊಡಗಿವೆ. ಗ್ರಾಸ್ ಕಟರ್, ಪಿಚ್ ಮೂವರ್, ರೋಲ್ ಡಿಪ್ಪಿಂಗ್ ಯಂತ್ರಗಳು ಮೈದಾನವನ್ನು ಸಜ್ಜುಗೊಳಿಸುತ್ತಿವೆ. ಅಲ್ಲದೆ ಮಳೆ ಬಂದರೆ ಕ್ರೀಡಾಂಗಣಕ್ಕೆ ನೀರು ಇಳಿಯದಂತೆ ಪಿಚ್ ಕವರ್ ಹಾಗೂ ಔಟ್ ಸೀಲ್ಡ್ ಕವರ್ ವ್ಯವಸ್ಥೆ ಕೂಡ ಮಾಡಲಾಗಿದೆ. ಭದ್ರತೆಗಾಗಿ 100 ಮಂದಿ ಪೊಲೀಸ್ ಸಿಬ್ಬಂದಿ, 25ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 12ಕ್ಕೂ ಹೆಚ್ಚು ಸಿಸಿಟಿವಿ ಕಣ್ಗಾವಲು ಕಾಯಲಿವೆ.